ಕೋರ್ಟ್‌ ತೀರ್ಪಿನಂತೆ ಅರ್ಹರಿಗೆ ನಿವೇಶನ ಹಂಚಿಕೆಗೆ ಕ್ರಮ: ಸೂಡಾ ಅಧ್ಯಕ್ಷ ಹೆಚ್.ಎನ್.ಸುಂದರೇಶ್ ಸ್ಪಷ್ಟನೆ

| Published : Jul 07 2024, 01:23 AM IST

ಕೋರ್ಟ್‌ ತೀರ್ಪಿನಂತೆ ಅರ್ಹರಿಗೆ ನಿವೇಶನ ಹಂಚಿಕೆಗೆ ಕ್ರಮ: ಸೂಡಾ ಅಧ್ಯಕ್ಷ ಹೆಚ್.ಎನ್.ಸುಂದರೇಶ್ ಸ್ಪಷ್ಟನೆ
Share this Article
  • FB
  • TW
  • Linkdin
  • Email

ಸಾರಾಂಶ

ನ್ಯಾಯಾಲಯದ ಈ ಆದೇಶಕ್ಕೆ ಮೊದಲು, ಲೋಕಾಯುಕ್ತರ ತನಿಖಾ ವರದಿಯ ನಂತರ, ಪ್ರಾಧಿಕಾರದ ಸಭೆಯ ನಿರ್ಣಯದಂತೆ ನಿವೃತ್ತ ನ್ಯಾಯಾಧೀಶರ ಸಮಿತಿಯಲ್ಲಿ ವಿಸ್ತೃತವಾಗಿ ಸಮಾಲೋಚನೆ ನಡೆಸಿ, ವಾಜಪೇಯಿ ಬಡಾವಣೆಗೆ ಅರ್ಹರನ್ನು ಆಯ್ಕೆ ಮಾಡಲಾಗಿತ್ತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ರಾಜ್ಯ ಉಚ್ಚ ನ್ಯಾಯಾಲಯದ ಆದೇಶದಂತೆ ವಾಜಪೇಯಿ ಬಡಾವಣೆಯಲ್ಲಿ ವಿವೇಚನಾ ಕೋಟಾದಡಿ ಹಂಚಲಾದ ನಿವೇಶನಗಳನ್ನು ರದ್ದುಗೊಳಿಸಿದ ಬಳಿಕ ಉಳಿದಂತೆ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಲು ಕ್ರಮ ವಹಿಸಲಾಗುವುದು ಎಂದು ಸೂಡಾ ಅಧ್ಯಕ್ಷ ಹೆಚ್.ಎನ್.ಸುಂದರೇಶ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಾಲಯದ ತೀರ್ಪಿನಂತೆ ಸೂಡಾದಲ್ಲಿ ಸೇವೆ ಸಲ್ಲಿಸುತ್ತಿರುವ 17 ಸಿಬ್ಬಂದಿ ಸೇರಿದಂತೆ ಅಧ್ಯಕ್ಷರ ವಿವೇಚನಾ ಕೋಟಾದಡಿ ಹಂಚಿಕೆ ಮಾಡಲಾಗಿದ್ದ 142 ಜನರು ಮತ್ತು ಪತಿ-ಪತ್ನಿ ಪ್ರಕರಣಗಳಲ್ಲಿ ಆಯ್ಕೆಗೊಂಡಿದ್ದ 16 ಫಲಾನುಭವಿಗಳ ನಿವೇಶನಗಳ ಹಂಚಿಕೆಯನ್ನು ರದ್ದುಗೊಳಿಸಿದ್ದು, ಈ ಸಂಬಂಧ ನೋಟೀಸ್‌ ಜಾರಿಗೊಳಿಸಲಾಗುತ್ತಿದೆ ಎಂದರು.

ವಾಜಪೇಯಿ ಬಡಾವಣೆಯಲ್ಲಿ 1801 ನಿವೇಶನಗಳನ್ನು ಸೃಜಿಸಲಾಗಿತ್ತು. ಈ ನಿವೇಶನಗಳಲ್ಲಿ 217 ನಿವೇಶನಗಳನ್ನು ಭೂ ಮಾಲೀಕರಿಗೆ ಪರಿಹಾರ ರೂಪದಲ್ಲಿ ನೀಡಲಾಗಿತ್ತು. 250 ಮೂಲೆ ನಿವೇಶನಗಳನ್ನು ಕಾಯ್ದಿರಿಸಲಾಗಿದೆ. 19 ನಿವೇಶನಗಳನ್ನು ವೀರಪ್ಪನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದವರಿಗೆ ಸರ್ಕಾರದ ಆದೇಶದಂತೆ ವಿತರಿಸಲಾಗಿತ್ತು. ಭೂ ಮಾಲೀಕರಿಗೆ ನಿವೇಶನ ರೂಪದ ಪರಿಹಾರ ಪಡೆಯದೇ ನಗದು ರೂಪದ ಪರಿಹಾರ ಪಡೆದಾಗ ಉಳಿದ 142 ನಿವೇಶನಗಳನ್ನು ವಿವೇಚನಾ ಕೋಟಾದಡಿ ಹಂಚಿಕೆ ಮಾಡಲಾಗಿತ್ತು ಎಂದರು.

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು 2009-10ನೇ ಸಾಲಿನಲ್ಲಿ ನಗರದ ಹೊರವಲಯ ಮಲ್ಲಿಗೇನಹಳ್ಳಿಯಲ್ಲಿ ಸಾರ್ವಜನಿಕ ವಿತರಣೆಗಾಗಿ ಸುಮಾರು 172 ಎಕರೆ ಪ್ರದೇಶದಲ್ಲಿ ಸೃಜಿಸಲಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯ ನಿವೇಶನ ಹಂಚಿಕೆಯಲ್ಲಿ ಆಗಿರಬಹುದಾದ ಸಮಸ್ಯೆಯ ಪರಿಹಾರಕ್ಕಾಗಿ 2023ರ ಆಗಸ್ಟ್ ಮಾಹೆಯಲ್ಲಿ ನ್ಯಾಯಾಲಯ ನೀಡಿದ ಆದೇಶದಂತೆ ತಮ್ಮ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿವೇಶನ ಹಂಚಿಕೆ ರದ್ದು ಹಾಗೂ ಉಳಿದ ನಿವೇಶನಗಳನ್ನು ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ನ್ಯಾಯಾಲಯದ ಈ ಆದೇಶಕ್ಕೆ ಮೊದಲು, ಲೋಕಾಯುಕ್ತರ ತನಿಖಾ ವರದಿಯ ನಂತರ, ಪ್ರಾಧಿಕಾರದ ಸಭೆಯ ನಿರ್ಣಯದಂತೆ ನಿವೃತ್ತ ನ್ಯಾಯಾಧೀಶರ ಸಮಿತಿಯಲ್ಲಿ ವಿಸ್ತೃತವಾಗಿ ಸಮಾಲೋಚನೆ ನಡೆಸಿ, ಅರ್ಹರನ್ನು ಆಯ್ಕೆ ಮಾಡಲಾಗಿತ್ತು. ಕೆಲವು ಸೌಲಭ್ಯವಂಚಿತ ಅರ್ಜಿದಾರರು ಹಲವು ನಿಯಮಗಳನ್ನು ಉಲ್ಲಂಘಿಸಲಾಗಿರುವ ಬಗ್ಗೆ ಉಚ್ಚ ನ್ಯಾಯಾಲದಯಲ್ಲಿ ಪ್ರಶ್ನಿಸಿದ್ದರು. ಸದರಿ ಪ್ರಕರಣದಲ್ಲಿ ವಾದ-ವಿವಾದಗಳನ್ನು ಆಲಿಸಿದ ನ್ಯಾಯಾಲಯವು ನೀಡಿದ ತೀರ್ಪಿನಂತೆ ಪ್ರಸ್ತುತ ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದರು. ಗೋಷ್ಠಿಯಲ್ಲಿ ಸೂಡಾ ಆಯುಕ್ತ ವಿಶ್ವನಾಥ ಮುದ್ದಜ್ಜಿ, ಇಂಜಿನಿಯರ್ ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.

ಭದ್ರಾವತಿಯಲ್ಲಿ ಬಡಾವಣೆ ನಿರ್ಮಾಣ

ಪ್ರಾಧಿಕಾರದ ವ್ಯಾಪ್ತಿಗೊಳಪಡುವ ಭದ್ರಾವತಿಯಲ್ಲಿ 34 ಎಕರೆ ಭೂಪ್ರದೇಶವನ್ನು ಗುರುತಿಸಲಾಗಿದ್ದು, ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಅಲ್ಲದೇ ಊರುಗಡೂರು ಪ್ರದೇಶ ದಲ್ಲಿ ಈಗಾಗಲೇ ಶೇ.85ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಸುಮಾರು 687 ನಿವೇಶನಗಳ ಹಂಚಿಕೆ ಕಾರ್ಯ ಶೀಘ್ರದಲ್ಲಿ ಕೈಗೊಳ್ಳಲಾಗುವುದು ಎಂದರು.