ಸಾರಾಂಶ
ಸಾಧನೆಗೆ ಬಡತನ ಮತ್ತು ಹಳ್ಳಿಗಾಡಿನ ವಾತಾವರಣ ಅಡ್ಡಿ ಆಗುವುದಿಲ್ಲ ಎಂದು ತೋರಿಸುವ ಮೂಲಕ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವ
ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಶಿಕ್ಷಣದಿಂದ ಸರ್ವವನ್ನು ಸಾಧಿಸಬಹುದು ಎಂದು ತೋರಿಸಿಕೊಟ್ಟಿರುವ ನಮ್ಮೂರಿನ ಹೆಣ್ಣು ಮಗಳಾದ ಎ.ಸಿ. ಪ್ರೀತಿ ಸಾಧಕರಿಗೆ ಮಾದರಿ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದರು.ಯುಪಿಎಸ್ಸಿ ಪರೀಕ್ಷೆಯಲ್ಲಿ 263ನೇ ರ್ಯಾಂಕ್ ಪಡೆದ ಸಾಲಿಗ್ರಾಮ ತಾಲೂಕಿನ ಅಂಕನಹಳ್ಳಿ ಗ್ರಾಮದ ಚನ್ನಬಸಪ್ಪ ಮತ್ತು ನೇತ್ರಾವತಿ ಅವರ ಪುತ್ರಿ ಎ.ಸಿ. ಪ್ರೀತಿ ಅವರಿಗೆ ಕೆ.ಆರ್. ನಗರದ ತಮ್ಮ ನಿವಾಸದಲ್ಲಿ ಕುಟುಂಬದ ವತಿಯಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿದರು.
ಸಾಧನೆಗೆ ಬಡತನ ಮತ್ತು ಹಳ್ಳಿಗಾಡಿನ ವಾತಾವರಣ ಅಡ್ಡಿ ಆಗುವುದಿಲ್ಲ ಎಂದು ತೋರಿಸುವ ಮೂಲಕ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಸರ್ಕಾರಿ ಶಾಲೆ ಮತ್ತು ಕಾಲೇಜಿನಲ್ಲಿ ಪೂರೈಸಿ ದೇಶದ ಪರಮೋಚ್ಚ ಸ್ಪರ್ಧಾತ್ಮಕ ಪರೀಕ್ಷೆಯಾಗಿರುವ ಯು.ಪಿ.ಎಸ್.ಸಿಯಲ್ಲಿ ತೇರ್ಗಡೆಯಾಗಿ ಹುಟ್ಟೂರು, ಪೋಷಕರು ಕಲಿಸಿದ ಶಿಕ್ಷಕರು ಮತ್ತು ತಾಲೂಕಿಗೆ ಕೀರ್ತಿ ತಂದಿರುವ ಇವರ ಸಾಧನೆ ಇತರ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿ ಎಂದು ಪ್ರಶಂಸಿಸಿದರು.ದೇಶದ ಬೆಳವಣಿಗೆಯಲ್ಲಿ ಅಕ್ಷರ ಮತ್ತು ಆರೋಗ್ಯ ಅತ್ಯಂತ ಪ್ರಮುಖವಾಗಿದ್ದು ಅವೆರಡು ದೊರೆತರೆ ಸಾಮಾನ್ಯ ವಿದ್ಯಾರ್ಥಿಗಳು ಮುಗಿಲೆತ್ತರದ ಸಾಧನೆ ಮಾಡಬಹುದಾಗಿದ್ದು, ಆಳುವ ಸರ್ಕಾರಗಳು ಈ ವಿಚಾರದ ಬಗ್ಗೆ ಗಂಭೀರವಾಗಿ ಗಮನಹರಿಸಬೇಕು ಎಂದು ಅವರು ಸಲಹೆ ನೀಡಿದರು.
ಸಾಧಕ ವಿದ್ಯಾರ್ಥಿಗಳಿಗೆ ಪೋಷಕರ ಜತೆಗೆ ಸಾರ್ವಜನಿಕರು ಉತ್ತೇಜನ ನೀಡಿ ಪ್ರೋತ್ಸಾಹ ನೀಡಿದರೆ ಅವರು ಸಮಾಜಕ್ಕೆ ಅನುಕೂಲವಾಗುವಂತಹ ಕೆಲಸ ಮಾಡಲಿದ್ದು ಪ್ರತಿಯೊಬ್ಬರು ತಮ್ಮ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಅವರ ಬೆನ್ನೆಲುಬಾಗಿ ನಿಲ್ಲಬೇಕು ಎಂದು ಕಿವಿಮಾತು ಹೇಳಿದರು.ಈ ವೇಳೆ ಎಚ್. ವಿಶ್ವನಾಥ್, ಶಾಂತಮ್ಮ ವಿಶ್ವನಾಥ್ ಮತ್ತು ಕುಟುಂಬಸ್ಥರು ಹಾಗೂ ಅವರ ಪೋಷಕರನ್ನು ಆತ್ಮೀಯವಾಗಿ ಅಭಿನಂದಿಸಿ ನೆನಪಿ ಕಾಣಿಕೆ ನೀಡಿ ಗೌರವಿಸಿದರು.
ಜಿಪಂ ಮಾಜಿ ಉಪಾಧ್ಯಕ್ಷ ಎ.ಎಸ್. ಚನ್ನಬಸಪ್ಪ, ಖ್ಯಾತ ಮೂಳೆ ತಜ್ಞ ಡಾ. ಮೆಹಬೂಬ್ ಖಾನ್, ತಾಲೂಕು ಜೆಡಿಎಸ್ ವಕ್ತಾರ ಕೆ.ಎಲ್. ರಮೇಶ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ಡಿ. ನಟರಾಜು, ಪದಾಧಿಕಾರಿಗಳಾದ ಜಿ.ಜೆ. ಮಹೇಶ್, ಸಿ.ಎಂ. ಅಣ್ಣಯ್ಯ, ಬಿ.ಎಲ್. ಮಹದೇವ್, ಮಧುಕುಮಾರ್, ಶಂಕರೇಗೌಡ, ಡಾ. ಹರೀಶ್, ರಾಜಶೇಖರ್, ಕೆ.ಎಸ್. ಸತೀಶ್ ಕುಮಾರ್, ತಾಲೂಕು ಕಸಾಪ ಅಧ್ಯಕ್ಷ ಡಿಂಡಿಮ ಶಂಕರ್, ತಾಲೂಕು ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಸ್. ರಾಮಲಿಂಗು, ತಾಲೂಕು ರೈತ ವೇದಿಕೆ ಅಧ್ಯಕ್ಷ ರಾಮಪ್ರಸಾದ್, ಸರ್ವೋದಯ ಪಕ್ಷದ ಅಧ್ಯಕ್ಷ ಗರುಡಗಂಭ ಸ್ವಾಮಿ, ನಂಜನಗೂಡು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ. ದೀಪು, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಉಪಾಧ್ಯಕ್ಷೆ ಸುನೀತಾ ರಮೇಶ್ ಮೊದಲಾದವರು ಇದ್ದರು.