ಸಮರ್ಪಕ ಬಸ್‌ ಸೌಕರ್ಯಕ್ಕೆ ಎಬಿವಿಪಿ ಆಗ್ರಹ

| Published : Jan 12 2024, 01:46 AM IST

ಸಾರಾಂಶ

ಬೆಳಗಾವಿ: ಸಮರ್ಪಕ ಬಸ್‌ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಬುಧವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸಮರ್ಪಕ ಬಸ್‌ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಬುಧವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ನಗರದ ಲಿಂಗರಾಜು ಕಾಲೇಜಿನಿಂದ ಪ್ರತಿಭಟನಾ ರ್‍ಯಾಲಿ ಆರಂಭಿಸಿದ ವಿದ್ಯಾರ್ಥಿಗಳು ಚನ್ನಮ್ಮ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದರು. ಈ ವೇಳೆ ಪ್ರತಿಭಟನಾ ಮಾರ್ಗದುದ್ದಕ್ಕೂ ಬಸ್‌ ಸೌಕರ್ಯ ಕಲ್ಪಿಸುವಂತೆ ಘೋಷಣೆ ಕೂಗಿದರು. ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಕೆ ಸಾರಿಗೆ ಬಸ್‌ಗಳ ಸೌಲಭ್ಯವಿಲ್ಲ. ಅಧಿಕಾರಿಗಳು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗುವ ರೀತಿಯಲ್ಲಿ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಹಳ್ಳಿಯಿಂದ ನಗರದ ಕಾಲೇಜುಗಳಿಗೆ ವಿದ್ಯಾಭ್ಯಾಸಕ್ಕೆ ಬರುವ ವಿದ್ಯಾರ್ಥಿಗಳಿಗೆ ಬಸ್ಸಿನ ಸಮಸ್ಯೆ ಉಂಟಾಗಿದೆ. ‘ಶಕ್ತಿ’ ಯೋಜನೆಯಿಂದ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಶಾಲಾ, ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗಿದೆ. ಸುಳೆಭಾವಿ ವಂಟಮೂರಿ , ಕಣಬರ್ಗಿ, ಖಾನಾಪೂರ ತಾಲೂಕಿನ ಹಳ್ಳಿಗಳು ಸಂಕೇಶ್ವರ, ಮುತ್ನಾಳ, ಸಂಪಗಾವಿ, ಗಣೇಶಪುರ ಹಳ್ಳಿಗಳಿಗೆ ಬಸ್ಸುಗಳ ಸಂಖ್ಯೆ ಹೆಚ್ಚಿಸಬೇಕು, ಸರ್ಕಾರಕ್ಕೆ ಮುಂದಿನ ಯೋಜನೆಯಲ್ಲಿ ವಿದ್ಯಾರ್ವಿಗಳಿಗೂ ಉಚಿತ ಬಸ್ಸಿನ ಪ್ರಯಾಣವನ್ನು ಒದಗಿಸಿಕೊಡಬೇಕು. ಅಲ್ಲದೇ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚುವರಿ ಬಸ್ ಬಿಡಬೇಕೆಂದು ಆಗ್ರಹಿಸಿದರು.

ಪ್ರತಿಭಟನೆ ಎಬಿವಿಪಿ ಜಿಲ್ಲಾ ಸಂಚಾಲಕ ಪ್ರಶಾಂತ ಶೇಳಕೆರೆ , ರಾಜ್ಯ ಕಾನೂನು ವಿದ್ಯಾರ್ಥಿ ಸಂಚಾಲಕ ರೋಹಿತ್ ಉಮನಾಬಾದಿಮಠ, ನಗರ ಸಂಘಟನಾ ಕಾರ್ಯದರ್ಶಿ ಸಚಿನ್ ಹೀರೆಮಠ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ದರ್ಶನ ಹೆಗಡೆ, ಜಿಲ್ಲಾ ಸಂಚಾಲಕ ಪ್ರಶಾಂತ ಶಲ್ಲಿಕೇರಿ, ರಾಜ್ಯ ಸಹ ಕಾರ್ಯದರ್ಶಿ ಮನೋಜ್ ಪಾಟೀಲ, ದೇವೇಂದ್ರ ಸನ್ನಮ್ಮನವರ, ಪ್ರಜ್ವಲ್ ನಾಯಕ, ಮಂಜುನಾಥ ಹಂಚಿನಮನಿ, ಮಲ್ಲು ಮುಕುಂದ, ಮಲ್ಲಿಕಾರ್ಜುನ ಪೂಜಾರಿ, ಯಲ್ಲಪ್ಪ ಬೊಮ್ಮನಹಳ್ಳಿ ಸೇರಿದಂತೆ ಮೊದಲಾದವರು ಭಾಗವಹಿಸಿದ್ದರು.