ಎಸ್‌ಸಿಡಿಸಿಸಿ ಬ್ಯಾಂಕ್‌ಗೆ 79.09 ಕೋಟಿ ರು. ಸಾರ್ವಕಾಲಿಕ ದಾಖಲೆ ಲಾಭ

| Published : Apr 05 2024, 01:10 AM IST

ಎಸ್‌ಸಿಡಿಸಿಸಿ ಬ್ಯಾಂಕ್‌ಗೆ 79.09 ಕೋಟಿ ರು. ಸಾರ್ವಕಾಲಿಕ ದಾಖಲೆ ಲಾಭ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರದ ಮಹತ್ತರ ಯೋಜನೆಯಾದ ‘ಅಟಲ್‌ ಪಿಂಚಣಿ ಯೋಜನೆ’ಯಲ್ಲಿ ದಾಖಲೆಯ ಪ್ರಮಾಣದಲ್ಲಿ ಚಂದಾದಾರರನ್ನು ನೋಂದಾಯಿಸಿ ವರದಿ ವರ್ಷದಲ್ಲಿ 2 ಬಾರಿ ಭಾರತ ಸರ್ಕಾರದ ಹಣಕಾಸು ಸಚಿವಾಲಯದಿಂದ ಪ್ರಶಸ್ತಿಗೆ ಪಾತ್ರವಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ 2024ರ ಮಾ.31ಕ್ಕೆ ಅಂತ್ಯವಾದ ಆರ್ಥಿಕ ವರ್ಷದಲ್ಲಿ 79.09 ಕೋಟಿ ರು. ಲಾಭ ಗಳಿಸಿದೆ. ಇದು ಕಳೆದ ವರ್ಷದ ಲಾಭ (61.29 ಕೋಟಿ ರು.)ಕ್ಕಿಂತ ಶೇ. 29.04 ಏರಿಕೆಯಾಗಿದೆ. ಎಸ್‌ಸಿಡಿಸಿಸಿ ಬ್ಯಾಂಕ್‌ನ ಇತಿಹಾಸದಲ್ಲೇ ಇದು ಸಾರ್ವಕಾಲಿಕ ದಾಖಲೆ ಎಂದು ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ.ಎಂ.ಎನ್‌. ರಾಜೇಂದ್ರ ಕುಮಾರ್‌ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಬ್ಯಾಂಕ್‌ ವರದಿ ವರ್ಷದಲ್ಲಿ 15540.80 ಕೋಟಿ ರು.ಗಳ ಒಟ್ಟು ವ್ಯವಹಾರ ದಾಖಲಿಸಿ ಹೊಸ ಇತಿಹಾಸ ನಿರ್ಮಿಸಿದೆ. ಕಳೆದ ಸಾಲಿನ ಒಟ್ಟು ವ್ಯವಹಾರಕ್ಕಿಂತ (13514.51 ಕೋಟಿ ರು.) ಈ ಬಾರಿ ಶೇ.14.99ರಷ್ಟು ಏರಿಕೆ ಆಗಿದೆ. 2024-25ನೇ ಸಾಲಿಗೆ 18,000 ಕೋಟಿ ರು. ವ್ಯವಹಾರದ ಗುರಿಯನ್ನು ಬ್ಯಾಂಕ್‌ ಹೊಂದಿದೆ ಎಂದು ಹೇಳಿದರು.ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯಾವುದೇ ಠೇವಣಾತಿ ಇಲ್ಲದೆಯೂ ಎಸ್‌ಸಿಡಿಸಿಸಿ ಬ್ಯಾಂಕ್‌ ತನ್ನ 113 ಶಾಖೆಗಳ ಮುಖಾಂತರ ಒಟ್ಟು 7221.37 ಕೋಟಿ ರು. ಠೇವಣಿ ಸಂಗ್ರಹಿಸಿ ಸಾಧನೆ ಮಾಡಿದೆ. ಈ ಮೂಲಕ ಠೇವಣಿ ಸಂಗ್ರಹಣೆಯಲ್ಲಿ ರಾಜ್ಯದ ಇತರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳಲ್ಲಿ ಮುಂಚೂಣಿಯಲ್ಲಿದೆ. ಕಳೆದ ಸಾಲಿನ ಠೇವಣಿ ಸಂಗ್ರಹಕ್ಕಿಂತ ಈ ಬಾರಿ ಶೇ. 13.33 ಏರಿಕೆಯಾಗಿದೆ ಎಂದು ರಾಜೇಂದ್ರ ಕುಮಾರ್‌ ತಿಳಿಸಿದರು.

ಸ್ಪರ್ಧಾತ್ಮಕ ವ್ಯವಹಾರದಲ್ಲಿ ಬ್ಯಾಂಕ್‌ 6485.12 ಕೋಟಿ ರು. ಮುಂಗಡ ನೀಡಿದೆ. ಕೃಷಿ ಹಾಗೂ ಕೃಷಿ ಅಭಿವೃದ್ಧಿಗೆ ಅಲ್ಪಾವಧಿ ಸಾಲವಾಗಿ 2032.28 ಕೋಟಿ ರು., ಮಧ್ಯಮಾವಧಿ ಸಾಲ 136.99 ಕೋಟಿ ರು. ಹೀಗೆ ಕೃಷಿ ಕ್ಷೇತ್ರಕ್ಕೆ ಒಟ್ಟು 2169.27 ಕೋಟಿ ರು. ಸಾಲ ನೀಡಲಾಗಿದ್ದು, ಕೃಷಿಯೇತರ ಕ್ಷೇತ್ರಕ್ಕೆ 4315.85 ಕೋಟಿ ರು. ಸಾಲ ನೀಡಲಾಗಿದೆ. ಕೃಷಿ ಹಾಗೂ ಕೃಷಿಯೇತರ ಸಾಲಗಳ ಹೊರಬಾಕಿ 8319.43 ಕೋಟಿ ರು. ಆಗಿದೆ. ಬ್ಯಾಂಕ್‌ ವರದಿ ವರ್ಷದಲ್ಲಿ ನೀಡಿದ ಎಲ್ಲ ಕೃಷಿ ಸಾಲಗಳು ಶೇ. 100 ಮರುಪಾವತಿಗೊಂಡು ದಾಖಲೆ ನಿರ್ಮಾಣವಾಗಿದೆ. ಇಂತಹ ಸಾಧನೆಯನ್ನು ಕಳೆದ 29 ವರ್ಷಗಳಿಂದ ಬ್ಯಾಂಕ್‌ ಸತತವಾಗಿ ಮಾಡಿರುವುದು ರಾಷ್ಟ್ರೀಯ ದಾಖಲೆ ಎಂದರು.

ಬ್ಯಾಂಕ್‌ಗೆ ಒಟ್ಟು 1072 ಸಂಘಗಳು ಸದಸ್ಯರಾಗಿವೆ. ಇವುಗಳ ಪಾಲು ಬಂಡವಾಳ 403.59 ಕೋಟಿ ರು., ದುಡಿಯುವ ಬಂಡವಾಳ 11379.23 ಕೋಟಿ ರು. ಆಗಿದ್ದು, ಇದು ಕಳೆದ ವರ್ಷಕ್ಕಿಂತ (9930.69 ಕೋಟಿ) ಶೇ. 14.59ರಷ್ಟು ಏರಿಕೆಯಾಗಿದೆ. ಬ್ಯಾಂಕ್‌ 261.00 ಕೋಟಿ ರು. ವಿವಿಧ ನಿಧಿಗಳನ್ನು ಹೊಂದಿದ್ದು, ಶೇ. 8.38ರಷ್ಟು ಏರಿಕೆ ಕಂಡಿದೆ. 80,668 ರುಪೇ ಡೆಬಿಟ್‌ ಕಾರ್ಡ್‌ಗಳನ್ನು ಬ್ಯಾಂಕ್‌ನ ಇತರ ಗ್ರಾಹಕರಿಗೆ ನೀಡಲಾಗಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ಮಹತ್ತರ ಯೋಜನೆಯಾದ ‘ಅಟಲ್‌ ಪಿಂಚಣಿ ಯೋಜನೆ’ಯಲ್ಲಿ ದಾಖಲೆಯ ಪ್ರಮಾಣದಲ್ಲಿ ಚಂದಾದಾರರನ್ನು ನೋಂದಾಯಿಸಿ ವರದಿ ವರ್ಷದಲ್ಲಿ 2 ಬಾರಿ ಭಾರತ ಸರ್ಕಾರದ ಹಣಕಾಸು ಸಚಿವಾಲಯದಿಂದ ಪ್ರಶಸ್ತಿಗೆ ಪಾತ್ರವಾಗಿದೆ. 89,138 ಕಿಸಾನ್‌ ಕ್ರೆಡಿಟ್‌ ಕಾರ್ಡ್‌ದಾರರಿಗೆ ವೈಯುಕ್ತಿಕ ಅಪಘಾತ ವಿಮಾ ಸೌಲಭ್ಯವನ್ನು ಒದಗಿಸಲಾಗಿದೆ. ಉಭಯ ಜಿಲ್ಲೆಗಳ 14 ಶಾಖೆಗಳಲ್ಲಿ ಎ.ಟಿ.ಎಂ. ಅಳವಡಿಸಲಾಗಿದೆ ಎಂದು ಡಾ.ಎಂ.ಎನ್‌. ರಾಜೇಂದ್ರ ಕುಮಾರ್‌ ವಿವರಿಸಿದರು.

ಎಸ್‌ಸಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ವಿನಯ ಕುಮಾರ್‌ ಸೂರಿಂಜೆ, ನಿರ್ದೇಶಕರಾದ ಟಿ.ಜಿ. ರಾಜಾರಾಮ ಭಟ್‌, ಭಾಸ್ಕರ ಎಸ್‌.ಕೋಟ್ಯಾನ್‌, ಎಂ.ವಾದಿರಾಜ ಶೆಟ್ಟಿ, ದೇವಿಪ್ರಸಾದ್‌ ಶೆಟ್ಟಿ ಬೆಳಪು, ಎಸ್‌. ರಾಜು ಪೂಜಾರಿ, ಶಶಿಕುಮಾರ್‌ ರೈ ಬಿ., ಎಸ್‌.ಬಿ. ಜಯರಾಮ ರೈ, ಮೋನಪ್ಪ ಶೆಟ್ಟಿ ಎಕ್ಕಾರು, ಕೆ. ಹರೀಶ್ಚಂದ್ರ, ಕೆ.ಜೈರಾಜ್‌ ಬಿ.ರೈ, ಎಂ. ಮಹೇಶ್‌ ಹೆಗ್ಡೆ, ಬಿ.ಅಶೋಕ್‌ ಕುಮಾರ್‌ ಶೆಟ್ಟಿ, ಕುಶಾಲಪ್ಪ ಗೌಡ ಪಿ., ಎಸ್‌.ಎನ್‌. ಮನ್ಮಥ, ಸದಾಶಿವ ಉಳ್ಳಾಲ್‌, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್‌ ಕೆ. ಇದ್ದರು.ಬಾಕ್ಸ್‌

ಹೊಸ ಯೋಜನೆಗಳು

ಇಂಟರ್‌ ಬ್ಯಾಂಕ್‌ ಮೊಬೈಲ್‌ ಪೇಮೆಂಟ್‌ ಸಿಸ್ಟಂ ಯೋಜನೆಯನ್ನು ಕಾರ್ಯಗತಗೊಳಿಸಲು ಬ್ಯಾಂಕ್‌ ಚಿಂತನೆ ನಡೆಸಿದೆ. ಈ ಯೋಜನೆಯಿಂದ ಗ್ರಾಹಕರು ಮೊಬೈಲ್‌ ಮುಖಾಂತರ ತಮ್ಮ ಖಾತೆಯಿಂದ ಇತರ ಬ್ಯಾಂಕಿನ ಖಾತೆಗೆ ಹಣ ವರ್ಗಾಯಿಸಬಹುದು. ಇಂಟರ್‌ನೆಟ್‌ ಬ್ಯಾಂಕಿಂಗ್‌ ಸೇವೆ ಶೀಘ್ರದಲ್ಲಿ ಆರಂಭಗೊಳ್ಳಲಿದೆ. ಭಾರತ್‌ ಬಿಲ್‌ ಪೇಮೆಂಟ್‌ ಸಿಸ್ಟಂ ಯೋಜನೆ ಜನೋಪಯೋಗಿಯಾಗಿದ್ದು, ವಿದ್ಯುತ್‌ ಬಿಲ್‌, ನೀರಿನ ಬಿಲ್‌, ಡಿ.ಟಿ.ಎಚ್‌. ರಿಚಾರ್ಜ್‌ ಇತ್ಯಾದಿ ಪಾವತಿಗಳನ್ನು ಬ್ಯಾಂಕಿನ ಶಾಖೆಗಳಲ್ಲಿ ನಿರ್ವಹಿಸುವ ಯೋಜನೆ ಇದಾಗಿದೆ. ಬ್ಯಾಂಕ್‌ ಮುಂದಿನ ಅವಧಿಯಲ್ಲಿ 10 ಹೊಸ ಶಾಖೆಗಳನ್ನು ತೆರೆಯುವ ಯೋಜನೆ ಹಮ್ಮಿಕೊಂಡಿದೆ ಎಂದು ಡಾ. ಎಂ.ಎನ್‌.ರಾಜೇಂದ್ರ ಕುಮಾರ್‌ ತಿಳಿಸಿದರು.

ಫೋಟೊ

4ಎಸ್‌ಸಿಡಿಸಿಸಿ

ಲಗತ್ತಿಸಲಾಗಿದೆ