ಕನ್ನಡಪ್ರಭ ವಾರ್ತೆ ಮೈಸೂರುಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಮೈಸೂರು ಜಿಲ್ಲಾ ಜಾಗೃತ ಸಮಿತಿ ಜಂಟಿಯಾಗಿ ಸುತ್ತೂರು ಸಮೀಪದ ಹೊಸಕೋಟೆ ಗ್ರಾಮದಲ್ಲಿ ಮನೆಗೊಂದು ಗ್ರಂಥಾಲಯ ಯೋಜನೆಗೆ ಚಾಲನೆ ನೀಡಿತು.ಗ್ರಾಮದ ರಂಗಭೂಮಿ ಕಲಾವಿದ ಹಾಗೂ ಸಾವಯವ ಕೃಷಿಕ ಹೊಸಕೋಟೆ ಪ್ರಭುಸ್ವಾಮಿ ಅವರ ಮನೆಯಲ್ಲಿ ಈ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ, ಸಂಸ್ಕೃತವೇ ದೈವ ಭಾಷೆ ಎನ್ನಲಾಗುತ್ತಿದ್ದ ಕಾಲದಲ್ಲಿ ಬಸವಾದಿ ಶರಣರು ಕನ್ನಡವನ್ನು ದೈವತ್ವದ ಎತ್ತರಕ್ಕೆ ಏರಿಸಿದರು. ಅಕ್ಷರವಂಚಿತ ತಳಸಮುದಾಯದ ಜನರಿಗೆ ಅಕ್ಷರ ಜ್ಞಾನ ನೀಡಿ, ಅವರ ಕೈಯಲ್ಲೇ ವಚನಗಳನ್ನು ಬರೆಯಿಸುವ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ ಮಾತನಾಡಿ, ವಚನ ಸಾಹಿತ್ಯದ ಶ್ರೇಷ್ಠತೆಯನ್ನು ಉಳಿಸಲು ಫ.ಗು. ಹಳಕಟ್ಟಿಯವರು ತಮ್ಮ ಸ್ವಂತ ಮನೆಯನ್ನೇ ಮಾರಿ ಮುದ್ರಣಾಲಯ ತೆರೆದರು. ವಚನಗಳನ್ನು ಅಚ್ಚು ಹಾಕಿ ಮನೆ-ಮನೆಗೆ ತಲುಪಿಸಿದ ಅವರ ತ್ಯಾಗ ಮತ್ತು ಸೇವೆ ಅನುಪಮವಾದದ್ದು ಎಂದರು.ಅಧ್ಯಕ್ಷತೆ ವಹಿಸಿದ್ದ ಕನ್ನಡ ಕಲಾಕೂಟದ ಎಂ. ಚಂದ್ರಶೇಖರ್ ಮಾತನಾಡಿ, ಮನೆಗೊಂದು ಗ್ರಂಥಾಲಯ'''''''' ಯೋಜನೆಯ ಮೂಲಕ ನಾಡಿನ ಒಂದು ಲಕ್ಷ ಮನೆಗಳನ್ನು ಹಾಗೂ ಕೋಟಿ ಮನಗಳನ್ನು ತಲುಪುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ದೇವರಾಜು ಪಿ. ಚಿಕ್ಕಹಳ್ಳಿ, ಈ ಯೋಜನೆಯು ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಎಚ್.ಸಿ. ಮಹಾದೇವಪ್ಪ ಅವರ ಮನೆಯಲ್ಲಿ ಆರಂಭಗೊಂಡು, ಇಂದು ಶಾಸಕರು, ಆಸ್ಪತ್ರೆಗಳು, ಕಚೇರಿಗಳು ಹಾಗೂ ಗ್ರಾಮೀಣ ಭಾಗಗಳಿಗೂ ವಿಸ್ತರಿಸುತ್ತಾ ಯಶಸ್ವಿಯಾಗಿ ಸಾಗುತ್ತಿದೆ ಎಂದರು.ಕೆರೆಹಳ್ಳಿ ದೊರೆಸ್ವಾಮಿ, ಲೋಹಿತ್, ಪ್ರಭುಸ್ವಾಮಿ, ಪಾಪಣ್ಣ ಹಾಗೂ ನೂರಾರು ರೈತರು ಮತ್ತು ರಂಗಭೂಮಿ ಕಲಾವಿದರು ಇದ್ದರು.