ಸಾರಾಂಶ
ಮದ್ದೇರು ಗ್ರಾಮದಲ್ಲಿ 50 ಲಕ್ಷ ರು.ವೆಚ್ಚದಲ್ಲಿ ನೂತನ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಎಂ.ಚಂದ್ರಪ್ಪನವರಿಂದ ಭೂಮಿಪೂಜೆ.
ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ಹೊಸದಾಗಿ ಎಂಎಲ್ಎ ಆದಾಗ ಇಲ್ಲಿ ರಸ್ತೆಗಳೆ ಇರಲ್ಲಿಲ್ಲ. ಅದ್ವಾನವಾಗಿದ್ದವು. ಎಚ್.ಡಿ.ದೇವೇಗೌಡ, ಜೆ.ಎಚ್.ಪಟೇಲ್ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸರ್ಕಾರದಲ್ಲಿ ಹಣವಿರಲಿಲ್ಲ. ಅಂತಹ ಕಷ್ಟದ ಕಾಲದಲ್ಲಿಯೇ ಅನುದಾನ ತಂದು ಭರಮಸಾಗರದ ಎಲ್ಲಾ ಹಳ್ಳಿಗಳಲ್ಲಿಯೂ ರಸ್ತೆ ಮಾಡಿಸಿದರ ಪರಿಣಾಮವಾಗಿ ಜನ ರಸ್ತೆ ರಾಜ ಎನ್ನುವ ಬಿರುದು ನೀಡಿ ಎರಡನೆ ಬಾರಿಗೂ ನನ್ನನ್ನು ಚುನಾವಣೆಯಲ್ಲಿ ಗೆಲ್ಲಿಸಿದರೆಂದು ಶಾಸಕ ಡಾ.ಎಂ.ಚಂದ್ರಪ್ಪ ಸ್ಮರಿಸಿದರು.ತಾಲೂಕಿನ ಮದ್ದೇರು ಗ್ರಾಮದಲ್ಲಿ 50 ಲಕ್ಷ ರು.ವೆಚ್ಚದಲ್ಲಿ ನೂತನ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
367 ಕೋಟಿ ರು. ಖರ್ಚು ಮಾಡಿ ಹಿರಿಯೂರಿನ ವಾಣಿ ವಿಲಾಸ ಸಾಗರದಿಂದ ನೀರು ತಂದು ಪ್ರತಿ ಮನೆ ಮನೆಗೂ ಶುದ್ದ ಕುಡಿಯುವ ನೀರು ಪೂರೈಸಲಾಗುವುದು.ಎಲ್ಲಾ ಕಡೆ ಸಿಸಿ ರಸ್ತೆಯಾಗಿದೆ. ಮಳೆ ನೀರು ವ್ಯರ್ಥವಾಗಿ ಹರಿದು ಹೋಗಬಾರದೆಂದು ಚೆಕ್ಡ್ಯಾಂ ಗಳನ್ನು ಕಟ್ಟಿಸಿದ್ದೇನೆ. ಎಲ್ಲಾ ಊರುಗಳಲ್ಲಿಯೂ ಶಾಲೆಗಳನ್ನು ತೆರೆಯಲಾಗಿದೆ. ಗುಡ್ಡ ಕಟ್ ಮಾಡಿ ಚತುಷ್ಪಥ ರಸ್ತೆಗಳನ್ನು ಮಾಡಿಸಿದ್ದೇನೆ. ನ್ಯಾಯಾಧೀಶರಿಗೆ ವಸತಿ ಗೃಹಗಳು, ಪಾಲಿಟೆಕ್ನಿಕ್, ಐಟಿಐ. ಕಾಲೇಜು, ಮುರಾರ್ಜಿದೇಸಾಯಿ ವಸತಿ ಶಾಲೆ, ಕಿತ್ತೂರು ರಾಣಿಚೆನ್ನಮ್ಮ ವಸತಿ ಶಾಲೆ, ಗೆಸ್ಟ್ ಹೌಸ್ಗಳನ್ನು ಕಟ್ಟಿಸಿದ್ದೇನೆ. ಇದಕ್ಕಿಂತ ಇನ್ನೇನು ಅಭಿವೃದ್ದಿ ಕೆಲಸಗಳಾಗಬೇಕೆಂದು ಜನತೆಯನ್ನೇ ಪ್ರಶ್ನಿಸಿದರು?
ಜನಪ್ರತಿನಿಧಿಗಳಿಗೆ ಶಕ್ತಿ, ಯೋಗ್ಯತೆಯಿದ್ದರೆ ಸರ್ಕಾರದಲ್ಲಿ ಹೋರಾಟ ಮಾಡಿ ಅನುದಾನ ತಂದು ಅಭಿವೃದ್ಧಿ ಕೆಲಸಗಳನ್ನು ಮಾಡಿಸಬಹುದು. ಯಾರಿಂದಲೂ ಏನನ್ನು ಹೇಳಿಸಿಕೊಳ್ಳದೆ ಎಲ್ಲಿ ಯಾವ ಕೆಲಸ ಮಾಡಿದರೆ ಜನರಿಗೆ ಒಳ್ಳೆಯದಾಗುತ್ತದೆಂದು ಸದಾ ಆಲೋಚನೆ ಮಾಡುವ ರಾಜಕಾರಣಿ ನಾನು ಎಂದು ಹೇಳಿದರು.ಗ್ರಾಪಂ ಅಧ್ಯಕ್ಷ ಯುವರಾಜ್, ದಾಸಯ್ಯನಹಟ್ಟಿ ರಮೇಶ್, ಕಲ್ಲಜ್ಜ, ಚಂದ್ರಣ್ಣ, ಹನುಮಂತಪ್ಪ, ಸಿದ್ದಲಿಂಗಪ್ಪ, ರಾಜಣ್ಣ, ವೀರಭದ್ರಣ್ಣ ಹಾಗೂ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.