ಕನ್ನಡಪ್ರಭ ವಾರ್ತೆ ನ್ಯಾಮತಿ
ಪಿಎಂಶ್ರೀ ಶಾಲೆಯು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ. ಈ ವರ್ಷ ಶಾಲೆಯಲ್ಲಿ ಮಕ್ಕಳ ದಾಖಲಾತಿ ಹೆಚ್ಚಾಗಿದೆ. ಅಲ್ಲದೇ ಹಾಜರಾತಿ, ಕಲಿಕೆಯೂ ಉತ್ತಮವಾಗಿದೆ. ಪೋಷಕರು, ಗ್ರಾಮಸ್ಥರು ಪಿಎಂಶ್ರೀ ಯೋಜನೆ ಸರಿಯಾದ ರೀತಿಯಲ್ಲಿ ಬಳಸಿಕೊಂಡು ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡಿಸುವಲ್ಲಿ ಸಾಧನೆ ತೋರಿದ ಉತ್ತಮ ಗ್ರಾಮವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಟಿ.ನಿಂಗಪ್ಪ ಹೇಳಿದರು.ತಾಲೂಕಿನ ಸುರಹೊನ್ನೆ ಗ್ರಾಮದ ಪಿಎಂಶ್ರೀ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪಿಎಂಶ್ರೀ ಯೋಜನೆ ಅನುಷ್ಠಾನವನ್ನು ಶಾಲೆ ಮುಖ್ಯ ಶಿಕ್ಷಕರು ಉತ್ತಮವಾಗಿ ತಾಲೂಕಿನ ಎಲ್ಲಾ ಶಾಲೆಗಳಿಗಿಂತ ಅತ್ಯತ್ತಮವಾಗಿ ನಿರ್ವಹಣೆ ಮಾಡಿದ್ದಾರೆ. ಇಲಾಖೆ, ಸಹ ಶಿಕ್ಷಕರು, ಶಿಕ್ಷಕಿಯರ ಕಾರ್ಯ ವೈಖರಿಯನ್ನು ಪ್ರಶಂಸಿ, ಮುಂದಿನ ದಿನಗಳಲ್ಲಿ ಈ ಶಾಲೆಯು ತಾಲೂಕಿನಲ್ಲಿಯೇ ಮಾದರಿ ಪಿಎಂಶ್ರೀ ಶಾಲೆಯಾಗಬೇಕು, ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಒದಗಿಸಿಕೊಡುತ್ತೇವೆ ಎಂದರು.ಸುರಹೊನ್ನೆ ಗ್ರಾಪಂ ಅಧ್ಯಕ್ಷೆ ಜಯಶೀಲ ಮಾತನಾಡಿ, ನಮ್ಮೂರಿನ ಪಿಎಂಶ್ರೀ ಶಾಲೆಯು ಮಾದರಿ ಶಾಲೆಯಾಗಿದೆ. ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಉತ್ತಮ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಮಕ್ಕಳ ಕಲಿಕೆ ಉತ್ತಮವಾಗಿದೆ. ಗ್ರಾಮ ಪಂಚಾಯಿತಿ ವತಿಯಿಂದ ಸಿಗುವ ಉಪಯೋಗಗಳನ್ನು ಶಾಲೆಗೆ ಒದಗಿಸುವಲ್ಲಿ ಸದಾ ಸಿದ್ಧ. ಇದನ್ನು ಮುಖ್ಯ ಶಿಕ್ಷಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷತೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮರಿಗೌಡ ವಹಿಸಿದ್ದರು. ಬಿಆರ್ಸಿ ತಿಪ್ಪೇಶಪ್ಪ ಮಾತನಾಡಿದರು. ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆಗಮಿಸಿ ಶಿಕ್ಷಕರಿಗೆ, ಮಕ್ಕಳಿಗೆ ಶುಭ ಹಾರೈಸಿದರು. 1ರಿಂದ 8ನೇ ತರಗತಿ ಮಕ್ಕಳಿಗೆ 2025-26ರಲ್ಲಿ ಅತಿ ಹೆಚ್ಚು ಅಂಕ ಗಳಿಸಿದವರಿಗೆ ಶಾಲಾ ವತಿಯಿಂದ ಪ್ರೋತ್ಸಾಹ ಧನ ನೀಡಲಾಯಿತು. ಬಿಇಒ, ಬಿಆರ್ಸಿ ಅವರಿಗೆ ಸನ್ಮಾನಿಸಿದರು. ಶಾಲಾ ಶಿಕ್ಷಕಿ ಲಲಿತಮ್ಮ ವರದಿ ವಾಚನ ಮಾಡಿದರು. ಮುಖ್ಯಶಿಕ್ಷಕ ಡಿ.ರಾಮಪ್ಪ ಸ್ವಾಗತಿಸಿ, ಶಿಕ್ಷಕರ ಸಂಘದ ಗೌರವಾಧ್ಯಕ್ಷ, ಕೆಪಿಎಸ್ ಶಾಲೆ ಪ್ರಭಾರ ಮುಖ್ಯ ಶಿಕ್ಷಕರು ಹಾಜರಿದ್ದರು.
ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಪದನಿಮಿತ್ತ ಸದಸ್ಯರು, ನಾಮನಿರ್ದೇಶಿತ ಸದಸ್ಯರು, ಊರಿನ ಗ್ರಾಮಸ್ಥರು, ಸಂಘ ಸಂಸ್ಥೆಗಳ ಅಧ್ಯಕ್ಷರು ಮತ್ತಿತರರಿದ್ದರು. ಸಂಜೆ ವಾರ್ಷಿಕೋತ್ಸವ ಮಕ್ಕಳಿಂದ ಮನರಂಜನೆಯ ಸ್ವಾಗತ ಗೀತೆ, ಭರತನಾಟ್ಯದಿಂದ ಪ್ರಾರಂಭವಾಯಿತು. ಚಿತ್ರಗೀತೆ, ಭಾವಗೀತೆ, ನಾಟಕ, ಚಿಣ್ಣರ ಕುಣಿತ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಗ್ರಾಮಸ್ಥರನ್ನು, ಪೋಷಕರನ್ನು ರಂಜಿಸಿದವು.
- - --ಫೋಟೋ:
ಸುರಹೊನ್ನೆಯ ಪಿಎಂಶ್ರೀ ಉನ್ನತೀಕರಿಸಿದ ಸರ್ಕಾರಿ ಶಾಲೆ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಟಿ.ನಿಂಗಪ್ಪ ಉದ್ಘಾಟಿಸಿದರು.