ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ರಂಗಚಟುವಟಿಕೆಗಳಿಂದ ಮಲ್ಲಾಡಿಹಳ್ಳಿ ಹೆಸರು ಜನಮಾನಸದಲ್ಲಿ ಇನ್ನಷ್ಟು ಮೆರಗನ್ನು ಪಡೆದುಕೊಂಡು ಶಾಶ್ವತವಾಗುತ್ತದೆ ಎಂದು ಖ್ಯಾತ ವ್ಯಂಗ್ಯಚಿತ್ರಕಾರ ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಎಚ್.ಬಿ.ಮಂಜುನಾಥ್ ಹೇಳಿದರು.
ತಾಲೂಕಿನ ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ತಿರುಕನೂರಿನಲ್ಲಿ ನಡೆದ ರಂಗದಾಸೋಹ ನಾಟಕಗಳ ಉತ್ಸವದ ಅಂತಿಮ ದಿನದ ಸಭಾ ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣದಲ್ಲಿ ಮಾತ ನಾಡುತ್ತಾ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮಲ್ಲಾಡಿಹಳ್ಳಿಯ ಖ್ಯಾತಿ ಯೋಗ ಮತ್ತು ಆಯುರ್ವೇದ ಮತ್ತು ಶಿಕ್ಷಣದಿಂದ ಶಾಶ್ವತವಾಗಿತ್ತು.
ಇಂದು ರಂಗಚಟುವಟಿಕೆಗಳು 21 ವರ್ಷಗಳಿಂದ ಮುಂದುವರೆ ಸಿಕೊಂಡು ನಾಡಿನಾದ್ಯಂತ ಖ್ಯಾತಿ ಪಡೆದು ಮಲ್ಲಾಡಿಹಳ್ಳಿಯ ಹೆಸರನ್ನು ನೆನಪು ಮಾಡಿಕೊಂಡವರ ಮನಸ್ಸಿನಲ್ಲಿ ನಾಟಕಗಳು ಮೂಡುತ್ತಿವೆ ಎಂದರು.
ಗ್ರಾಮೀಣ ಭಾಗದ ಪ್ರದೇಶದಲ್ಲಿ ರಂಗಚಟುವಟಿಕೆಗಳನ್ನು ನೆಲೆ ನಿಲ್ಲಿಸುವ ಕಾರ್ಯವನ್ನು ಅನಾಥ ಸೇವಾಶ್ರಮದ ಆಡಳಿತ ಮಂಡಳಿ ಮಾಡಿಕೊಂಡು ಬರುತ್ತಿರುವುದು ಸಂತಸದ ಸಂಗತಿ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಉಪಾಧ್ಯಕ್ಷ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ರಾಘವೇಂದ್ರ ಪಾಟೀಲ ಮಾತನಾಡಿ, ಜನಪ್ರತಿನಿಧಿಗಳು ಕೆಲವು ಜಾತಿಗಳ ಸಂಸ್ಥೆ ಗಳಿಗೆ ಕೊಡುವಂತಹ ಪ್ರಾತಿನಿಧ್ಯವನ್ನು ಜಾತ್ಯಾತೀತ ಸಂಸ್ಥೆಯಾದ ಮಲ್ಲಾಡಿಹಳ್ಳಿ ಆಶ್ರಮದಂತಹ ಸಂಸ್ಥೆಗೆ ನೀಡಿದಲ್ಲಿ ಇಲ್ಲಿ ನಡೆಯುವ ಸೇವಾ ಚಟುವಟಿಕೆಗಳಿಗೆ ಮತ್ತಷ್ಟು ಪುಷ್ಠಿ ನೀಡಿದಂತಾ ಗುತ್ತದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಖ್ಯಾತ ನಿರ್ದೇಶಕ ಹಾಗೂ ನಟ ರಾಧಾಕೃಷ್ಣ ಪಲ್ಲಕ್ಕಿ ಮಾತನಾಡಿ, ರಾಘವೇಂದ್ರ ಸ್ವಾಮೀಜಿಯವರ ಪುಸ್ತಕಗಳು ಮನಸ್ಸಿನ ಮೇಲೆ ಪರಿಣಾಮ ಬೀರುವಂತಹವು ಕೊರೋನಾದಂತಹ ಸಮಯದಲ್ಲಿ ನಾವು ಓದಿದ ಜೋಳಿಗೆಯ ಪವಾಡ ಕೃತಿ ನನ್ನ ಮನಸ್ಸಿನ ಮೇಲೆ ಅಗಾಧವಾದ ಪರಿಣಾಮವನ್ನು ಬೀರಿದೆ ಅದರಿಂದ ಪ್ರಭಾವಿತವಾದ ನಾನು ಸದ್ಯದಲ್ಲಿ ಅವರ ಜೀವನಾದರ್ಶವನ್ನು ಕುರಿತ ಚಲನಚಿತ್ರವನ್ನು ನಿರ್ಮಿಸಲಾಗುವುದು ಎಂದರು.
ಇನ್ನೋರ್ವ ಅತಿಥಿ ಹಾಗೂ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ಈ ನೆಲದ ಸಂಸ್ಕೃತಿಯನ್ನು ನಾವು ವಚನಗಳಲ್ಲಿ ಮತ್ತು ಸಾಹಿತ್ಯದಲ್ಲಿ ಕಾಣಬಹುದಾಗಿದೆ ರಂಗಭೂಮಿಯಲ್ಲಿ ವ್ಯಕ್ತಿಯ ನೈಜತೆಯ ಅನಾವರಣವಾಗುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಇಂತಹ ರಂಗಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಮಲ್ಲಾಡಿಹಳ್ಳಿಯ ಎಲ್ಲಾ ಚಟುವಟಿಕೆಗಳಿಗೆ ಈ ಹಿಂದೆ ನಾನು ಸಚಿವನಾಗಿದ್ದಾಗ ಅನುದಾನ ನೀಡಿದ್ದೆ. ಈಗಲೂ ಅವಕಾಶ ಒದಗಿ ಬಂದಲ್ಲಿ ಮತ್ತೆ ಮಲ್ಲಾಡಿಹಳ್ಳಿಯಂತಹ ಉತ್ತಮ ಸಂಸ್ಥೆಗೆ ಸಾಕಷ್ಟು ಅನುದಾನಗಳನ್ನು ನೀಡಲು ಬದ್ಧ ಎಂದರು.
ಹಿರಿಯ ವಿದ್ಯಾರ್ಥಿಗಳಾದ ವಿಜ್ಞಾನಿ ನಾಗೇಶ್ ಕಿಣಿ, ವೈದ್ಯ ಡಾ॥ ಶಾಂತಕುಮಾರ್, ವರ್ತಕ ಸನತ್ ಕುಮಾರ್, ಸಂಸ್ಥೆಯ ಕಾರ್ಯದರ್ಶಿ ಎಸ್.ಕೆ.ಬಸವರಾಜನ್, ವಿಶ್ವಸ್ತರಾದ ಕೆ.ಡಿ.ಬಡಿಗೇರ, ಎಲ್.ಎಸ್. ಶಿವರಾಮಯ್ಯ, ವ್ಯವಸ್ಥಾಪಕ ಡಿ.ಕೆ.ಚಂದ್ರಪ್ಪ ಹಾಗೂ ಎಲ್ಲಾ ಶಾಲಾ ಕಾಲೇಜುಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.
ಡಾ.ಚಂದ್ರಶೇಖರ ಕಂಬಾರ ರಚಿಸಿದ, ಖ್ಯಾತ ರಂಗನಿರ್ದೇಶಕ ವೀರೇಶ್ ಎಂ.ಪಿ.ಎಂ. ನಿರ್ದೇಶಿಸಿದ ಮಲ್ಲಾಡಿಹಳ್ಳಿ ತಿರುಕರಂಗ ಸಾಂಸ್ಕೃತಿಕ ವೇದಿಕೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ ಬೆಪ್ಪತಕ್ಕಡಿ ಭೋಳೇ ಶಂಕರ ನಾಟಕವನ್ನು ನೆರದಿದ್ದ ಸಾವಿರಾರು ರಂಗಾಸಕ್ತರು ಕಣ್ಣುತುಂಬಿಕೊಂಡರು. ಅಧ್ಯಾಪಕ ಜಿ.ಟಿ.ಶಂಕರಮೂರ್ತಿ ಸ್ವಾಗತಿಸಿ, ಉಪನ್ಯಾಸಕ ಎಚ್.ಗಿರೀಶ್ ನಿರೂಪಿಸಿ, ಪ್ರಾಚಾರ್ಯ ಜಿ.ಎಸ್.ಶಿವಕುಮಾರ್ ವಂದಿಸಿದರು.