ತಮಿಳು-ಕನ್ನಡ ಭಕ್ತರ ಭಾವೈಕ್ಯತೆಯ ಸಂಕೇತ

| Published : Jun 08 2025, 03:00 AM IST

ಸಾರಾಂಶ

ಚಾಮರಾಜನಗರ: ಹೊಂಗನೂರು ಗ್ರಾಮದಲ್ಲಿರುವ ದೊಂಬಕಾಳೇಶ್ವರ ದೇವಸ್ಥಾನ ತಮಿಳುನಾಡು ಹಾಗು ಕರ್ನಾಟಕದಲ್ಲಿರುವ ಭಕ್ತರನ್ನು ಸಂಗಮವನ್ನಾಗಿಸಿ ಸಹೋದರತೆ, ಉತ್ತಮ ಬಾಂಧವ್ಯ ಬೆಸೆದು ಆಧ್ಯಾತ್ಮಿಕತೆಯನ್ನು ವೃದ್ಧಿಸಿದೆ ಎಂದು ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ಚಾಮರಾಜನಗರ: ಹೊಂಗನೂರು ಗ್ರಾಮದಲ್ಲಿರುವ ದೊಂಬಕಾಳೇಶ್ವರ ದೇವಸ್ಥಾನ ತಮಿಳುನಾಡು ಹಾಗು ಕರ್ನಾಟಕದಲ್ಲಿರುವ ಭಕ್ತರನ್ನು ಸಂಗಮವನ್ನಾಗಿಸಿ ಸಹೋದರತೆ, ಉತ್ತಮ ಬಾಂಧವ್ಯ ಬೆಸೆದು ಆಧ್ಯಾತ್ಮಿಕತೆಯನ್ನು ವೃದ್ಧಿಸಿದೆ ಎಂದು ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಹೊಂಗನೂರು ಗ್ರಾಮದಲ್ಲಿ ಶ್ರೀ ದೊಂಬಕಾಳೇಶ್ವರ ಸ್ವಾಮಿ, ಶ್ರೀ ಗೂಳೇಶ್ವರಸ್ವಾಮಿ ಮತ್ತು ಶ್ರೀ ವೀರಮಾಸ್ತಿ ಕೆಂಪಮ್ಮ ದೇವಸ್ಥಾನಗಳ ಉದ್ಘಾಟನೆ ಹಾಗೂ ಧಾರ್ಮಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೊಂಗನೂರು ಗ್ರಾಮದಲ್ಲಿರುವ ದೊಂಬಕಾಳೇಶ್ವರ ದೇವಸ್ಥಾನ ಮೂಲ ಸ್ಥಳವಾಗಿದ್ದು, ತಮಿಳುನಾಡು, ಮಂಡ್ಯ ಜಿಲ್ಲೆಯ ಮಳವಳ್ಳಿ ಹಾಗು ಚಾ.ನಗರ ಜಿಲ್ಲೆಯ ಭಕ್ತರು ಸೇರಿ ಹೊಂಗನೂರು ಗ್ರಾಮದಲ್ಲಿ ಭವ್ಯ ಮಂದಿರ ನಿರ್ಮಾಣ ಮಾಡಿದ್ದಾರೆ. ಇದೊಂದು ಭಾವೈಕ್ಯತೆಯ ಸಂಕೇತವಾಗಿದೆ. ತಮಿಳುನಾಡ ಭಕ್ತರು ಕರ್ನಾಟಕದಲ್ಲಿ ದೇವಸ್ಥಾನ ನಿರ್ಮಾಣ ಮಾಡಿರುವುದು ಸಾಮರಸ್ಯದ ಸಂಕೇತವಾಗಿದೆ. ಶ್ರೀ ದೊಂಬಕಾಳೇಶ್ವರ ದೇವಸ್ಥಾನ ನಿಮ್ಮೆಲ್ಲರ ಆಶೋತ್ತರಗಳನ್ನು ಈಡೇರಿಸುವ ಜೊತೆಗೆ ನೆಮ್ಮದಿ ಜೀವನ ಕರುಣಿಸಲಿ ಎಂದು ಶುಭಕೋರಿದರು.

ಮಕ್ಕಳಿಗೆ ಹುಟ್ಟುಹಬ್ಬವನ್ನು ಆಚರಣೆ ಮಾಡಿ, ಚಿನ್ನಾಭರಣಗಳನ್ನು ತೊಡಿಸಿ, ಪೋಷಕರು ಸಂತೋಷ ಪಡುತ್ತಾರೆ. ಆದರೆ, ಆ ಮಗುವಿಗೆ ಇದರ ಬಗ್ಗೆ ಅರಿವೇ ಇರುವುದಿಲ್ಲ. ಭಕ್ತರು ಆದೇ ರೀತಿ ದೇವರನ್ನು ವಿಶೇಷ ಆಲಂಕಾರ ಮಾಡಿ, ಪೂಜಿಸುತ್ತಾರೆ. ಅದು ಅವರ ಮನಸ್ಸು ಸಂತೋಷವನ್ನುಂಟು ಮಾಡುತ್ತದೆ. ಇಂತಹ ಭಕ್ತಿ ಮಾರ್ಗದಲ್ಲಿ ಭಗವಂತನನ್ನು ಕಾಣುತ್ತಿದ್ದೇವೆ. ಆಧ್ಯಾತ್ಮಿಕ ಚಿಂತನೆಗಳು ಮಕ್ಕಳು ಹೆಚ್ಚಾಗಿ ಮೂಡಬೇಕು ಎಂದರು.

ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ೧೯೯೪ರಲ್ಲಿ ನೀರಾವರಿ ಸಚಿವರಾಗಿದ್ದ ಕೆ.ಎನ್. ನಾಗೇಗೌಡ ಅವರ ಮನೆ ದೇವರು ಹೊಂಗನೂರು ಶ್ರೀ ದೊಂಬಕಾಳೇಶ್ವರ ಸ್ವಾಮಿ ಅಂದು ಅವರು ಮನೆ ದೇವರ ಪೂಜೆಗೆ ಹೊಂಗನೂರಿಗೆ ಆಗಮಿಸಿದ್ದರು. ನಾನು ಸಹ ಶಾಸಕನಾಗಿದ್ದೆ. ಅಲ್ಲಿಂದ ಹೊಂಗನೂರು ಹಿರಿಕೆರೆಯನ್ನು ನೋಡಿ, ಹೊಂಗನೂರು ಹಿರಿಕೆರೆ ಏತ ನೀರಾವರಿ ಯೋಜನೆಯನ್ನು ಅನುಷ್ಠಾನ ಮಾಡಿದ್ದರು. ಈ ಭಾಗದ ಜನರು ನೀರಾವರಿ ಪ್ರದೇಶವನ್ನು ಹೊಂದಿ ಸಮೃದ್ಧಿ ಜೀವನ ನಡೆಸಲು ಸಹ ಶ್ರೀ ದೊಂಬಕಾಳೇಶ್ವರ ಸ್ವಾಮಿಯ ಕೃಪಾ ಕಟಾಕ್ಷ ಇದೆ ಎಂದರು.

ಕಾರ್ಯಕ್ರಮದಲ್ಲಿ ಪೂಜಾ ವಿಧಾನ ನೇರವೇರಿಸಿಕೊಟ್ಟ ಡಾ. ಸೆಲ್ವ ಪಿಳ್ಯಾಂ, ಮಾಜಿ ಉಪ ಸಭಾಪತಿ ಡಾ. ಮರಿತಿಬ್ಬೇಗೌಡ, ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಹೊಂಗನೂರು ಚಂದ್ರು, ಟ್ರಸ್ಟ್ ಗೌರವ ಅಧ್ಯಕ್ಷ ಎಂ.ಎಸ್. ರಮೇಶ್, ಅಧ್ಯಕ್ಷ ಚಂದ್ರಶೇಖರ್, ಹೊಂಗನೂರು ಕುಲ ಮಕ್ಕಳಾದ ತಮಿಳುನಾಡು ಶಿವಕುಮಾರ್, ಎನ್. ಗುಣಶೇಖರ್, ಮಣಿ ಮಾಸ್ಟರ್, ಗ್ರಾಪಂ ಅಧ್ಯಕ್ಷ ರೂಪ, ಉಪಾದ್ಯಕ್ಷ ನವೀನ್, ಮುಖಂಡರಾದ ಹೊಂಗನೂರು ಜಯರಾಜ್, ಮಣಿ, ಕಾಮಗೆರೆ ರವಿ, ಹೊಂಗನೂರು ರವಿ, ಗುಣಶೇಖರ್, ಸೆಲ್ವರಾಜ್, ಸ್ವಾಮಿ ಇತರರಿದ್ದರು.

7ಸಿಎಚ್ಎನ್‌10

ಚಾಮರಾಜನಗರ ತಾಲೂಕಿನ ಹೊಂಗನೂರು ಗ್ರಾಮದಲ್ಲಿ ಶ್ರೀ ದೊಂಬಕಾಳೇಶ್ವರ ಸ್ವಾಮಿ, ಶ್ರೀ ಗೂಳೇಶ್ವರಸ್ವಾಮಿ ಮತ್ತು ಶ್ರೀ ವೀರಮಾಸ್ತಿ ಕೆಂಪಮ್ಮ ದೇವಸ್ಥಾನಗಳ ಉದ್ಘಾಟನೆ ಹಾಗೂ ಧಾರ್ಮಿಕ ಕಾರ್ಯಕ್ರಮವನ್ನು ಸುತ್ತೂರು ಶ್ರೀಗಳು ಉದ್ಘಾಟಿಸಿದರು. ಶಾಸಕ ಎ.ಆರ್.ಕೃಷ್ಣಮುರ್ತಿ ಇತರರಿದ್ದರು.