ರಾಣಿಬೆನ್ನೂರು: ಕೆಎಚ್‌ಬಿ ಕಾಲೋನಿ ಅಭಿವೃದ್ಧಿಗೆ ನಗರಸಭೆಯಿಂದ 50 ಲಕ್ಷ ನೆರವು ಬಿಡುಗಡೆ ಮಾಡಲಾಗುವುದು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.ನಗರದ ಮಾಗೋಡ ರಸ್ತೆಯ ಕೆಎಚ್‌ಬಿ ಕಾಲೋನಿಯ ನಿವಾಸಿಗಳು ಹಮ್ಮಿಕೊಂಡಿದ್ದ ಕುಂದುಕೊರತೆ ನಿವಾರಣೆ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕ ಗೃಹ ಮಂಡಳಿಯಿಂದ ವರ್ಷದ ಹಿಂದೆಯೇ 6.82 ಕೋಟಿ ಹಣ ಬಿಡುಗಡೆಯಾಗಿದೆ. ಬಡಾವಣೆಯನ್ನು ನಗರಸಭೆಗೆ ಹಸ್ತಾಂತರಿಸುವ ಎಲ್ಲ ಪ್ರಕ್ರಿಯೆಗಳು ಮುಕ್ತಾಯ ಹಂತದಲ್ಲಿದ್ದು, ಅತೀ ಶೀಘ್ರದಲ್ಲಿಯೇ ಅದನ್ನು ಪೂರ್ಣಗೊಳಿಸಿ ಬಡಾವಣೆಯ ಸುಧಾರಣೆ ಪರ್ವವನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು. ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ನಗರಸಭೆ ಆಯುಕ್ತ ಎಫ್.ಐ. ಇಂಗಳಗಿ ಮಾತನಾಡಿ, ಕೆಎಚ್‌ಬಿ ಒಂದನೇ ಹಂತದ ಬಡಾವಣೆ ಅಭಿವೃದ್ಧಿಗೆ ಕಾಲ ಪಕ್ವವಾಗಿದೆ. ಶಿಥಿಲಗೊಂಡಿರುವ ರಸ್ತೆ, ಗಟಾರ, ಒಳಚರಂಡಿ, ಕುಡಿಯುವ ನೀರಿನ ಸಂಪರ್ಕ ಪುನರ್ ಸ್ಥಾಪಿಸಿ ಶೀಘ್ರದಲ್ಲಿಯೇ ವಿದ್ಯುದೀಕರಣದ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವೀರೇಶ ಮೋಟಗಿ, ಕೆಎಚ್‌ಬಿ ಸಕಾನಿ ಎಂಜಿನಿಯರ್ ಸೀತಾರ ವೈ.ಎನ್., ಸಹಾಯಕ ಎಂಜಿನಿಯರ್ ಹುಸೇನ್‌ಬಿ, ಬಡಾವಣೆ ನಿವಾಸಿಗಳಾದ ಎ.ಬಿ.ರತ್ನಮ್ಮ, ನಿರುಪಮಾ, ಬಸವರಡ್ಡಿ ಬಣಕಾರ, ಪೂರ್ಣಿಮಾ ಲದ್ವಾ, ಆರ್.ಎಸ್.ಪಾಟೀಲ, ವಿರೂಪಾಕ್ಷಪ್ಪ ಅರವಂಟಗಿ, ಶ್ರೀನಿವಾಸ ಲದ್ವಾ, ವಿ.ಎಸ್. ಬಡಕರಿಯಪ್ಪನವರ, ಆರ್.ಬಿ. ಪಾಟೀಲ, ಅಶೋಕ ಸುರಗೊಂಡ ಮತ್ತಿತರರಿದ್ದರು.