ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ವಸುದೇವ ಕುಟುಂಬಕಂ ಎನ್ನುವ ನಾಣ್ಣುಡಿಯ ಸಾರ್ಥಕ ಭಾವಕ್ಕೆ ಹೋಲುವ ಎನ್.ಆರ್.ಕುಲಕರ್ಣಿ ಅವರು ಒಬ್ಬ ಸದ್ಗುಣ, ಸಹೃದಯಿ ವ್ಯಕ್ತಿ. ಇವರ ಬಕುಲ ಪುಷ್ಪ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭಕ್ಕೆ ಬಂದಿರುವುದು ನಮ್ಮ ಸುದೈವ ಎಂದು ನಾಗಣಸೂರಿನ ಬಮ್ಮಲಿಂಗೇಶ್ವರ ಬೃಹನ್ಮಠದ ಪೂಜ್ಯ ಶ್ರೀ ಷ.ಬ್ರ.ಶ್ರೀಕಂಠ ಶಿವಾಚಾರ್ಯ ಮಹಾಸ್ವಾಮೀಜಿಗಳು ಹೇಳಿದರು.ನಗರದ ಕಂದಗಲ್ಲ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಜರುಗಿದ ಎನ್.ಆರ್.ಕುಲಕರ್ಣಿ ಅವರ ಬಕುಲ ಪುಷ್ಪ ಅಭಿನಂದನ ಗ್ರಂಥ ಬಿಡುಗಡೆ ಹಾಗೂ ಗ್ರಂಥ ತುಲಾಭಾರ ಸಮಾರಂಭದಲ್ಲಿ ಅವರು ಮಾತನಾಡಿದರು. ಎನ್.ಆರ್.ಕುಲಕರ್ಣಿ ಅವರ ಕೈಯಲ್ಲಿ ನಾನು ವಿದ್ಯಾಭ್ಯಾಸ ಮಾಡಿದ್ದೇನೆ. ಅವರು ಎಂತಹ ವ್ಯಕ್ತಿ ಎಂದರೆ ಎಲ್ಲರನ್ನು ಪ್ರೀತಿ ಭಾವದಿಂದ ಸ್ನೇಹಭಾವ ನೋಡುವ ವ್ಯಕ್ತಿ. ಈ ಬಕುಲ ಪುಷ್ಪಕ್ಕೆ ಅವರ ತಾಯಿಯ ಹೆಸರಾದ ಬಕುಲಾಬಾಯಿ ಹೆಸರಿಟ್ಟಿರುವುದು ತಾಯಿಯಲ್ಲಿ ಇವರಿಗೆ ಪ್ರೀತಿ ವಾತ್ಸಲ್ಯದ ಭಾವನೆ ತೋರಿಸುತ್ತದೆ ಎಂದರು.
ತಂದೆ-ತಾಯಿಯನ್ನು ಗೌರವಿಸಿ. ಯಾರೂ ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೆ ಕಳುಹಿಸಬಾರದು. ಮನುಷ್ಯನ ಅಭಿಮಾನ ಹೇಗಿರಬೇಕೆಂದರೆ ಆಚಾರ-ವಿಚಾರ, ಉಚ್ಚಾರ ಸರಿ ಇದ್ದಾಗ ಮಾತ್ರ ನಾವು ಅಭಿನಂದನೆ ಸಲ್ಲಿಸುವ ವ್ಯಕ್ತಿಯ ಗುಣಲಕ್ಷಣ ತೋರಿಸಿದಂತಾಗುತ್ತದೆ. ನೀವು ಚಿಕ್ಕವರಿದ್ದಾಗ ಹೇಗೆ ನಿಮ್ಮ ತಾಯಿ ಪ್ರೀತಿ, ವಾತ್ಸಲ್ಯದಿಂದ ನೋಡುತ್ತಿದ್ದರೋ, ಅದೇ ರೀತಿ ನೀವು ಸಹ ನಿಮ್ಮ ತಂದೆ-ತಾಯಿ ನೋಡಿಕೊಳ್ಳಬೇಕು ಎಂದು ತಮ್ಮ ಹಿತವಚನ ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಒಂದು ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭಕ್ಕೆ ಇಷ್ಟೊಂದು ಜನ ಕೂಡಿರುವುದು ಸಂತಸ ತಂದಿದೆ ಎಂದ ಅವರು, ಸಾಹಿತ್ಯಾಭಿರುಚಿ ಎಲ್ಲರಲ್ಲಿ ಇರಬೇಕು. ಸಾಹಿತ್ಯ ಜ್ಞಾನದಿಂದ ನಾವು ನಮ್ಮ ಜೀವನದಲ್ಲಿ ಯಶಸ್ವಿ ಆಗಲು ಸಾಧ್ಯ. ಸಂಪತ್ತಿನಿಂದ ಜ್ಞಾನ ಸಂಪಾದಿಸಲು ಸಾಧ್ಯವಿಲ್ಲ. ನಮ್ಮಲ್ಲಿ ಜ್ಞಾನವೊಂದಿದ್ದರೆ ಈ ಜೀವನದಲ್ಲಿ ಏನೆಲ್ಲಾ ಪಡೆದುಕೊಳ್ಳಬಹುದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕೆ.ಎಫ್.ಅಂಕಲಗಿ ಮಾತನಾಡಿ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಂಶೋಧಕ ಡಾ.ಕೃಷ್ಣ ಕೋಲ್ಹಾರ ಕುಲಕರ್ಣಿ ಅವರು ವಹಿಸಬೇಕಿತ್ತು, ಆದರೆ ಅವರ ಅನಾರೋಗ್ಯದ ನಿಮಿತ್ತ ನನಗೆ ಅಧ್ಯಕ್ಷತೆ ಸ್ಥಾನ ನೀಡಿದ್ದರಿಂದ ತಮಗೆಲ್ಲರಿಗೂ ಧನ್ಯವಾದ ಹೇಳುತ್ತೇನೆ. ಬಕುಲ ಪುಷ್ಪ ಗ್ರಂಥದಲ್ಲಿ ಎನ್.ಆರ್. ಕುಲಕರ್ಣಿ ಅವರು ಬೆಳೆದು ಬಂದ ಪರಿ, ಅವರು ಅನುಭವಿದ ಕಷ್ಟ- ಸುಖಗಳನ್ನು ಕುರಿತು ಸವಿಸ್ತಾರವಾಗಿ ಬರೆದಿದ್ದಾರೆ ಎಂದರು.ವಿಶ್ರಾಂತ ಇಂಗ್ಲಿಷ್ ಪ್ರಾಧ್ಯಾಪಕ ಡಾ.ಆರ್.ಕೆ.ಕುಲಕರ್ಣಿ ಮಾತನಾಡಿ, ಮಣ್ಣಿಲ್ಲದೆ ಮಡಿಕೆ ಇಲ್ಲ. ಅದೇ ರೀತಿ ನಾವು ಮಾಡುವ ಕೆಲಸದಲ್ಲಿ ಆತ್ಮಸ್ಥೈರ್ಯ ಇದ್ದರೆ ಸಾಧನೆ ಮಾಡಬಹುದು. ಅದೇ ನಮ್ಮಲ್ಲಿ ಕಾರ್ಯಶಕ್ತಿಯನ್ನು ಮೈಗೂಡಿಸಿಕೊಳ್ಳಬೇಕು. ಎನ್.ಆರ್.ಕುಲಕರ್ಣಿಯವರು ತಾಂಬಾದಲ್ಲಿ ಜನಿಸಿ, ಬೊಮ್ಮನಹಳ್ಳಿ, ಜೇರಟಗಿಯಲ್ಲಿ ವಿದ್ಯಾಭ್ಯಾಸ ಕಲಿತು ನಂತರ ತಮ್ಮ ಶಿಕ್ಷಕ ವೃತ್ತಿಯನ್ನು ಗಡಿನಾಡ ಪ್ರದೇಶ ನಾಗಣಸೂರದಲ್ಲಿ ಸುಮಾರು 36 ವರ್ಷಗಳ ಕಾಲ ತಮ್ಮ ಸೇವೆಯನ್ನು ಕನ್ನಡ ಮಾತೆಗೆ ತಮ್ಮದೇ ಕೊಡುಗೆಯನ್ನು ನೀಡಿದ್ದಾರೆ ಎಂದು ವಿವರಿಸಿದರು.
ಇಂತಹ ಮಹಾನ್ ವ್ಯಕ್ತಿಯ ಅಭಿನಂದನಾ ಗ್ರಂಥವಾಗಿ ಹೊರಹೊಮ್ಮಿರುವ ಬಕುಲ ಪುಷ್ಪವು ಬಕುಲ ಎಂದರೆ ಎನ್.ಆರ್. ಕುಲಕರ್ಣಿ ಅವರ ತಾಯಿಯ ಹೆಸರಾದ ಬಕುಲಬಾಯಿ ಎಂಬದು. ಅದೇ ರೀತಿ ಪುಷ್ಪ ಎಂದರೆ ಹೂವು, ತಮ್ಮ ತಾಯಿಯ ನಿರ್ಮಲವಾದ ಆರ್ಶೀವಾದ ಸೂಚ್ಯಕವಾಗಿ ಬಕುಲ ಪುಷ್ಪ ಎಂಬುದು ಈ ಗ್ರಂಥವಾಗಿದೆ ಎಂದರು.ವಿ.ಎಸ್. ಖಾಡೆ ಸ್ವಾಗತಿಸಿದರು. ಡಾ.ಜಿ.ಡಿ.ಕೊಟ್ನಾಳ ಹಾಗೂ ಎಸ್.ಬಿ.ಬಾಗೇವಾಡಿ ಪರಿಚಯಿಸಿದರು. ಪ್ರೊ.ಯು.ಆರ್. ಕುಂಟೋಜಿ ಮಾತನಾಡಿದರು. ವಿದ್ಯಾವತಿ ಅಂಕಲಗಿ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಮಂದಾಕಿನಿ ಬಿರಾದಾರ ಮತ್ತು ಸಂಗಡಿಗರಿಂದ ವಚನ ಗಾಯನ ನಡೆಯಿತು.
ಡಾ.ಅನುರಾಧಾ ಜೋಶಿ, ಜಿ.ಆರ್.ಕುಲಕರ್ಣಿ, ಎಸ್.ಎಂ.ಕಣಬೂರ, ಜಿ.ಎಸ್.ಕುಲಕರ್ಣಿ, ಶಂಕರ ಬಸವಪ್ರಭು(ಸಕ್ರಿ), ಸಿದ್ದಲಿಂಗಪ್ಪ ಹದಿಮೂರ, ಮೋಹನ ಕುಲಕರ್ಣಿ, ಶಿವಪುತ್ರಪ್ಪ ಕೃಷ್ಣಮೂರ್ತಿ, ಶ್ರೀಶೈಲ ಮದಭಾವಿ, ಪಂಡಿರಾವ ಪಾಟೀಲ, ಸ್ಮೃತಿ ಕುಲಕರ್ಣಿ ಹಾಜರಿದ್ದರು.