ಸಾರಾಂಶ
ಗೋಪಾಲ್ ಯಡಗೆರೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗಸಮಾನಾಂತರ ಹಾಗೂ ಪರಿಹಾರ ರೂಪದಲ್ಲಿ ಕಾನೂನು ಬಾಹಿರವಾಗಿ ನಿವೇಶನಗಳನ್ನು ಮೈಸೂರಿನ ಮೂಡಾದಲ್ಲಿ ಹಂಚಲಾಗಿದೆ ಎಂಬ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಕಾಕತಾಳೀಯ ಎಂಬಂತೆ ಇಲ್ಲಿನ ವಾಜಪೇಯಿ ಬಡಾವಣೆಯಲ್ಲಿ ಸೂಡಾ ವತಿಯಿಂದ 12 ವರ್ಷಗಳ ಹಿಂದೆ ವಿವೇಚನಾ ಕೋಟಾದಡಿ ಹಂಚಿಕೆ ಮಾಡಲಾಗಿದ್ದ ನಿವೇಶನಗಳನ್ನು ರದ್ದುಗೊಳಿಸಲು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ನಿರ್ಧರಿಸಿದ್ದು, ಫಲಾನುಭವಿಗಳಿಗೆ ರದ್ದತಿ ನೋಟೀಸ್ ಜಾರಿ ಮಾಡುತ್ತಿದೆ. ಮೊದಲ ಹಂತದಲ್ಲಿ ಸುಮಾರು 200 ನಿವೇಶನಗಳನ್ನು ರದ್ದುಗೊಳಿಸಲಾಗುತ್ತಿದೆ.
ನಿವೇಶನ ರದ್ದು ನೋಟೀಸ್ ಬರುತ್ತಿದ್ದಂತೆ ನಿವೇಶನಗಳನ್ನು ಪಡೆದಿದ್ದ ಫಲಾನುಭವಿಗಳಲ್ಲಿ ತೀವ್ರ ಆತಂಕ, ನಿರಾಶೆ ಎದುರಾಗಿದೆ. ಹಂಚಿಕೆಯಲ್ಲಿ ನಿಯಮಗಳನ್ನು ಉಲ್ಲಂಘಿಸಿ ನಿವೇಶನ ಪಡೆದವರು ಇರುವಂತೆ ನಿವೇಶನ ರಹಿತರೂ ಇದ್ದು, ಇವರನ್ನು ಈ ಘಟನೆ ವಿಚಲಿತರನ್ನಾಗಿ ಮಾಡಿದೆ.ನಗರದ ಹೊರವಲಯದ ಮಲ್ಲಿಗೇನಹಳ್ಳಿಯ ವಾಜಪೇಯಿ ಬಡಾವಣೆಯಲ್ಲಿ ಈ ನಿವೇಶನ ಹಂಚಿಕೆ ನಡೆದಿತ್ತು. 12 ವರ್ಷದ ಬಳಿಕ ವಿವೇಚನಾ ಕೋಟಾದ ನೀಡಲಾಗಿದ್ದ ನಿವೇಶನಗಳನ್ನು ಇದೀಗ ರದ್ದು ಮಾಡಲಾಗಿದೆ. ವಿಶೇಷವೆಂದರೆ ನಿವೇಶನ ಪಡೆದವರು ನಿರಾಶೆ ಅನುಭವಿಸಿದ್ದಾರೆಯೇ ಹೊರತು ನಿವೇಶನ ಹಂಚಿಕೆಯಲ್ಲಿ ಭಾಗೀದಾರರಾದ ಅಧಿಕಾರಿಗಳು ಮತ್ತು ಆಗಿನ ಜನಪ್ರತಿನಿಧಿಗಳು ಮಾತ್ರ ಸಧ್ಯಕ್ಕಂತೂ ಸೇಪ್ ಆಗಿದ್ದಾರೆ. ಅವರ ಮೇಲೆ ಯಾವುದೇ ಕ್ರಮ ಜರುಗಿಸುವ ಸಾಧ್ಯತೆ ಕಡಿಮೆಯಾಗಿದೆ.
ಏನಿದು ಹಗರಣ?:2012 ರಲ್ಲಿ ಮಲ್ಲಿಗೇನಹಳ್ಳಿಯ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯನ್ನು ನಿರ್ಮಿಸಲಾಗಿದ್ದು, ಈ ನಿವೇಶನ ಹಂಚಿಕೆಯಲ್ಲಿ ಆರಂಭದಿಂದಲೂ ಅಕ್ರಮದ ಕರಿನೆರಳು ಬಿದ್ದೇ ಇತ್ತು. ರೈತರಿಂದ ಪಡೆದ ಭೂಮಿಯ ವಿಚಾರದಲ್ಲಿ, ಅವರಿಗೆ ಬದಲಾಗಿ ನೀಡಲಾದ ನಿವೇಶನಗಳ ವಿಚಾರದಲ್ಲಿ ಹಾಗೂ ವಿವೇಚನಾ ಕೋಟಾದಡಿ ನೀಡಿದ್ದ ನಿವೇಶನಗಳ ವಿಚಾರದಲ್ಲಿ ಸಾಕಷ್ಟು ಅಕ್ರಮದ ವಾಸನೆ ಬಡಿದಿತ್ತು. ಲೋಕಾಯುಕ್ತಕ್ಕೂ ದೂರು ದಾಖಲಾಗಿ ತನಿಖೆ ಆರಂಭಗೊಂಡಿತ್ತು.
ಈ ಬಡಾವಣೆಯಲ್ಲಿ 1500 ಕ್ಕೂ ಹೆಚ್ಚು ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ಆ ಪೈಕಿ ವಿವೇಚನಾ ಕೋಟಾ 150ಕ್ಕೂ ಹೆಚ್ಚು ನಿವೇಶನ ಸೇರಿದಂತೆ 1182 ಸೈಟ್ಗಳನ್ನು ಅಕ್ರಮವಾಗಿ ಹಂಚಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಇದರಲ್ಲಿ ಗಂಡ-ಹೆಂಡತಿಗೆ ಏಕ ಕಾಲಕ್ಕೆ ಸೈಟ್ ನೀಡಲಾಗಿರುವುದು, ಅರ್ಜಿ ಹಾಕಿದ್ದಕ್ಕಿಂತ ದೊಡ್ಡ ಅಳತೆಯ ನಿವೇಶನ ನೀಡಿರುವುದು, ಒಂದೇ ಸಲ ಅರ್ಜಿ ಹಾಕಿದವರಿಗೂ ಸೈಟ್ ನೀಡಲಾಗಿದೆ ಮತ್ತು ಪ್ರಾಧಿಕಾರದ ಸಿಬ್ಬಂದಿಗೂ ಸೈಟ್ ಕೊಡಲಾಗಿದೆ ಎಂಬುದೂ ಸೇರಿದಂತೆ ಹಲವು ರೀತಿಯ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದರಿಂದಾಗಿ ಅರ್ಹರಿಗೆ ಸೈಟ್ ಸಿಕ್ಕಿಲ್ಲ ಎಂದು ಆರೋಪಿಸಿ ಅನೇಕರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ಕುರಿತು ತನಿಖೆ ನಡೆಸಿದ್ದ ಲೋಕಾಯುಕ್ತ ವಿವೇಚನಾ ಕೋಟಾ ಸೇರಿದಂತೆ 1182 ಸೈಟ್ಗಳನ್ನು ಅನರ್ಹತೆ ಆಧಾರದ ಮೇಲೆ ರದ್ದು ಮಾಡುವ ನಿಟ್ಟಿನಲ್ಲಿ ನಿಮ್ಮ ಹಂತದಲ್ಲೇ ಕ್ರಮ ತೆಗೆದುಕೊಳ್ಳಿ ಎಂದು ಸೂಡಾಕ್ಕೆ ಸೂಚಿಸಿತ್ತು.ಲೋಕಾಯುಕ್ತ ವರದಿಯಲ್ಲಿ ಅಕ್ರಮದ ಕುರಿತು ವಿವರ ಇತ್ತು ಎನ್ನಲಾಗಿದೆ. ಈ ನಡುವೆ ಕೆಲವರು ಹೈಕೋರ್ಟಿನ ಮೆಟ್ಟಿಲು ಏರಿದ್ದರು. ಈ ಪ್ರಕರಣದಲ್ಲಿ ನಡೆದ ವಿಚಾರಣೆಯಲ್ಲಿ ಹೈಕೋರ್ಟ್ ಲೋಕಾಯುಕ್ತ ಮತ್ತು ಸರ್ಕಾರದ ನಿರ್ಧಾರವನ್ನು ಬದಿಗಿಟ್ಟು ನಿಯಮದಂತೆ ಕ್ರಮ ಜರುಗಿಸುವಂತೆ ಸೂಡಾಕ್ಕೆ ಆದೇಶ ನೀಡಿತ್ತು. ಇದಕ್ಕೆ ಇನ್ನಷ್ಟು ಕಾಲವಕಾಶ ನೀಡಬೇಕೆಂಬ ಸೂಡಾ ಮನವಿಯನ್ನು ಕೂಡ ತಳ್ಳಿ ಹಾಕಿತ್ತು. ಹಲವು ದಶಕಗಳ ಹಿಂದೆಯೇ ವಿವೇಚನಾ ಕೋಟಾ ಎಂಬುದನ್ನು ಸರ್ಕಾರ ರದ್ದಗೊಳಿಸಿದ್ದರಿಂದ ವಿವೇಚನಾ ಕೋಟಾದಡಿ ನೀಡಲಾದ ನಿವೇಶನಗಳನ್ನು ರದ್ದುಗೊಳಿಸಿ ಸೂಡಾ ನಿರ್ಧಾರ ಕೈಗೊಂಡು, ಫಲಾನುಭವಿಗಳಿಗೆ ಆದೇಶ ಪತ್ರ ರವಾನಿಸುತ್ತಿದೆ.
ಒಟ್ಟಿನಲ್ಲಿ ಒಂದು ನಿವೇಶನ ಖರೀದಿಸಿ ಅದರಲ್ಲಿ ಮನೆ ಕಟ್ಟಿಕೊಳ್ಳಬೇಕು ಎಂಬ ಕನಸಿನೊಂದಿಗೆ ಅರ್ಜಿ ಸಲ್ಲಿಸಿ ವಿವೇಚನಾ ಕೋಟಾದಡಿ ಸೈಟ್ ಪಡೆದ ಫಲಾನುಭವಿಗಳು ಇದೀಗ ಸೈಟ್ ಕಳೆದುಕೊಳ್ಳಬೇಕಾಗಿದ್ದು, ತಪ್ಪು ಮಾಡಿದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸದಿರುವ ಸರ್ಕಾರದ ಕ್ರಮ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.ಎಲ್ಲ ನಿವೇಶನ ರದ್ದು!
ರಾಜ್ಯ ಉಚ್ಚ ನ್ಯಾಯಾಲಯದ ಆದೇಶದಂತೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಈ ವಿಚಾರ ಸಂಬಂಧ ಸೂಡಾ ಸಭೆಯಲ್ಲಿ ಚರ್ಚೆ ನಡೆದು, ತೀರಾ ಅರ್ಹರ ನಿವೇಶನ ರದ್ದು ಮಾಡುವುದು ಬೇಡ. ಸಿಬ್ಬಂದಿಗಳಲ್ಲಿ ಕೂಡ ಕೆಲವರಿಗೆ ಇದುವರೆಗೆ ನಿವೇಶನ ಪಡೆಯಲೇ ಆಗಿಲ್ಲ. ಅಂತಹವರಿಗೆ ನಿವೇಶನ ಉಳಿಸೋಣ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಹೈಕೋರ್ಟ್ ಆದೇಶ ಪಾಲಿಸಲೇಬೇಕಾಗಿದ್ದರಿಂದ ಎಲ್ಲ ನಿವೇಶನ ರದ್ದುಗೊಳಿಸಲೇಬೇಕಾಗಿದೆ. ನಿವೇಶನ ಕಳೆದುಕೊಂಡವರು ತಾವು ಪಾವತಿಸಿದ್ದ ಹಣವನ್ನು ವಾಪಸ್ ಪಡೆಯಬಹುದು ಅಥವಾ ಕೋರ್ಟ್ ಮೊರೆ ಹೋಗಬಹುದು ಎಂದು ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಹೇಳೀದರು.