ಸಾರಾಂಶ
ಹಾವೇರಿ: ಕಾಲೇಜು ಅಭಿವೃದ್ಧಿ ಸಮಿತಿಯಿಂದ ಸರ್ಕಾರಿ ಕಾಲೇಜಿನ ಎಲ್ಲ ಸಮಸ್ಯೆಗಳಿಗೆ ಶೀಘ್ರ ಪರಿಹರಿಸಿ, ಶಾಸಕರ ಅನುದಾನದಾನದಲ್ಲಿ ಕಾಲೇಜಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಮಾಜಿ ನಗರಸಭೆ ಅಧ್ಯಕ್ಷ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಸಂಜೀವಕುಮಾರ ನೀರಲಗಿ ಭರವಸೆ ನೀಡಿದರು.ಇಲ್ಲಿನ ಬಸವೇಶ್ವರ ನಗರದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಸಹಪಠ್ಯ ಚಟುವಟಿಕೆಗಳ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಬದ್ಧವಾಗಿದ್ದು, ಈ ದಿಸೆಯಲ್ಲಿ ಕಾಲೇಜುಗಳಿಗೆ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಬೇಕಾಗುತ್ತದೆ. ಆದ್ದರಿಂದ ಶೀಘ್ರ ಕಾಲೇಜಿಗೆ ತಡೆಗೋಡೆ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಹಾಗೂ ಹೆಚ್ಚಿನ ಕೊಠಡಿಗಳ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಅರುಣಕುಮಾರ ಪಿ.ಜೆ. ಮಾತನಾಡಿ, ಕಾಲೇಜಿನ ಏಳಿಗೆಗಾಗಿ ಕಾಲೇಜು ಅಭಿವೃದ್ಧಿ ಸಮಿತಿಯ ಎಲ್ಲ ಸದಸ್ಯರ ಸಹಕಾರ ಅಗತ್ಯವಾಗಿದ್ದು, ಶೀಘ್ರ ಶಾಸಕರೊಂದಿಗೆ ಚರ್ಚಿಸಿ ಕಾಲೇಜಿಗೆ ಮೂಲಭೂತ ಸೌಕರ್ಯಗಳನ್ನು ನೀಡಲು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.ಪ್ರಾಸ್ತಾವಿಕವಾಗಿ ಕಾಲೇಜಿನ ಉಪನ್ಯಾಸಕ, ಎನ್ಎಸ್ಎಸ್ ಬೆಳಗಾವಿ ವಿಭಾಗ ಅಧಿಕಾರಿ ರವಿಕುಮಾರ ಅಂಬೋರೆ ಮಾತನಾಡಿ, ಕಾಲೇಜು ನಡೆದು ಬಂದ ಹಾದಿ ಹಾಗೂ ಕಾಲೇಜಿನ ಕ್ರೀಡೆ, ಅಭ್ಯಾಸ, ವಿದ್ಯಾರ್ಥಿಗಳ ಸಾಧನೆಯ ಬಗ್ಗೆ ತಿಳಿಸಿದರು. ಈ ವರ್ಷದಲ್ಲಿ ಕಾಲೇಜು ಬೆಳ್ಳಿ ಹಬ್ಬ ಆಚರಿಸಲು ಸಹ ಕೋರಿದರು.ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ, ಹಿರಿಯ ಪತ್ರಕರ್ತ ನಿಂಗಪ್ಪ ಚಾವಡಿ, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಮಂಜುನಾಥ ಸಣ್ಣಯಲ್ಲಪ್ಪನವರ, ಆಸೀಫ್ ಆಡೂರು, ರಾಘವೇಂದ್ರ ವಡ್ಡರ, ಶಿವರಾಜ ಪಾಟೀಲ, ತೌಸೀಫ್ ದೊಡ್ಡಮನಿ, ಶಿವಬಸವ ಹಲಗಣ್ಣನವರ, ವೈಶಾಲಿ ಕರಸಿದ್ದಿದೇವರಮಠ, ಸಂಜನಾ ಮೋರೆ, ಸುಭಾಸ ಹುಲ್ಯಾಳ, ರಾಜು ಡೊಳ್ಳಿನ, ಅಬ್ದುಲ್ಖಾದರ ಆಡೂರ, ಮೆಹಬೂಬಿ ಎಚ್. ದೊಡ್ಡಮನಿ ಹಾಗೂ ಕಾಲೇಜಿನ ಎಲ್ಲ ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗ ಭಾಗವಹಿಸಿದ್ದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಉಪನ್ಯಾಸಕರಾದ ಪಿ.ಬಿ. ಬಾರಕೇರ ನಿರ್ವಹಿಸಿದರು.