ಮಡಿಕೇರಿ: ಪಟ್ಟಣದ ಹೃದಯ ಭಾಗದಲ್ಲಿರುವ ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ಇಲ್ಲಿನ ರಸ್ತೆಗಳಲ್ಲಿ ಬೃಹತ್ ಹೊಂಡಗಳು ಉಂಟಾಗಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ಪರದಾಡುವಂತಾಗಿದೆ. ಮಳೆ ಹಿನ್ನೆಲೆಯಲ್ಲಿ ಗುಂಡಿಗಳಲ್ಲಿ ಕೆಸರು ನೀರು ನಿಂತಿದ್ದು, ಪಾದಚಾರಿಗಳಿಗೆ, ವಾಹನ ಚಾಲಕರಿಗೆ ತೊಂದರೆಯಾಗುತ್ತಿದೆ.

ಬಸ್‌ ಸೇರಿದಂತೆ ಮತ್ತಿತರ ವಾಹನಗಳು ವೇಗವಾಗಿ ಬಂದಾಗ ಹೊಂಡದಲ್ಲಿನ ಕೊಳಕು ನೀರು ಪ್ರಯಾಣಿಕರ ಬಟ್ಟೆಗಳ ಮೇಲೆ ಸಿಡಿಯುತ್ತಿದೆ. ಈ ಗುಂಡಿಗಳನ್ನು ಮುಚ್ಚಲು ಸ್ಥಳೀಯ ಆಡಳಿತ, ಜನಪ್ರತಿನಿಧಿಗಳಾಗಲಿ ಆಸಕ್ತಿ ತೋರಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಬಸ್ ನಿಲ್ದಾಣದಲ್ಲೇ ಗುಂಡಿಗಳಲ್ಲಿ ಕೆಸರು ನೀರು ನಿಂತಿರುವ ಕಾರಣ ಬಸ್ ಹತ್ತಲು ಮತ್ತು ಇಳಿಯಲು ವೃದ್ಧರು, ಮಹಿಳೆಯರು ಮತ್ತು ಶಾಲಾ ಮಕ್ಕಳು ತೀವ್ರ ತೊಂದರೆ ಅನುಭವಿಸುತ್ತಿದ್ದು, ಕೂಡಲೇ ದುರಸ್ತಿಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಇಲ್ಲಿನ ಸ್ಥಳೀಯ ಸಂಸ್ಥೆಯ ನಿರ್ಲಕ್ಷ್ಯದಿಂದ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೃದಯ ಭಾಗದಲ್ಲಿರುವ ಬಸ್ ನಿಲ್ದಾಣದಲ್ಲೇ ಗುಂಡಿಗಳು ನಿರ್ಮಾಣವಾಗಿದ್ದು, ಸಾರ್ವಜನಿಕರಿಗೆ, ಸವಾರರಿಗೆ ತೊಂದರೆ ಉಂಟಾಗಿದ್ದರೂ, ಜಿಲ್ಲೆಯಲ್ಲಿ ಗ್ರೇಡ್ 1, ಪಂಚಾಯತಿ ಎನಿಸಿಕೊಂಡಿರುವ ಸಿದ್ದಾಪುರ ಪಂಚಾಯಿತಿ ಅಧಿಕಾರಿಗಳು ಇತ್ತ ಗಮನ ಹರಿಸದೆ ಇರುವುದು ದುರದೃಷ್ಟಕರ. ಶೀಘ್ರದಲ್ಲೇ ಈ ಗುಂಡಿಗಳನ್ನು ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕು. -ಎಚ್. ಬಿ. ರಮೇಶ್, ಕಾರ್ಮಿಕ ಮುಖಂಡ