ರಂಗಭೂಮಿ ಎಂದರೆ ಕೇವಲ ವೇದಿಕೆ ಮೇಲೆ ನಡೆಯುವ ನಾಟಕವಲ್ಲ. ವಜ್ರಸಿರಿ ರಂಗೋತ್ಸವ’ವು ಕೇವಲ ನಾಟಕಗಳ ಸರಣಿ ಅಲ್ಲ. ಇದು ರಂಗಭೂಮಿಯ ಮೇಲಿನ ಗೌರವ, ಕಲಾವಿದರ ಮೇಲಿನ ಅಭಿಮಾನ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಒಂದು ಸುಂದರ ಪ್ರಯತ್ನ.
ಧಾರವಾಡ:
ನಗರದ ಅಭಿನಯ ಭಾರತಿ, ಜನತಾ ಶಿಕ್ಷಣ ಸಮಿತಿ ಹಾಗೂ ಅಭಿನಯ ಭಾರತಿಯ ಪರ್ಯಾಯ ಸಮಿತಿಯ ವತಿಯಿಂದ ಜೆಎಸ್ಎಸ್ ಆವರಣದ ಸನ್ನಿದಿ ಭವನದಲ್ಲಿ ಏರ್ಪಡಿಸಿದ್ದ ಐದು ದಿನದಲ್ಲಿ ಆರು ನಾಟಕಗಳ ದಿ. ನ. ವಜ್ರಕುಮಾರ ಅವರ ಸ್ಮರಣೆಯ ವಜ್ರಸಿರಿ ರಂಗೋತ್ಸವಕ್ಕೆ ಜನತಾ ಶಿಕ್ಷಣ ಸಮಿತಿ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಜಿತ್ ಪ್ರಸಾದ ಚಾಲನೆ ನೀಡಿದರು.ಈ ವೇಳೆ ಮಾತನಾಡಿದ ಅವರು, ಸಾಂಸ್ಕೃತಿಕ ನೆಲದಲ್ಲಿ ‘ವಜ್ರಸಿರಿ ರಂಗೋತ್ಸವ’ಕ್ಕೆ ಚಾಲನೆ ನೀಡುತ್ತಿರುವುದು ಅತ್ಯಂತ ಸಂತೋಷದ ಹಾಗೂ ಹೆಮ್ಮೆಯ ಸಂಗತಿ. ರಂಗಭೂಮಿ ಎಂದರೆ ಕೇವಲ ವೇದಿಕೆ ಮೇಲೆ ನಡೆಯುವ ನಾಟಕವಲ್ಲ. ವಜ್ರಸಿರಿ ರಂಗೋತ್ಸವ’ವು ಕೇವಲ ನಾಟಕಗಳ ಸರಣಿ ಅಲ್ಲ. ಇದು ರಂಗಭೂಮಿಯ ಮೇಲಿನ ಗೌರವ, ಕಲಾವಿದರ ಮೇಲಿನ ಅಭಿಮಾನ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಒಂದು ಸುಂದರ ಪ್ರಯತ್ನ ಎಂದರು.ಮುಖ್ಯ ಅತಿಥಿಯಾಗಿದ್ದ ರಂಗಾಯಣದ ನಿರ್ದೇಶಕ ಝಾಕೀರ್ ನದಾಫ್ ಮಾತನಾಡಿ, ನಮ್ಮ ಸಮಾಜದಲ್ಲಿರುವ ಸಂತೋಷ, ನೋವು, ಸಂಘರ್ಷ, ಸಂಬಂಧ, ಮೌಲ್ಯಗಳು, ವ್ಯಂಗ್ಯ, ಕನಸುಗಳು, ಇವೆಲ್ಲವನ್ನೂ ರಂಗಭೂಮಿ ನಮ್ಮ ಮುಂದೆ ಜೀವಂತವಾಗಿ ತಂದು ನಿಲ್ಲಿಸುವ ಕಾರ್ಯಮಾಡುತ್ತವೆ ಎಂದು ಹೇಳಿದರು.ಸುಮನ ವಜ್ರಕುಮಾರ ಹಾಗೂ ಹುಬ್ಬಳ್ಳಿಯ ಗಂಗಾವತಿ ಸಿಲ್ಕ್ ಆ್ಯಂಡ್ ಸ್ಯಾರೀಸ್ ಸಂಸ್ಥೆಯ ಮುಖ್ಯಸ್ಥ ಆನಂದ ಕಮತಗಿ, ಪರ್ಯಾಯ ಸಮಿತಿ ಉಪಾಧ್ಯಕ್ಷ ಎಂ.ಆರ್. ಪಾಟೀಲ, ಸಮೀರ ಜೋಶಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀಮತಿ ದೀಕ್ಷಿತ ನಿರೂಪಿಸಿದರು. ಸಮೃದ್ದಿ ಪ್ರಾರ್ಥಿಸಿದರು. ಪರ್ಯಾಯ ಸಮಿತಿ ಅಧ್ಯಕ್ಷ ಪ್ರೊ. ವಸುದೇವ ಪರ್ವತಿ ಸ್ವಾಗತಿಸಿದರು. ಅಭಿನಯ ಭಾರತಿಯ ಅಧ್ಯಕ್ಷ ಪ್ರೊ. ಎ.ಕೆ. ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ಪರ್ಯಾಯ ಸಮಿತಿಯ ಕಾರ್ಯದರ್ಶಿ ಸುನೀಲ ಬಾಗೇವಾಡಿ ವಂದಿಸಿದರು. ನಂತರ ದಿ. ಯಶವಂತ್ ಸರದೇಶಪಾಂಡೆ ಅವರ ಪರಿಕಲ್ಪನೆಯ, ಹೆಸರಾಂತ ಕೊಳಲು ವಾದಕ, ಡಾ. ಪ್ರವೀಣ್ ಗೋಡಖಿಂಡಿ ರಚನೆ ಹಾಗೂ ನಿರ್ದೇಶನದಲ್ಲಿ, "ಕೊಳಲು ಕಾಮೆಡಿ " ಎಂಬ ವಿನೂತನ ಮಾದರಿಯ ಎರಡೇ ಪಾತ್ರದ ರಂಜನೀಯ ಹಾಸ್ಯ ನಾಟಕವು ಪ್ರದರ್ಶನಗೊಂಡಿತು. ಹಿರಿಯ ನಟ ರವಿ ಕುಲಕರ್ಣಿ ಹಾಗೂ ಕೊಳಲು ಮಾಂತ್ರಿಕ ಪ್ರವೀಣ್ ಗೋಡ್ಕಿಂಡಿ ಇವರ ಹಾಸ್ಯಮಯ ಜುಗಲ್ ಬಂದಿ ಸಂಭಾಷಣೆಗಳು ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸಿದವು. ಈ ವೇಳೆ ಸಮಿತಿ ಸದಸ್ಯರಾದ ಸಂಜಯ ಕಬ್ಬೂರು, ಸುಧೀರ ಪಿ.ಎಸ್, ಕೃಷ್ಣಮೂರ್ತಿ ಗೊಲ್ಲರ, ಎಮ್ ನಾರಾಯಣ ಇದ್ದರು.