ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆ ಅರ್ಬನ್ ಓಯಾಸಿಸ್ ಮಾಲ್ನಲ್ಲಿ ಸಹಜ ಸಮೃದ್ಧಿ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಮೂರು ದಿನಗಳ ಹಲಸು ಮೇಳಕ್ಕೆ ಶುಕ್ರವಾರ ಚಾಲನೆ ದೊರೆಯಿತು.
ಹಲಸು ಮೇಳದಲ್ಲಿ ಏಕಾದಶಿ, ಬಿಕ್ಕೆ, ಕಪ್ಪುಚುಕ್ಕೆ, ಹಸಿರು ಹಲಸು, ಸಖರಾಯ ಪಟ್ಟಣ, ನಂಜು, ಗಮ್ಲೆಸ್, ಏಲಕ್ಕಿ, ಬೆಟ್ಟದ ಹಲಸು, ಗೊಂಚಲು, ರುದ್ರಾಕ್ಷಿ, ಕೇಸರಿ, ಚನ್ನರಾಯ ಪಟ್ಟಣ, ಪಲ್ಯದ ಹಾಗೂ ಪುಟ್ಟ ಹಲಸು ಎಂಬ 12ಕ್ಕೂ ಹೆಚ್ಚು ತಳಿಯ ಹಲಸಿನ ಹಣ್ಣುಗಳ ಮಾರಾಟಕ್ಕೆ ಇರಿಸಲಾಗಿದೆ. ಇವುಗಳಲ್ಲಿ ಚಂದ್ರ ಹಲಸನ್ನು ಹೆಚ್ಚಿನ ಜನ ಖರೀದಿ ಮಾಡುತ್ತಿರುವುದು ಕಂಡು ಬಂತು.ಇನ್ನೂ ವಿವಿಧ ಬಗೆಯ ತೋತಾಪುರಿ ಮಾವಿನ ಹಣ್ಣುಗಳು ಗ್ರಾಹಕರ ಗಮನ ಸೆಳೆದವು. ಮೇಳದಲ್ಲಿ ಸಾವಯವ ಬೀಜಗಳು, ಸಿರಿಧಾನ್ಯ ಆಹಾರ ಪದಾರ್ಥಗಳು, ಕುರುಕಲು ತಿಂಡಿಗಳು ಮಾರಾಟಕ್ಕೆ ಲಭ್ಯವಿವೆ.
ಮೇಳಕ್ಕೆ ಚಾಲನೆ ನೀಡಿದ ಜನ ಸೇವಾ ಬ್ಯಾಂಕ್ ಮುಖ್ಯಸ್ಥ ಎ.ವಿ. ಸಂಕನೂರ ಮಾತನಾಡಿ, ಸಾವಯವ ಬೆಳೆಗಳು ಆರೋಗ್ಯಕ್ಕೆ ಉತ್ತಮ. ಇಂತಹ ಬೆಳೆಗಳು ಮಾರುಕಟ್ಟೆಗೆ ಬರಬೇಕಿದ್ದು, ದಲ್ಲಾಳಿಗಳ ಹಾವಳಿ ಕಡಿಮೆಯಾಗಿ ನೇರವಾಗಿ ರೈತರಿಗೆ ಯೋಗ್ಯ ದರ ಸಿಗಬೇಕು ಎಂದು ಹೇಳಿದರು.ಹಲಸಿನಲ್ಲಿ ಮಾನವನ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳು ಹೇರಳವಾಗಿವೆ. ಅದೊಂದು ಪರಿಪೂರ್ಣ ಆಹಾರ ಎಂದರೆ ತಪ್ಪಾಗಲಿಕ್ಕಿಲ್ಲ. ನಿಯಮಿತವಾಗಿ ಹಲಸಿನ ಹಣ್ಣನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ, ಕ್ಯಾನ್ಸರ್ ನಿರೋಧಕ ಶಕ್ತಿ, ವಿಟಮಿನ್ ಸಿ ಅಂಶ ಹೆಚ್ಚಾಗುತ್ತದೆ ಎಂದು ತಿಳಿಸಿದರು.
ಸಹಜ ಸಂಮೃದ್ಧಿ ಸಂಸ್ಥೆಯ ಮುಖ್ಯಸ್ಥ ಮಲ್ಲಿಕಾರ್ಜುನ ಹೊಸಪಾಳ್ಯ ಮಾತನಾಡಿ, ದೇಶ ಸೇರಿದಂತೆ ವಿದೇಶದ ಸುಮಾರು ೧೨ ಬಗೆಯ ವಿವಿಧ ಹಲಸಿನ ತಳಿಗಳನ್ನು ಇಲ್ಲಿ ಮಾರಾಟ ಮತ್ತು ಪ್ರದರ್ಶನಕ್ಕೆ ಇಡಲಾಗಿದೆ. ಹಲಸಿನ ಮೇಳ ಮಾಡುವುದರ ಜೊತೆ ಜೊತೆಗೆ ಹಲಸು ಕೃಷಿಯ ಬಗ್ಗೆ ರೈತರಿಗೆ ಮಾರ್ಗದರ್ಶನ ಮಾಡಲಾಗುತ್ತಿದೆ ಎಂದರು.
ಅರ್ಬನ್ ಓಯಾಸಿಸ್ ಮಾಲ್ನ ವ್ಯವಸ್ಥಾಪಕ ರಮೇಶ ಇಂದೂರ, ದೇಸಿ ಬೀಜ ತಳಿಗಳ ಪೋಷಕಿ ಸೀಮಾ ಪ್ರಸಾದ್, ಶರಣಗೌಡ ಬಿರಾದಾರ ಸೇರಿದಂತೆ ಅನೇಕರು ಇದ್ದರು.