ಮೀಸಲಾತಿ ದುರ್ಬಳಕೆ ವಿರುದ್ಧ ದೂರು ನೀಡಿದರೆ ಕ್ರಮ

| Published : Jun 19 2025, 12:34 AM IST / Updated: Jun 19 2025, 12:35 AM IST

ಸಾರಾಂಶ

ಪರಿಶಿಷ್ಟರ ಸುಳ್ಳು ಜಾತಿ ಪ್ರಮಾಣಪತ್ರ ಪಡೆದು ಮೀಸಲಾತಿ ದುರುಪಯೋಗ ಮಾಡಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ ಎಚ್ಚರಿಸಿದ್ದಾರೆ.

- ಪರಿಶಿಷ್ಟ ಜಾತಿ-ಪಂಗಡಗಳ ಕುಂದುಕೊರತೆ ಸಭೆಯಲ್ಲಿ ಜಿಲ್ಲಾ ಎಸ್‌ಪಿ ಭರವಸೆ ।

- ದಲಿತರಿಗೆ ದೇಗುಲ ಪ್ರವೇಶ ನಿರಾಕರಿಸುವಂತಿಲ್ಲ ಎಂದು ಎಚ್ಚರಿಕೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ಪರಿಶಿಷ್ಟರ ಸುಳ್ಳು ಜಾತಿ ಪ್ರಮಾಣಪತ್ರ ಪಡೆದು ಮೀಸಲಾತಿ ದುರುಪಯೋಗ ಮಾಡಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ ಎಚ್ಚರಿಸಿದರು.

ನಗರದ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಬುಧವಾರ ಪರಿಶಿಷ್ಟ ಜಾತಿ-ಪಂಗಡಗಳ ಕುಂದುಕೊರತೆ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವೀರಶೈವ ಜಂಗಮರು ಎಸ್‌ಸಿ ಅಂತಾ ಬರೆಸಿರುವುದು ತುಂಬಾ ದಿನಗಳಿಂದ ಚರ್ಚೆಯಲ್ಲಿರುವ ವಿಚಾರ. ಒಂದು ವೇಳೆ ವೀರಶೈವ ಜಂಗಮರು ಎಸ್‌ಸಿ ಅಂತಾ ಬರೆಸಿ, ಪರಿಶಿಷ್ಟರ ಸೌಲಭ್ಯ ಪಡೆದು, ದುರ್ಬಳಕೆ ಮಾಡಿರುವ ಬಗ್ಗೆ ಮಾಹಿತಿ ಇದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಅವಕಾಶವಿದೆ. ಅಂತಹ ನಿರ್ಧಿಷ್ಟ ಮಾಹಿತಿ ನೀಡಿದರೆ ಸಂಬಂಧಿಸಿದ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದರು.

ಡಿಎಸ್‌ಎಸ್‌ ಹರಿಹರ ಸಂಚಾಲಕ ಪಿ.ಜೆ. ಮಹಾಂತೇಶ ಮಾತನಾಡಿ, ವೀರಶೈವ ಜಂಗಮರು ಕೆಲವೆಡೆ ಬೇಡ ಜಂಗಮ ಅಂತಾ ಸುಳ್ಳು ಜಾತಿ ಬರೆಸಿದ್ದಾರೆ. ಅಲೆಮಾರಿ ಜಂಗಮ, ಬೇಡ ಜಂಗಮ ಎಸ್‌ಸಿಗೆ ಬರುತ್ತದೆ. ಆದರೆ, ಮೇಲ್ವರ್ಗದವರು ಪರಿಶಿಷ್ಟ ಜಾತಿ ಎಂಬುದಾಗಿ ಬರೆಸಿದ್ದರಿಂದ ಪರಿಶಿಷ್ಟರಿಗೆ ಘೋರ ಅನ್ಯಾಯವಾಗುತ್ತದೆ. ಈ ಬಗ್ಗೆ ಕ್ರಮ ಕೈಗೊಳ್ಳಿ. ಹರಿಹರದಲ್ಲಿ ದಲಿತರ ಸಭೆ ಮಾಡಬೇಕು. ಕಡ್ಲೆಗುಂದಿ ಗ್ರಾಮಕ್ಕೆ ಬಸ್‌ ಸೌಕರ್ಯವಿಲ್ಲದೇ, ತೊಂದರೆಯಾಗಿದೆ. ಪ್ರೊ.ಕೃಷ್ಣಪ್ಪ ಸ್ಮಾರಕ ಭವನ ನಿರ್ಮಿಸಬೇಕು ಎಂದು ಒತ್ತಾಯಿಸಿದರು. ಅದಕ್ಕೆ ಎಸ್‌ಪಿ ಅವರು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಮಾದಿಗ ದಂಡೋರದ ಜಿಲ್ಲಾಧ್ಯಕ್ಷ ಜಗಳೂರು ಗೌರಿಪುರದ ಕುಬೇರಪ್ಪ ಮಾತನಾಡಿ, ಇಂದಿಗೂ ಅಸ್ಪೃಶ್ಯತೆ ತಾಂಡವವಾಡುತ್ತಿದೆ. ಕೆಲವು ಸಣ್ಣ, ಪುಟ್ಟ ದೇವಸ್ಥಾನಗಳಲ್ಲೂ ದಲಿತರಿಗೆ ಪ್ರವೇಶ ನಿರಾಕರಿಸಲಾಗುತ್ತದೆ. ಪುಣ್ಯಸ್ಥಳಗಳ ದೇವಸ್ಥಾನಗಳಿಗೂ ಮುಕ್ತ ಪ್ರವೇಶ ಇಲ್ಲವಾಗಿದೆ. ಕೆಲ ಸರ್ಕಾರಿ ಕಚೇರಿಗಳಲ್ಲಿ ಅಂಬೇಡ್ಕರ್ ಜಯಂತಿ ಆಚರಿಸುವುದಿಲ್ಲ ಎಂದು ದೂರಿದರು. ಆಗ ಎಸ್ಪಿ ಅವರು ದಲಿತರಿಗೆ ದೇವಸ್ಥಾನಗಳ ಪ್ರವೇಶ ನಿರಾಕರಿಸುವ ಪ್ರಕರಣ ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು. ನಿರ್ದಿಷ್ಟ ಘಟನೆ ಬಗ್ಗೆ ಮಾಹಿತಿ ನೀಡಿದರೆ, ಇಂದೇ ಕ್ರಮ ಕೈಗೊಳ್ಳುತ್ತೇವೆ ಎಂದರು.

ಹರಿಹರದ ಎಚ್.ದೇವೇಂದ್ರಪ್ಪ ಮಾತನಾಡಿ, ಹರಿಹರದಲ್ಲಿ ದಲಿತರನ್ನೇ ಮತಾಂತರಕ್ಕೆ ಗುರಿಯಾಗಿ ಮಾಡಿಕೊಳ್ಳಲಾಗುತ್ತಿದೆ. ಬೆಳ್ಳೂಡಿ, ಗುತ್ತೂರು ಗ್ರಾಮ ಇತರೆ ಗ್ರಾಮಗಳ ದಲಿತರನ್ನು ಹೆಚ್ಚಾಗಿ ಮತಾಂತರ ಮಾಡಿಸುವ ಕೆಲಸವಾಗುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಗಮನ ಹರಿಸಬೇಕು ಎಂದರು. ಆಗ ಎಸ್ಪಿ ಉಮಾ ಪ್ರಶಾಂತ, ಪರಿಶಿಷ್ಟರು ಹೆಚ್ಚಾಗಿರುವ ಗ್ರಾಮಗಳಲ್ಲಿ ಗ್ರಾಮೀಣ, ತಾಲೂಕು ಮಟ್ಟದಲ್ಲಿ ಜಾತೀಯತೆ, ಬಾಲ್ಯವಿವಾಹದಂತಹ ವಿಚಾರಗಳ ಬಗ್ಗೆ ಕಾರ್ಯಾಗಾರ ಆಯೋಜಿಸಲಾಗುವುದು. ಮತಾಂತರ ಬಗ್ಗೆ ನಿರ್ದಿಷ್ಟ ಮಾಹಿತಿ ಇದ್ದರೆ, ಸೂಕ್ತ ಕ್ರಮ ಜರುಗಿಸುವ ಭರವಸೆ ನೀಡಿದರು.

ಸಾಹಿತಿ ಉಚ್ಚಂಗಿಪ್ರಸಾದ ಮಾತನಾಡಿ, ಸಂತೇಬೆನ್ನೂರಿನಲ್ಲಿ ದಲಿತರಿಗೆ ಸ್ಮಶಾನಕ್ಕೆ ಭೂಮಿ ಕೊಡಲು ಮೇಲ್ಜಾತಿಯವರು ಒಪ್ಪಿದರೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ ಎಂದರು. ಚನ್ನಗಿರಿ ಭೀಮ್ ಆರ್ಮಿಯ ತಿಪ್ಪೇಶ ಮಾತನಾಡಿ, ಕಂಸಾಗರದಲ್ಲಿ ಸರ್ಕಾರಿ ಶಾಲೆಗಳು ಬೀಳುವ ಸ್ಥಿತಿಯಲ್ಲಿದ್ದು, ಮಳೆನೀರಲ್ಲೇ ಮಕ್ಕಳು ಪಾಠ ಕೇಳಬೇಕಾಗಿದೆ ಎಂದರು. ನ್ಯಾಮತಿಯ ಜಗದೀಶ ಇತರರು ಮಾತನಾಡಿ, ನ್ಯಾಮತಿ ಭಾಗದಲ್ಲಿ ಖಾಸಗಿ ಬಸ್‌ಗಳ ಹಾವಳಿ ಮಿತಿ ಮೀರಿದೆ. ನ್ಯಾಮತಿಯಲ್ಲಿ ಹಂಪ್ಸ್‌, ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ಮನವಿ ಮಾಡಿದರು.

ಎಎಸ್‌ಪಿಗಳಾದ ಜಿ.ಮಂಜುನಾಥ, ಚನ್ನಗಿರಿ ಸ್ಯಾಮ್ ವರ್ಗೀಸ್, ಡಿವೈಎಸ್ಪಿಗಳಾದ ಬಿ.ಎಸ್.ಬಸವರಾಜ, ಬಿ.ಶರಣ ಬಸವೇಶ್ವರ, ವಿವಿಧ ಸಂಘಟನೆ, ಪಕ್ಷಗಳ ಮುಖಂಡರಾದ ಆಲೂರು ನಿಂಗರಾಜ, ಸೋಮಲಾಪುರ ಹನುಮಂತಪ್ಪ, ಸಿ.ಬಸವರಾಜ, ರಾಜನಹಳ್ಳಿ ಮಂಜುನಾಥ, ಚನ್ನಗಿರಿ ಆಂಜನೇಯ, ಕೆಟಿಜೆ ನಗರ ದುಗ್ಗಪ್ಪ, ಮಲ್ಲೇಶ ಸೇರಿದಂತೆ ವಿವಿಧ ಸಮುದಾಯ, ಸಂಘಟನೆಗಳ ಮುಖಂಡರು ಇದ್ದರು.

- - -

(ಬಾಕ್ಸ್‌) * ಅಧಿಕಾರಿ, ಸಿಬ್ಬಂದಿಗೆ ಲೈಂಗಿಕ ದೌರ್ಜನ್ಯ: ಆಲೂರು ನಿಂಗರಾಜ ದಾವಣಗೆರೆ: ಹಲವಾರು ಸರ್ಕಾರಿ ಇಲಾಖೆ, ಕಚೇರಿಗಳಲ್ಲಿ ಮಹಿಳಾ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ಕೆಇಬಿ ಕಚೇರಿಯಲ್ಲೇ ಮೂವರು ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಮಾದಿಗ ಸಮುದಾಯದ ಹಿರಿಯ ಮುಖಂಡ, ಬಿಜೆಪಿಯ ಆಲೂರು ನಿಂಗರಾಜ ಸಭೆಯಲ್ಲಿ ಆರೋಪಿಸಿದರು.

ಲೈಂಗಿಕ ಕಿರುಕುಳ ಬಗ್ಗೆ ಸಂತ್ರಸ್ಥ ಮಹಿಳೆಯರೇ ತಮ್ಮ ಬಳಿ ಅಳಲು ತೋಡಿಕೊಂಡಿದ್ದಾರೆ. ಕೆಇಬಿ ಮಹಿಳಾ ನೌಕರರಿಗೆ ಮೆಸೇಜ್ ಮಾಡುವುದು, ವಾಟ್ಸಪ್ ಮೆಸೇಜ್ ಮಾಡುವುದು, ಕಚೇರಿ ಶೌಚಾಲಯದಲ್ಲಿ ಹೆಣ್ಣುಮಕ್ಕಳ ಹೆಸರಿನಲ್ಲಿ ಕೆಟ್ಟದಾಗಿ, ಅಶ್ಲೀಲವಾಗಿ ಬರೆದಿದ್ದಾರೆ. ಹೀಗೆ ಮಾನಸಿಕ ಹಿಂಸೆ ನೀಡುವ ಕಿಡಿಗೇಡಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

- - -

(ಕೋಟ್ಸ್‌) ಹರಿಹರ ತಾಲೂಕಿನ 20-30 ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ, ಸಾಗಾಟ ನಡೆದಿದೆ. ಇದರಲ್ಲಿ ಅಬಕಾರಿ ಇಲಾಖೆಯವರೂ ಶಾಮೀಲಾಗಿದ್ದಾರೆ. ಹೆಚ್ಚಾಗಿ ದಲಿತ ಕೇರಿಗಳಲ್ಲಿ ಅಕ್ರಮ ಮದ್ಯ ಪೂರೈಕೆ ಆಗುತ್ತಿದೆ. ಅಕ್ರಮ ಮದ್ಯ ಮಾರಾಟ ತಡೆಯಬೇಕು. ಅಕ್ರಮ ಮಣ್ಣು ಸಾಗಾಣಿಕೆ ದಂಧೆ ಬಂದ್ ಮಾಡಿಸಬೇಕು. ಮಣ್ಣು ಸಾಗಾಣಿಕೆಯವರಿಗೆ ತಹಸೀಲ್ದಾರರೇ ಸಹಕಾರ ನೀಡುತ್ತಿದ್ದಾರೆ.

- ರಾಜನಹಳ್ಳಿ ಮಂಜುನಾಥ, ದಲಿತ ಮುಖಂಡ.

- - - ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆಗಳು ಈವರೆಗೂ ಎಸ್ಸಿ-ಎಸ್ಸಿ ಕುಂದುಕೊರತೆ ಸಭೆ ಕರೆದಿಲ್ಲ. ಹಾಗಾಗಿ, ಹೆಚ್ಚು ಸಮಸ್ಯೆ ಈ ಸಭೆಯಲ್ಲಿ ವ್ಯಕ್ತವಾಗುತ್ತಿವೆ. ದಾವಣಗೆರೆ ಕೆಟಿಜೆ ನಗರ ಪೊಲೀಸ್ ಠಾಣೆ ಸಾಕಾಗುತ್ತಿಲ್ಲ. ರಾತ್ರಿವೇಳೆ ಬೀಟ್ ವ್ಯವಸ್ಥೆ ಚುರುಕುಗೊಳಿಸಬೇಕು.

- ಸೋಮಲಾಪುರ ಹನುಮಂತಪ್ಪ, ಕಾಂಗ್ರೆಸ್ ಮುಖಂಡ

- - -ಬಸವಾಪಟ್ಟಣ ಕೆನರಾ ಬ್ಯಾಂಕ್‌ನಲ್ಲಿ ಸಾಲ ಕೇಳಲು ಹೋದರೆ ಕೇರಳ ಮೂಲದ ವ್ಯವಸ್ಥಾಪಕ ಅವಾಚ್ಯವಾಗಿ ನಿಂದಿಸಿ, ಮಾತನಾಡಿದ್ದಾರೆ. ಕನ್ನಡ ಭಾಷೆಯೇ ಬರದಂತಹ, ಗ್ರಾಹಕರೊಂದಿಗೆ ದುರ್ವರ್ತನೆ ತೋರುತ್ತಿರುವ ಇಂತಹ ಬ್ಯಾಂಕ್, ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ.

- ಆಂಜನೇಯ ಬಸವಾಪಟ್ಟಣ, ಚನ್ನಗಿರಿ ಮುಖಂಡ

- - - ಗ್ರಾಹಕರೊಂದಿಗೆ ರಾಷ್ಟ್ರೀಕೃತ ಬ್ಯಾಂಕ್ ಆಗಿರಲಿ, ಯಾವುದೇ ಕಚೇರಿ, ಹಣಕಾಸು ಸಂಸ್ಥೆಯಾಗಿರಲಿ ಕನ್ನಡದಲ್ಲಿ ವ್ಯವಹರಿಸಬೇಕು. ಈ ಬಗ್ಗೆ ಬಸವಾಪಟ್ಟಣ ಪೊಲೀಸರಿಂದ ಮಾಹಿತಿ ಪಡೆದು, ಅಲ್ಲಿನ ಕೆನರಾ ಬ್ಯಾಂಕ್ ವ್ಯವಸ್ಥಾಪಕರಿಗೆ ಕನ್ನಡ ಭಾಷೆಯನ್ನು ಕಲಿಯುವಂತೆ, ಸ್ಥಳೀಯರೊಂದಿಗೆ ಕನ್ನಡದಲ್ಲೇ ವ್ಯವಹರಿಸುವಂತೆ ಸೂಚಿಸುತ್ತೇವೆ.

- ಉಮಾ ಪ್ರಶಾಂತ, ಜಿಲ್ಲಾ ಎಸ್‌ಪಿ

- - -

-18ಕೆಡಿವಿಜಿ10, 11: ದಾವಣಗೆರೆಯಲ್ಲಿ ಬುಧವಾರ ಜಿಲ್ಲಾ ಎಸ್ಪಿ ಉಮಾ ಪ್ರಶಾಂತ ಎಸ್ಸಿ-ಎಸ್ಟಿ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು.

-18ಕೆಡಿವಿಜಿ12, 13: ಎಸ್ಸಿ-ಎಸ್ಟಿ ಕುಂದುಕೊರತೆ ಸಭೆಯಲ್ಲಿ ದಲಿತ ಮುಖಂಡರು ಪಾಲ್ಗೊಂಡಿದ್ದರು.

-18ಕೆಡಿವಿಜಿ14: ಮಾದಿಗ ಸಮಾಜದ ಮುಖಂಡ, ಬಿಜೆಪಿಯ ಆಲೂರು ನಿಂಗರಾಜ ಅವರು ಸಭೆಯಲ್ಲಿ ಎಸ್‌ಪಿ ಉಮಾ ಪ್ರಶಾಂತ್‌ ಅವರ ಬಳಿ ಸಮಸ್ಯೆಗಳನ್ನು ಚರ್ಚಿಸಿದರು.

-18ಕೆಡಿವಿಜಿ15: ಸಭೆಯಲ್ಲಿ ಎಸ್ಪಿ ಉಮಾ ಪ್ರಶಾಂತ ದಲಿತ ಸಂಘಟನೆಗಳ ಮುಖಂಡರ ಅಹವಾಲು ಆಲಿಸಿದರು.