ಕಾನೂನು ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಸವಾಲುಗಳಿಗೆ ಸಿದ್ಧರಾಗಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಪ್ರಸ್ತುತ ವಕೀಲ ವೃತ್ತಿಗೆ ಪ್ರವೇಶ ಮಾಡುವವರೂ ಹೊಸತನಕ್ಕೆ ಹೊಂದಿಕೊಳ್ಳಬೇಕು ಎಂದು ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಕೆ.ವಿ. ಅರವಿಂದ್‌ ತಿಳಿಸಿದರು.

ಕುವೆಂಪುನಗರದಲ್ಲಿರುವ ಜೆಎಸ್‌ಎಸ್‌ ಕಾನೂನು ಕಾಲೇಜಿನಲ್ಲಿ ಚೆನ್ನೈನ ಸುರಾನ ಮತ್ತು ಸುರಾನ ಅಂತಾರಾಷ್ಟ್ರೀಯ ಅಟಾರ್ನಿಸ್‌ ಸಂಸ್ಥೆ ಭಾನುವಾರ ಆಯೋಜಿಸಿದ್ದ 23ನೇ ಕಾರ್ಪೋರೇಟ್‌ ಕಾನೂನು ಅಣುಕು ನ್ಯಾಯಾಲಯ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಾನೂನು ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಸವಾಲುಗಳಿಗೆ ಸಿದ್ಧರಾಗಬೇಕು. ಈಗಂತೂ ಮಾತಿನ ವಾದ ಮಾತ್ರ ಸಾಕಾಗುವುದಿಲ್ಲ. ತಂತ್ರಜ್ಞಾನ, ಕೌಶಲ್ಯ ಸಹ ಅಗತ್ಯ. ಜೊತೆಗೆ ವೃತ್ತಿಪರ ಚಿಂತನೆ, ಮನೋಭಾವ ಹಾಗೂ ವರ್ತನೆಯಲ್ಲಿ ಬದಲಾವಣೆಯೂ ಅಗತ್ಯ ಎಂದು ಅವರು ಹೇಳಿದರು.

ಉತ್ತಮ ವಕೀಲರಾಗಲು ಸಂಕೀರ್ಣ ವಿಷಯಗಳನ್ನು ಸರಳವಾಗಿ ವಿವರಿಸುವ ಸಾಮರ್ಥ್ಯ ಅಗತ್ಯ. ಭಾಷೆಯಲ್ಲಿ ನಿಖರತೆ, ವಾದದಲ್ಲಿ ಸರಿಯಾದ ರಚನೆ ಮತ್ತು ಪ್ರಸ್ತುತ ಪಡಿಸುವಾಗ ಸಂಕ್ಷಿಪ್ತತೆ ಬೆಳೆಸಿಕೊಳ್ಳಬೇಕು. ಇದರ ಜೊತೆಗೆ ಕುತೂಹಲ ಬಹಳ ಮುಖ್ಯ. ಪ್ರಶ್ನಿಸುವುದನ್ನು ರೂಢಿಸಿಕೊಳ್ಳಬೇಕು. ಈ ಪ್ರಶ್ನೆಗಳು ನಿಜವಾದ ಅರಿವಿಗೆ ದಾರಿ ಮಾಡಿಕೊಡುತ್ತವೆ. ಶಿಸ್ತು ಹಾಗೂ ಸಂಶೋಧನೆಯೂ ವಕೀಲರಿಗೆ ಆತ್ಮವಿಶ್ವಾಸ ನೀಡುತ್ತದೆ ಎಂದರು.

ಕಾನೂನು ವೃತ್ತಿಯು ವರ್ಷಗಳಿಂದಿಚೀಗೆ ಗಮನಾರ್ಹವಾಗಿ ರೂಪಾಂತರಗೊಂಡಿದೆ. ಒಂದು ಕಾಲದಲ್ಲಿ ಇತರ ಆಯ್ಕೆಗಳು ಇಲ್ಲದಿದ್ದಾಗ ಮಾತ್ರ ಕಾನೂನು ವೃತ್ತಿ ಆಯ್ಕೆ ಮಾಡಲಾಗುತ್ತಿತ್ತು. ಅಂತಹ ಕಾಲ ಈಗ ಇಲ್ಲ. ಇಂದಿನ ದಿನಗಳಲ್ಲಿ ವ್ಯಾಪಕತೆ, ಅವಕಾಶಗಳು ಮತ್ತು ಮಹತ್ವದಿಂದಾಗಿ ಕಾನೂನು ಮೊದಲ ಆಯ್ಕೆಯಾಗಿ ಪರಿಗಣಿಸಲಾಗುತ್ತಿದೆ. ಈ ವೃತ್ತಿಯೂ ಪರಂಪರಗತ ನ್ಯಾಯಾಂಗ ವಾದ- ವಿವಾದಗಳಿಗೆ ಮಾತ್ರ ಸೀಮಿತವಾಗಿಲ್ಲ. ಆಧುನಿಕ ತಂತ್ರಜ್ಞಾನ ಮತ್ತು ಎಐ ಅಭಿವೃದ್ಧಿಯಿಂದ ಕಾನೂನು ವೃತ್ತಿಪರರಿಗೆ ಸಂಶೋಧನೆ, ಕರಡು ಬರವಣಿಗೆ, ಪ್ರಕರಣ ವಿಶ್ಲೇಷಣೆ ಮತ್ತು ತಂತ್ರ ರೂಪಿಸಲು ಹಲವಾರು ಉಪಕರಣಗಳು ಲಭ್ಯವಿವೆ ಎಂದು ಅವರು ವಿವರಿಸಿದರು.

ಬೆಂಗಳೂರಿನ ಹಿರಿಯ ವಕೀಲ ಟಿ. ಸೂರ್ಯನಾರಾಯಣ, ಸುರಾನ ಮತ್ತು ಸುರಾನ ಅಂತಾರಾಷ್ಟ್ರೀಯ ಅಟಾರ್ನಿಸ್‌ ಸಂಸ್ಥೆಯ ಪ್ರೀತಂ ಸುರಾನಾ, ಸಿಜಿಎಸ್ಟಿ ಉಪ ಆಯುಕ್ತೆ ಎನ್‌. ಮಂಜುಳಾ, ಜೆಎಸ್ಎಸ್ ಕಾನೂನು ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಕೆ.ಎಸ್‌. ಸುರೇಶ್‌, ಪ್ರಾಂಶುಪಾಲೆ ಡಾ.ಎನ್‌. ವಾಣಿಶ್ರೀ ಇದ್ದರು.