ಸಾರಾಂಶ
ಮಳವಳ್ಳಿ: ಆರ್ಎಸ್ಎಸ್ ಗಣವೇಷಧಾರಿಗಳ ಪಥಸಂಚಲನ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅರ್ಥಪೂರ್ಣವಾಗಿ ನಡೆಯಿತು. ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಶತಾಬ್ಧಿ ಅಂಗವಾಗಿ ಪಟ್ಟಣದ ಪಟ್ಟಲದಮ್ಮನ ದೇವಸ್ಥಾನದ ಆವರಣದಲ್ಲಿ ಸೇರಿದ ನೂರಾರು ಆರ್ಎಸ್ಎಸ್ ಸದಸ್ಯರು ಸಮವಸ್ತ್ರ ತೊಟ್ಟು ಕೈಯಲ್ಲಿ ದಂಡ ಹಿಡಿದು ಅಲಂಕೃತ ವಾಹನದಲ್ಲಿ ಭಾರತ ಮಾತೆ ಹಾಗೂ ಆರ್ ಎಸ್ ಎಸ್ ಸಂಸ್ಥಾಪಕ ಗೋಳ್ವಾಲ್ಕರ್ ಅವರ ಭಾವಚಿತ್ರ ಹಾಗೂ ಭಗವಾಧ್ವಜದೊಂದಿಗೆ ಮೆರವಣಿಗೆಗೆ ಚಾಲನೆ ನೀಡಿ ಪಟ್ಟಣದ ಪ್ರಮುಖ ಬಡಾವಣೆಗಳು ಹಾಗೂ ಹೆದ್ದಾರಿ ರಸ್ತೆಗಳಲ್ಲಿ ಶಿಸ್ತುಬದ್ಧವಾಗಿ ಪಥಸಂಚಲನ ನಡೆಸಿದರು. ಭಾರತ ಮಾತೆ ಹಾಗೂ ಹಿಂದೂ ಸಂಘಟನೆ ಪರ ಘೋಷಣೆಗಳನ್ನು ಕೂಗುತ್ತಾ ಗಣವೇಷಧಾರಿಗಳು ಕೆಲ ಬಡಾವಣೆಗಳಿಗೆ ಆಗಮಿಸಿದಾಗ ಅಭಿಮಾನಿಗಳು ಹೂಮಳೆ ಸುರಿಸಿ ಆತ್ಮೀಯ ಸ್ವಾಗತ ಕೋರಿದರು. ಸುಮಾರು 3 ಗಂಟೆಗಳ ಕಾಲ ನಡೆದ ಪಥಸಂಚಲನದಲ್ಲಿ ತಾಲೂಕಿನ ಆರ್ ಎಸ್ ಎಸ್ ಪ್ರಮುಖರಾದ ವೆಂಕಟೇಶ್, ಮಲ್ಲಿಕಾರ್ಜುನ್, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಎಂ.ಎನ್.ಕೃಷ್ಣ, ಕೆ.ಸಿ.ನಾಗೇಗೌಡ, ಅಶೋಕ್, ಬಸವರಾಜು, ಮೋಹನ್ ಹಾಗೂ ಬಿಜೆಪಿ ಮುಖಂಡರು ಭಾಗಿಯಾಗಿದ್ದರು. ಸಿಪಿಐ ಎಂ.ರವಿಕುಮಾರ್ ನೇತೃತ್ವದಲ್ಲಿ ಪೊಲೀಸರು ಭದ್ರತೆ ಕಲ್ಪಿಸಿದರು.