ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕುವೆಂಪು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಮಸ್ಯೆ, ಅಂಕಪಟ್ಟಿ ಪಡೆಯುವಲ್ಲಿನ ವಿಳಂಬ, ಕೇಂದ್ರೀಕೃತ ಯುಯುಸಿಎಂಎಸ್ ಪೋರ್ಟಲ್ನಿಂದಾಗುತ್ತಿರುವ ತೊಡಕುಗಳು ಸೇರಿದಂತೆ ವಿಶ್ವವಿದ್ಯಾಲಯದಲ್ಲಿ ಪ್ರಸ್ತುತ ಇರುವ ಸಮಸ್ಯೆಗಳನ್ನು ಹಂತಹಂತವಾಗಿ ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.ಮಂಗಳವಾರ ಕುವೆಂಪು ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ವಿವಿ ಹಣಕಾಸು ವಿಷಯದಲ್ಲಿ ಸಂಕಷ್ಟದಲ್ಲಿದ್ದು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಆಡಳಿತವನ್ನು ವಿವಿ ನಿಯಮಾವಳಿ ಪ್ರಕಾರ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜಾರಿಗೊಳಿಸಬೇಕು. ತ್ವರಿತವಾಗಿ ಕೈಗೊಳ್ಳಬೇಕಾದ ಹಣಕಾಸು ವಿಷಯಗಳನ್ನು ಕೈಗೆತ್ತಿಕೊಳ್ಳಬೇಕು. ಏನೇ ಸಮಸ್ಯೆ ಇದ್ದರೂ ನನ್ನನ್ನು ಕರೆಯಿರಿ. ವಿವಿ ಅಭಿವೃದ್ಧಿಯಲ್ಲಿ ನಾವೆಲ್ಲ ಭಾಗಿಯಾಗೋಣ ಎಂದು ಮನವಿ ಮಾಡಿದರು.
ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆ ವಿವಿ ವ್ಯಾಪ್ತಿಗೆ ಬರುತ್ತದೆ. ಪ್ರಥಮ ದರ್ಜೆ ಕಾಲೇಜುಗಳ ಅಫಿಲಿಯೇಷನ್ಗಾಗಿ ಸರ್ಕಾರಕ್ಕೆ ಅರ್ಜಿ 35 ಪ್ರಸ್ತಾವನೆ ಕಳುಹಿಸಿದ್ದೆವು. ಅಫಿಲಿಯೇಷನ್ ದೊರಕದೆ ಕಾಲೇಜು ಆರಂಭಿಸಲು ಸಾಧ್ಯವಿಲ್ಲ. 17 ಸರ್ಕಾರಿ ಕಾಲೇಜು ಅನುಮೋದನೆ ಆಗಿದೆ. 18 ಕಾಲೇಜು ಅನುಮೋದನೆಯಾಗದ ಕಾರಣ ದಾಖಲಾತಿ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.ಫಲಿತಾಂಶ ಬೇಗ ನೀಡಲು ಸ್ವಲ್ಪ ತೊಡಕು ಇದೆ. ಯುಯುಸಿಎಂಎಸ್ ಸೆಂಟ್ರಲೈಸ್ಡ್ ಸಾಫ್ಟ್ವೇರ್ನಿಂದ ಸಣ್ಣಪುಟ್ಟ ಬದಲಾವಣೆ ಕೂಡ ಅತ್ಯಂತ ಕಷ್ಟ ಆಗುತ್ತಿದೆ. 3 ವರ್ಷದಿಂದ ಸ್ನಾತಕೋತ್ತರ ಪದವಿ ಅಂಕಪಟ್ಟಿ ಸಹ ಬಂದಿಲ್ಲ. ವಿಕೇಂದ್ರೀಕರಣ ಆದರೆ ಅನುಕೂಲವಾಗುತ್ತದೆ. ಯುಯುಸಿಎಂಎಸ್ ಪೋರ್ಟಲ್ನಲ್ಲಿ ದಾಖಲಾತಿ ಹಾಗೂ ಅಂಕಪಟ್ಟಿ ಪಡೆಯುವಲ್ಲಿ ಅನೇಕ ತೊಂದರೆಗಳಿವೆ. ಪಿಯು ಫಲಿತಾಂಶ ಬಂದು 4 ತಿಂಗಳಾದರೂ ದಾಖಲಾತಿ ಸಾಧ್ಯವಾಗಿಲ್ಲ ಎಂದರು.
ಕುವೆಂಪು ವಿವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಮಾತನಾಡಿ, ವಿವಿ ಸಂಪೂರ್ಣವಾಗಿ ಸರ್ಕಾರಿ ಹಣದ ಮೇಲೇ ಅವಲಂಬಿಸದೆ ಸಕ್ರಿಯರಾಗಿ ಸಿಎಸ್ಆರ್ ನಿಧಿ ಹಾಗೂ ಇತರೆ ಚಟುವಟಿಕೆ ಮೂಲಕ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.ಪ್ರಾಧ್ಯಾಪಕರು ಮಾತನಾಡಿ, ಅಫಿಲಿಯೇಷನ್ ದೊರಕದ ಪ್ರಥಮ ದರ್ಜೆ ಕಾಲೇಜುಗಳಿಗೆ ದಾಖಲಾತಿ ಆಗುತ್ತಿಲ್ಲ. ಹಾಗೂ ಸರ್ಕಾರದ ಕೆಲವು ನೀತಿಗಳಿಂದಾಗಿ ವಿಶ್ವವಿದ್ಯಾಲಯದಿಂದ ದೂರ ಶಿಕ್ಷಣ ನಿಲ್ಲಿಸಲಾಗಿದ್ದು, ವಿದ್ಯಾರ್ಥಿಗಳು ಮತ್ತು ವಿವಿಗೆ ಹಿನ್ನಡೆಯಾಗಿದೆ ಎಂದರು.
ಸಿಂಡಿಕೇಟ್ ಸದಸ್ಯರಾದ ಶ್ರೀಪಾಲ್ ಮತ್ತು ಇತರೆ ಪ್ರಾಧ್ಯಾಪಕರು, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಮಾತ್ರ ಈ ಸೆಂಟ್ರಲೈಸ್ಡ್ ಪೋರ್ಟಲ್ ಇದ್ದು, ರಾಜ್ಯಾದ್ಯಂತ ವಿವಿಗಳಲ್ಲಿ ಈ ಸಮಸ್ಯೆಗಳಿವೆ ಎಂದು ತಿಳಿಸಿದರು.ಸಚಿವರು, ವಿಶ್ವವಿದ್ಯಾಲಯದ ಆಡಳಿತ ವ್ಯವಸ್ಥೆಯಲ್ಲಿನ ಸಮಸ್ಯೆಗಳಿಂದಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಸಮಸ್ಯೆ ಗಳು ಗಂಭೀರವಾಗಿದ್ದು, ಸಮಸ್ಯೆಗಳ ಪಟ್ಟಿ ನೀಡಿ ಈ ವಿಷಯವಾಗಿ ಆದ್ಯತೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಮತ್ತು ಸಚಿವರೊಂದಿಗೆ ಮಾತನಾಡುತ್ತೇನೆ. ಹಂತ ಹಂತವಾಗಿ ವಿವಿ ವ್ಯವಸ್ಥೆಯಲ್ಲಿನ ಸಮಸ್ಯೆಗಳನ್ನು ಬಗೆಹರಿಸಬೇಕಿದೆ. ಮುಖ್ಯಮಂತ್ರಿಗಳ ಗಮನಕ್ಕೂ ನಾನು ಈ ಸಮಸ್ಯೆಗಳ ಬಗ್ಗೆ ತಿಳಿಸುತ್ತೇನೆ ಎಂದರು.
ಹೊರಗುತ್ತಿಗೆ ನೌಕರರಿಗೆ ವೇತನ ನೀಡುವುದು ವಿಳಂಬವಾಗುತ್ತಿದ್ದು, ನಿಗದಿತ ಸಮಯದೊಳಗೆ ವೇತನ ನೀಡಬೇಕೆಂದು ತಿಳಿಸಿದರು.ಕುಲ ಸಚಿವ ಮಂಜುನಾಥ್ ಎ.ಎಲ್. ಪಿಪಿಟಿ ಮೂಲಕ ವಿಶ್ವವಿದ್ಯಾಲಯ ಹಣಕಾಸು, ಹುದ್ದೆಗಳ ವಿವರ, ಮೂಲಭೂತ ಸೌಕರ್ಯಗಳು, ಇತರೆ ಪ್ರಗತಿ ಕುರಿತು ಮಾಹಿತಿ ನೀಡಿದರು.
ಡಾ.ಸಂತೋಷ್ ಇವರು ಟಿಶ್ಯು ಕಲ್ಚರ್ ಬಾಳೆ ಗಿಡ ಉತ್ಪಾದನಾ ಘಟಕ ಕುರಿತು ಮಾಹಿತಿ ನೀಡಿದರು. ಭದ್ರಾವತಿ ನಗರಸಭಾ ಸದಸ್ಯ ಮೋಹನ್ ಕುಮಾರ್, ಮಾಜಿ ವಿಧಾನ ಪರಿಷತ್ ಶಾಸಕ ಪ್ರಸನ್ನ ಕುಮಾರ್ ಹಾಗೂ ವಿವಿ ಕುಲಪತಿ ಡಾ. ಶರತ್ ಅನಂತಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಲಸಚಿವ ಪ್ರೊ ಎಸ್.ಎಂ.ಗೋಪಿನಾಥ್ ಇತರೆ ಅಧಿಕಾರಿಗಳು ಹಾಜರಿದ್ದರು.