ಕನ್ನಡಪ್ರಭ ವಾರ್ತೆ ಹಲಗೂರು

ವಿದ್ಯಾರ್ಥಿಗಳು ಶಿಸ್ತು ಬೆಳೆಸಿಕೊಂಡರೆ ಭವಿಷ್ಯ ಉಜ್ವಲವಾಗುತ್ತದೆ ಎಂದು ಹಲಗೂರು ವಿದ್ಯಾಸಂಸ್ಥೆ ಅಧ್ಯಕ್ಷ ಎಚ್.ಎಂ.ಆನಂದ್ ಕುಮಾರ್ ಸಲಹೆ ನೀಡಿದರು.

ಬಿಡದಿಯಲ್ಲಿ ಕೆಪಿಸಿಎಲ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ದಳವಾಯಿ ಕೋಡಿಹಳ್ಳಿ ನಿವಾಸಿ ಸಿದ್ಧಲಿಂಗಸ್ವಾಮಿ ಅವರು, ಹಲಗೂರಿನ ಲಯನ್ಸ್ ಸಂಸ್ಥೆ ಹಾಗೂ ಹಲಗೂರು ವಿದ್ಯಾ ಸಂಸ್ಥೆಯಲ್ಲಿ ಸದಸ್ಯರಾಗಿದ್ದು, ಅವರು ನೀಡಿದ ಸಮವಸ್ತ್ರಗಳನ್ನು ಶಾಲೆಯ 8 ತರಗತಿ ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು ಇದ್ದರೆ ಶೈಕ್ಷಣಿಕವಾಗಿ ಅಭಿವೃದ್ಧಿ ಸಾಧಿಸಬಹುದು. ಏಕಾಗ್ರತೆಯಿಂದ ಪಾಠ ಪ್ರವಚನಗಳಲ್ಲಿ ತೊಡಬೇಕು ಎಂದರು.

ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರತಿವರ್ಷ ಸಮವಸ್ತ್ರ ವಿತರಣೆ ಮಾಡುವ ಜೊತೆಗೆ ನಮ್ಮ ಸಂಸ್ಥೆಯವರು ಉಚಿತವಾಗಿ ಶಾಲಾ ಶುಲ್ಕ, ವಾಹನ ಸೌಲಭ್ಯ ಎಲ್ಲವನ್ನು ನೀಡುತ್ತಿದ್ದಾರೆ. ಸದ್ಬಳಕೆ ಮಾಡಿಕೊಂಡು ನಮ್ಮ ಶಾಲೆಗೆ ಉತ್ತಮ ಫಲಿತಾಂಶ ತಂದು ಕೊಡುವ ನಿಟ್ಟಿನಲ್ಲಿ ನೀವುಗಳು ಶ್ರಮಿಸಬೇಕು ಎಂದರು.

ಲಯನ್ಸ್ ಕ್ಲಬ್ಬ್ ಅಧ್ಯಕ್ಷ ಗುಣೇಶ್ ಮಾತನಾಡಿ, ಶಾಲೆ ನಿರ್ದೇಶಕನಾಗಿ ಮತ್ತು ಲಯನ್ಸ್ ಕ್ಲಬ್ಬಿನ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಾ ಶಾಲೆ ಅಭಿವೃದ್ಧಿ ಪಡಿಸಲು ಶ್ರಮಿಸುತ್ತಿದ್ದು, ದಾನಿಗಳು ನೀಡುವ ಸೌಲಬ್ಯ ಸದ್ಬಳಕೆ ಮಾಡಿಕೊಂಡು ಉತ್ತಮ ವ್ಯಾಸಂಗ ಪಡೆದು ಸಮಾಜದಲ್ಲಿ ಸತ್ಪ್ರಜೆ ಆಗಬೇಕು ಎಂದರು.


ಸಂಸ್ಥೆ ಕಾರ್ಯದರ್ಶಿ ಮಲ್ಲಿಕಾರ್ಜುನ ಸ್ವಾಮಿ (ಅಯ್ಯಣ್ಣ)ಮಾತನಾಡಿ, ಸಿದ್ದಲಿಂಗ ಸ್ವಾಮಿ ಅವರು ಕಷ್ಟಪಟ್ಟು ಉನ್ನತ ವ್ಯಾಸಂಗ ಪಡೆದು ಈಗ ಸರ್ಕಾರಿ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸೇವೆ ನಿರಂತರವಾಗಿ ನಡೆಯಲಿ. ದೇವರು ಅವರಿಗೆ ಆರೋಗ್ಯ ಭಾಗ್ಯ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆ ನಿರ್ದೇಶಕರಾದ ಜಿ.ಎಸ್.ಮನೋಹರ, ಎಚ್.ಬಿ.ರವಿಶಂಕರ್, ನಾಗೇಶ್, ಪ್ರವೀಣ್, ಚೇತನ್, ಪುಟ್ಟಸ್ವಾಮಿ, ಡಾ.ನಾಗೇಶ್, ಡಾ.ಷಂಶುದ್ದೀನ್ ಮತ್ತು ಮುಖ್ಯ ಶಿಕ್ಷಕರಾದ ಎಚ್.ಶಿವರಾಮ್, ಸಹ ಶಿಕ್ಷಕರಾದ ಕೃಷ್ಣ, ವಿಷಕಂಠ, ಶಿಕ್ಷಕಿಯರಾದ ಸವಿತಾ, ಸಿ.ಅನಿತ, ನಿಷ್ಕಲ ಸೇರಿದಂತೆ ಇತರರು ಇದ್ದರು.