ರೋಣದಲ್ಲೊಂದು ಅಪರೂಪದ ಅರಸು ಬೇವಿನಮರ ಪತ್ತೆ !

| Published : Aug 11 2024, 01:37 AM IST

ಸಾರಾಂಶ

ಅರಸು ಮನೆತನದರು ಈ ಬೇವಿನ ಮರವನ್ನು ಶಕ್ತಿ ದೇವತೆ ಪ್ರತೀಕವಾಗಿ ಬೆಳೆಸಿ ಪೂಜಿಸುತ್ತಿದ್ದರು ಎನ್ನುವ ಕಾರಣಕ್ಕೆ ಇದಕ್ಕೆ "ಅರಸು ಬೇವಿನ ಮರ " ಎನ್ನುವ ಹೆಸರು ಚಾಲ್ತಿ

ಪಿ.ಎಸ್.ಪಾಟೀಲ ರೋಣ

ಚಂಡು ಹೂವಿನ ಎಲೆಯಂತೆ ಕಾಣುವುದು ಹೊರತುಪಡಿಸಿದಂತೆ ಕಾಯಿ, ಹಣ್ಣು, ಬೀಜ, ಹೂ, ಎಸಳು, ಟೊಂಗೆ, ಮರದ ಹೊರಗಿನ ನೋಟ ಸೇರಿದಂತೆ ಎಲ್ಲವೂ ಸಾಮಾನ್ಯ ಬೇವಿನಮರದ ಹೊಲಿಕೆ. ಇಂಥ ಅಪರೂಪದ ಬೇವಿನ ಮರವೊಂದು ಪಟ್ಟಣದಲ್ಲಿ ಪತ್ತೆಯಾಗಿದೆ.

ಅರಸು ಮನೆತನದರು ಈ ಬೇವಿನ ಮರವನ್ನು ಶಕ್ತಿ ದೇವತೆ ಪ್ರತೀಕವಾಗಿ ಬೆಳೆಸಿ ಪೂಜಿಸುತ್ತಿದ್ದರು ಎನ್ನುವ ಕಾರಣಕ್ಕೆ ಇದಕ್ಕೆ "ಅರಸು ಬೇವಿನ ಮರ " ಎನ್ನುವ ಹೆಸರು ಚಾಲ್ತಿಯಲ್ಲಿದೆ.

ಪಟ್ಟಣದಿಂದ 2 ಕಿಮೀ ಪೂರ್ವಕ್ಕೆ ಜಿಗಳೂರ ಗ್ರಾಮಕ್ಕೆ ತೆರಳುವ ಒಳ ರಸ್ತೆಯಲ್ಲಿನ ದುರ್ಗಾದೇವಿ ದೇವಸ್ಥಾನಕ್ಕೆ ಸೇರಿದ ಹೊಲವೊಂದರಲ್ಲಿದೆ ಈ ಮರವಿದೆ. 35 ವರ್ಷದ ಮರ ಇದಾಗಿದ್ದು. ಎಲೆ ಮತ್ತು ಎಸಳಿನ ಹಂದರ ಮಾತ್ರ ನೋಡಲು ಚಂಡು ಹೂವಿನ ಎಲೆಯಂತೆ (ಅತೀ ಹತ್ತಿರ ಹೋಗಿ ನೋಡಿದಾಗ ಮಾತ್ರ) ಕಾಣುತ್ತದೆ. ಸ್ವಲ್ಪ ದೂರದಿಂದ‌ ನೋಡಿದರೆ ಸಾಮಾನ್ಯ ಬೇವಿನ ಎಲೆಯಂತೆ ಕಾಣುತ್ತದೆ.

ಅರಸು ಕುಟುಂಬ ಪೂಜೆ: ಈ ಹಿಂದೆ ರಾಜ್ಯ, ಪ್ರಾಂತ, ಪರಗಣಗಳಾಗಿ ವಿಂಗಡಿಸಿಕೊಂಡು ಆಳ್ವಿಕೆ ನಡೆಸಿದ ರಾಜಮನೆತನದವರು ತಮ್ಮ ವಾಡೆ, ಕೋಟೆ, ಅರಮನೆ ಆವರಣದಲ್ಲಿ ಈ ಬೇವಿನಮರ ಬೆಳೆಸುತ್ತಿದ್ದರು ಎನ್ನಲಾಗಿದೆ. ಈ ಮರ ರಾಜಮನೆತನದವರಿಗೆ ಪೂಜ್ಯನೀಯ ಮತ್ತು ಶಕ್ತಿ ದೇವತೆ ಸ್ವರೂಪವಾಗಿತ್ತು. ನವ ದುರ್ಗೆಯರು ನೆಲೆಸಿದ ದೈವಿಕ ಮರವಿದು. ಮಹಾನವಮಿಯಲ್ಲಿ ಈ ಮರಕ್ಕೆ ವಿಶೇಷ ಪೂಜೆ ಸಲ್ಲಿಸುತ್ತಿದ್ದರು. ಯುದ್ದಕ್ಕೆ ತೆರಳುವ ಸಂದರ್ಭದಲ್ಲಿ ತಾಯಿ ಅಥವಾ ಪತ್ನಿ ಈ ಮರದಲ್ಲಿ ನೆಲೆಸಿದ ನವ ದುರ್ಗೆಯರಿಗೆ ಪೂಜಿಸಿ, ಆರತಿ ಬೆಳಗಿ, ಯುದ್ದದಲ್ಲಿ ವಿಜಯಶಾಲಿಯಾಗುವಂತೆ ಬೇಡಿಕೊಳ್ಳುತ್ತಿದ್ದರು. ರಾಜಮನೆತನದವರು ಪ್ರತಿಯೊಂದು ಶುಭ ಕಾರ್ಯಕ್ಕೂ ಮುಂಚೆ ಪೂಜೆ ಮಾಡುವ ಈ ಮರ ಇದು. ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ಸದ್ಯಕ್ಕೆ ಈ ರೀತಿಯ ಮರ ಕಾಣುವುದು ಅತೀ ವಿರಳ.

ಇಲ್ಲಿ ಹೇಗೆ ಬೆಳೆಯಿತು?: 35 ವರ್ಷಗಳ ಹಿಂದೆ ರೋಣ ಪಟ್ಟಣದ ಪಾಟೀಲ (ದೌಲತ್ತಗೌಡ್ರ) ಮನೆತನದವರು ಹತ್ತಿ ಕಾಳು ಜೀನಿಂಗ್ ಪ್ಯಾಕ್ಟರಿ ನಿರ್ಮಿಸಲು ಪಟ್ಟಣದ ಹತ್ತಿರವಿರುವ ತಮ್ಮ ಜಮೀನಿನಲ್ಲಿ ಬೆಳೆದ ಅರಸು ಬೇವಿನ ಮರ ತೆರವುಗೊಳಿಸುತ್ತಿದ್ದರು. ಆ ಸಂದರ್ಭದಲ್ಲಿ ಪಟ್ಟಣದ ದಿ. ನೀಲಪ್ಪ ಮಾದರ (ಶ್ರೀ ದುರ್ಗಾದೇವಿ ಅರಾಧಕರು) ಎಂಬುವರು, ಈ ಮರದ ಮಹತ್ವ ವಿವರಿಸಿ, ಈ ಮರದ ಸಂತತಿ ಉಳಿಯಬೇಕು ಎನ್ನುವ ಕಾರಣಕ್ಕೆ ಅದರ ಬೀಜವನ್ನು ದುರ್ಗಾದೇವಿ ಮಂದಿರಕ್ಕೆ ಸೇರಿದ ಹೊರದಲ್ಲಿ ಊರಿ ಬೆಳೆಸಿದ್ದಾರೆ.

ಅರಸು ಬೇವಿನಮರ ಅತ್ಯಂತ ಅಪರೂಪ, ವಿಶಿಷ್ಟವಾಗಿದ್ದು, ರಾಜಮನೆತನದವರು ಶಕ್ತಿದೇವತೆ ನವದುರ್ಗೆಯರ ಪ್ರತೀಕವಾಗಿ ಈ ಬೇವಿನಮರ ಪೂಜಿಸುತ್ತಿದ್ದರು. ಸದ್ಯ‌ ಎಲ್ಲಿಯೂ ಸಿಗದಿರುವ ಈ ಬೇವಿನಮರದ ಸಂತತಿ ಉಳಿಯಬೇಕಿದೆ. ಈ ದಿಶೆಯಲ್ಲಿ ಅರಣ್ಯ ಇಲಾಖೆ, ಪರಿಸರ ಪ್ರೇಮಿಗಳು, ಪರಿಸರ ತಜ್ಞರು ಗಮನ ಹರಿಸಬೇಕಿದೆ ಎಂದು ಪುರಸಭೆ ಸದಸ್ಯ ಮಲ್ಲಯ್ಯ ಗುರಬಸಪ್ಪನಮಠ ತಿಳಿಸಿದ್ದಾರೆ.

ಸೌಥ ಆಫ್ರಿಕಾದಲ್ಲಿ ಬೆಳೆಯುವ ಲೆಮೆಟಿಯಾ ಫರ್ಗುನ್ಯೂ ಎಂಬ ಮರದ ಎಲೆ ಹೊಲುವ ಈ ಬೇವಿನಮರ ಭಾರತ ದೇಶದಲ್ಲಿಯೇ ವಿಶಿಷ್ಟ ಮರವಾಗಿದೆ. ಇಂಡೋ-ವಲಯ ಪ್ರದೇಶ ಹಾಗೂ ಆಫ್ರಿಕದ ಉಷ್ಣ ವಲಯಗಳಲ್ಲಿ ಬೆಳೆಯುತ್ತದೆ. ಅತೀ ಹೆಚ್ಚು ಆಮ್ಲಜನಕ ನೀಡುವ ಮರವಿದು. ನಾನು ದೇಶದ ಸಾಕಷ್ಟು ಭಾಗಗಳಲ್ಲಿ ಸಂಚರಿಸಿದ್ದು, ಇಂತಹ ಮರ ನೋಡಿಲ್ಲ. ಇದೊಂದು ವಿಭಿನ್ನ ಮತ್ತು ವಿಶಿಷ್ಟ ಮರವಾಗಿದೆ. ಈ ಕುರಿತು ಸಂಶೋಧನೆಯಾಗಬೇಕು ಎಂದು ಪರಿಸರ ತಜ್ಞ ಮಂಜುನಾಥ ನಾಯಕ ಹೇಳಿದ್ದಾರೆ.