ಮಾನವನಲ್ಲಿರುವ ನಾನು, ನನ್ನದು ಎಂಬ ಅಹಂಕಾರ ಭಾವ ಅಳಿದು, ಸರ್ವವೂ ಭಗವಂತನಿಗೆ ಅರ್ಪಿತ ಎಂಬ ಸಮರ್ಪಣಾ ಭಾವ ಮೂಡಿದಾಗ ಮಾತ್ರ ಮನುಷ್ಯ ಸದಾ ಸುಖಿಯಾಗಿ, ನೆಮ್ಮದಿಯಿಂದ ಬದುಕಲು ಸಾಧ್ಯ.

ಕನ್ನಡಪ್ರಭ ವಾರ್ತೆ ಗದಗ

ಮಾನವನಲ್ಲಿರುವ ನಾನು, ನನ್ನದು ಎಂಬ ಅಹಂಕಾರ ಭಾವ ಅಳಿದು, ಸರ್ವವೂ ಭಗವಂತನಿಗೆ ಅರ್ಪಿತ ಎಂಬ ಸಮರ್ಪಣಾ ಭಾವ ಮೂಡಿದಾಗ ಮಾತ್ರ ಮನುಷ್ಯ ಸದಾ ಸುಖಿಯಾಗಿ, ನೆಮ್ಮದಿಯಿಂದ ಬದುಕಲು ಸಾಧ್ಯ ಎಂದು ಪಂಡಿತ ಪುಟ್ಟರಾಜ ಗವಾಯಿಗಳ ಕಲಾ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ರಾಜಶೇಖರ ದಾನರೆಡ್ಡಿ ಹೇಳಿದರು.

ಇಲ್ಲಿನ ಸಿದ್ಧಲಿಂಗ ನಗರದ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರ, ಎಸ್.ವೈ.ಬಿ.ಎಂ.ಎಸ್. ಯೋಗಪಾಠಶಾಲೆ ಹಾಗೂ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ವಚನ ಪಾಠಶಾಲೆಗಳ ಸಂಯುಕ್ತ ಆಶ್ರಯದಲ್ಲಿ ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಳ್ಳಲಾದ ಸಾಪ್ತಾಹಿಕ ವಚನ ಶ್ರಾವಣ 2026 ಕಾರ್ಯಕ್ರಮದ 3ನೇ ಶ್ರಾವಣ ಸಮಾರಂಭದಲ್ಲಿ ಉಪನ್ಯಾಸ ನೀಡಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಡಿ.ಜಿ.ಎಂ. ಆಯುರ್ವೇದ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಜಿ.ಎಸ್. ಹಿರೇಮಠ ಮಾತನಾಡಿ, ಹಿಂದೆ ಇಂಥಹ ಕಾಯಕವನ್ನು ಇಂಥವರೇ ಮಾಡಬೇಕೆಂಬ ಕಟ್ಟುಪಾಡುಗಳಿದ್ದವು. ಆದರೆ ಇಂದು ಯಾರಾದರೂ ಯಾವುದೇ ಕಾಯಕವನ್ನು ಕೈಗೊಳ್ಳಬಹುದು. ಕಾಯಕದಲ್ಲಿ ನಿಷ್ಠೆ, ಶ್ರದ್ಧೆ ಇರಬೇಕು ಹಾಗೂ ಮಾಡುವ ಕೆಲಸ ಇತರರಿಗೆ ಮಾರ್ಗದರ್ಶಿಯಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಕೃಷಿ ವಿಜ್ಞಾನಿ ಡಾ. ಎಸ್.ಕೆ. ನಾಲ್ವತವಾಡಮಠ ಮಾತನಾಡಿ, ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ದಿನೇದಿನೇ ಸ್ವಾರ್ಥ ಹೆಚ್ಚಾಗುತ್ತಿದೆ. ಸ್ವಾರ್ಥ ಮನೋಭಾವ ತೊರೆದು ನಾವೆಲ್ಲರೂ ಸಮರ್ಪಣಾ ಭಾವದಿಂದ ಶ್ರಮಿಸಿದರೆ ಮಾತ್ರ ದೇಶ ಪ್ರಗತಿ ಪಥದಲ್ಲಿ ಮುನ್ನಡೆಯಲು ಸಾಧ್ಯ ಎಂದರು.

ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಗೌರವಾಧ್ಯಕ್ಷೆ ಅನ್ನಪೂರ್ಣಕ್ಕ ವರವಿ, ಅಧ್ಯಕ್ಷೆ ವಿಜಯಲಕ್ಷ್ಮೀ ಆನೆಹೊಸೂರ, ಬಸವ ಯೋಗ ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಎಸ್. ಪಲ್ಲೇದ ಉಪಸ್ಥಿತರಿದ್ದರು. ಸುನಂದಾ ಜ್ಯಾನೋಪಂತರ ಹಾಗೂ ಚಂದ್ರಕಲಾ ಸ್ಥಾವರಮಠ ವಚನ ಸಂಗೀತ ಪ್ರಸ್ತುತಪಡಿಸಿದರು. ಸಂಗೀತ ನಾಕೋಡ ಸಾಮೂಹಿಕ ಬಸವ ಪ್ರಾರ್ಥನೆ ನೆರವೇರಿಸಿದರು. ಅರುಣಾ ಇಂಗಳಹಳ್ಳಿ ಸ್ವಾಗತಿಸಿದರು. ಶಾಂತಾ ಮುಂದಿನಮನಿ ಧರ್ಮಗ್ರಂಥ ಪಠಣ ಮಾಡಿದರು. ಬಸವರಾಜ ತೋಟಿಗೇರ ಸಂವಿಧಾನ ಪೀಠಿಕೆ ಬೋಧಿಸಿದರು. ಸುಲೋಚನಾ ಐಹೊಳ್ಳಿ ನಿರೂಪಿಸಿದರು.