ಕನ್ನಡಪ್ರಭ ವಾರ್ತೆ ಶಿರಸಿ
ನಗರದ ಕೆಎಚ್ಬಿ ಕಾಲನಿ ಹೊಸ ಬಡಾವಣೆಯಲ್ಲಿ ನಡೆದ ವೈದ್ಯನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿರುವುದಾಗಿ ಉತ್ತರ ಕನ್ನಡ ಜಿಲ್ಲಾ ಎಸ್ಪಿ ದೀಪನ್ ಎಂ.ಎನ್. ತಿಳಿಸಿದರು.ನಗರದ ಡಿವೈಎಸ್ಪಿ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಅವರು ಮಾಹಿತಿ ನೀಡಿದರು. 5 ತಿಂಗಳ ಹಿಂದೆ ವೈದ್ಯರ ಪತ್ನಿ ಮೃತಪಟ್ಟಿದ್ದರು. ಮಂಜುಗುಣಿ ದೇವಸ್ಥಾನದಲ್ಲಿ ಏ.20ರಂದು 2ನೇ ಮದುವೆಗೆ ಹತ್ಯೆಯಾದ ರಮೇಶ ಸಿದ್ಧತೆ ಮಾಡಿಕೊಂಡಿದ್ದರು. 19ರಂದು ಮನೆಗೆ ಸಂಬಂಧಿಕರು ಬಂದಾಗ ಬಾಗಿಲು ತೆರೆಯದಿದ್ದಾಗ ಹತ್ಯೆಯಾಗಿರುವುದು ಬೆಳಕಿಗೆ ಬಂದಿದೆ.
ಹತ್ಯೆ ಮಾಡಿದ ಆರೋಪಿಯನ್ನು ಈಗಾಗಲೇ ಬಂಧನ ಮಾಡಿದ್ದೇವೆ. ಕಾನೂನಿನ ತೊಡಕು ಇರುವುದರಿಂದ ಹೆಸರನ್ನು ಬಹಿರಂಗ ಮಾಡಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.ಸುದ್ದಿಗೋಷ್ಠಿಯಲ್ಲಿ ಡಿವೈಎಸ್ಪಿ ಗೀತಾ ಪಾಟೀಲ್, ಇನ್ಸ್ಪೆಕ್ಟರ್ ರಮೇಶ್ ಹೂಗಾರ, ನಗರ ಠಾಣೆ ಪಿಎಸ್ಐ ನರಸಿಂಹಲು, ಮಾರ್ಕೆಟ್ ಯಾರ್ಡ್ ಪಿಎಸ್ಐ ಬಸವರಾಜ್ ಕನಶೆಟ್ಟಿ ಸೇರಿದಂತೆ ಅನೇಕ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.ಸ್ಥಳ ಮಹಜರು:
ಸಿಪಿಐ ಶಶಿಕಾಂತ್ ವರ್ಮಾ ನೇತೃತ್ವದಲ್ಲಿ ಸೋಮವಾರ ಸಂಜೆ ಆರೋಪಿಯನ್ನು ಕೊಲೆ ಮಾಡಿದ ಸ್ಥಳಕ್ಕೆ ಕರೆತಂದು ಸ್ಥಳ ಮಹಜರು ಮಾಡಲಾಯಿತು.ಕೊಲೆ ಮಾಡಲು ಬಳಸಿದ ಆಯುಧ (ಲಟ್ಟಣಿಗೆ) ಕುರಿತು ಪೊಲೀಸರು ವಿಚಾರಿಸಿದಾಗ ಆರೋಪಿಯು ಚಾಣಾಕ್ಷ ನಡೆಯ ಬುದ್ದಿ ವಹಿಸಿ ಕೊಲೆ ಮಾಡಿದ ವ್ಯಕ್ತಿಯ ಮನೆಯಿಂದ ಸುಮಾರು 400ರಿಂದ 500 ಮೀಟರ್ ದೂರದಲ್ಲಿರುವ ಗಿಡಗಂಟೆಗಳಿರುವ ರಸ್ತೆಯ ಪಕ್ಕದ ಪೊದೆಯಲ್ಲಿ ಲಟ್ಟಣಿಗೆ ಎಸೆದಿರುವುದಾಗಿ ಪೊಲೀಸರಿಗೆ ತಿಳಿಸಿದನು. ಆ ಮಾಹಿತಿ ಆಧರಿಸಿ ಪೊಲೀಸರು ಆರೋಪಿಯನ್ನು ಸ್ಥಳಕ್ಕೆ ಕರೆತಂದು ಸ್ಥಳ ಮಹಜರು ಮಾಡಿ ಲಟ್ಟಣಿಗೆಯನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡರು. ನಂತರ ಹೆಚ್ಚಿನ ಮಾಹಿತಿ ಕಲೆ ಹಾಕಲು ಪೊಲೀಸ್ ಬೀಗಿ ಭದ್ರತೆಯಲ್ಲಿ ಠಾಣೆಗೆ ಕರೆದೊಯ್ಯಲಾಯಿತು.ಮಾರ್ಕೆಟ ಯಾರ್ಡ್ ಪಿಎಸ್ಐ ಬಸವರಾಜ್ ಕನಶೆಟ್ಟಿ, ಕ್ರೈಂ ವಿಭಾಗದ ಪಿಎಸ್ಐ ರಾಜಕುಮಾರ್ ಸೇರಿದಂತೆ ಅನೇಕ ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು.