ಮಕ್ಕಳಿಗೆ ಚಟುವಟಿಕೆಯಾಧಾರಿತ ಕಲಿಕೆ ಅವಶ್ಯ

| Published : Dec 18 2024, 12:48 AM IST

ಸಾರಾಂಶ

ನಾವು ಅನೇಕ ಹಬ್ಬ ಆಚರಿಸುತ್ತಿದ್ದು, ಇಂದು ಜಗತ್ತಿಗೆ ಬೇಕಾಗಿರುವುದು ವಿಜ್ಞಾನ. ಅಂತಹ ವಿಜ್ಞಾನದ ಹಬ್ಬ ಆಚರಿಸುತ್ತಿರುವ ಕಾರ್ಯ ಶ್ಲಾಘನೀಯ

ಮುಂಡರಗಿ: ಮಕ್ಕಳು ಲಕ್ಷಗೊಟ್ಟು ನೋಡಿ ಪ್ರಾಯೋಗಿಕವಾಗಿ ಮಾಡಿ ಕಲಿತಿರುವಂತದ್ದು, ಶೇ.90 ರಷ್ಟು ನೆನಪಿನಲ್ಲಿರುತ್ತದೆ. ಹೀಗಾಗಿ ಹೀಗಾಗಿ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುವಾಗ ಅದಕ್ಕೆ ಸಂಬಂಧಿಸಿದ ಚಟುವಟಿಕೆ ಮಾಡಿ ತೋರಿಸುವುದರಿಂದ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಹೀಗಾಗಿ ಮಕ್ಕಳಿಗೆ ಚಟುವಟಿಕೆ ಆಧಾರಿತ ಕಲಿಕೆ ಅವಶ್ಯವಾಗಿದೆ‌ ಎಂದು ಜಿಲ್ಲಾ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕ ಆರ್.ಎಸ್. ಬುರುಡಿ ಹೇಳಿದರು.

ಅವರು ಮಂಗಳವಾರ ಪಟ್ಟಣದ ದಿ ಪೀಪಲ್ಸ್‌ ರೂರಲ್ ಮತ್ತು ಅರ್ಬನ್ ಡೆವ್ಹಲಪ್ಮೆಂಟ್ ಸೊಸೈಟಿ ನಾಗರಹಳ್ಳಿಯ ಶ್ರೀ ಸ್ವಾಮಿ ವಿವೇಕಾನಂದ ಪೂರ್ವ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪೌಢಶಾಲೆ ಹಾಗೂ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ಜರುಗಿದ ವಿಜ್ಞಾನ ಹಬ್ಬ-ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಾವು ಅನೇಕ ಹಬ್ಬ ಆಚರಿಸುತ್ತಿದ್ದು, ಇಂದು ಜಗತ್ತಿಗೆ ಬೇಕಾಗಿರುವುದು ವಿಜ್ಞಾನ. ಅಂತಹ ವಿಜ್ಞಾನದ ಹಬ್ಬ ಆಚರಿಸುತ್ತಿರುವ ಕಾರ್ಯ ಶ್ಲಾಘನೀಯ. ಶಿಕ್ಷಣ ಎಂದರೆ ಅದು ವಿದ್ಯಾರ್ಥಿಗಳಲ್ಲಿ ವಿಧೇಯತೆ ಕಲಿಸುತ್ತದೆ. ಕೇವಲ ಪ್ರಶ್ನೋತ್ತರ ಬರೆದು ಅಂಕ ಪಡೆಯುವುದು ಶಿಕ್ಷಣವಲ್ಲ, ಜೀವನಾನುಭವದ ಪಾಠ ಕೇಳಿ ಉತ್ತಮ ಮೌಲ್ಯ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಶಿಕ್ಷಣ. ಇಲ್ಲಿನ ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ಮಕ್ಕಳಿಗಾಗಿ ಪಠ್ಯಾಧಾರಿತ ವಿಜ್ಞಾನದ ಪ್ರಯೋಗ ಮಾಡಿಸಿ ಅವುಗಳನ್ನು ಎಲ್ಲ ವಿದ್ಯಾರ್ಥಿಗಳಿಗೆ ಪ್ರದರ್ಶಿಸುತ್ತಿರುವುದು ಶಾಲೆಗಳಲ್ಲಿ ಮಕ್ಕಳಿಗೆ ಅನುಭವದ ಜತೆಗೆ ನೆನಪಿನ ಬುತ್ತಿ ಕಟ್ಟಿಕೊಡುವ ಪ್ರಯತ್ನ ಇದಾಗಿದೆ ಎಂದರು.

ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಮಾತನಾಡಿ, ಮಕ್ಕಳು ಸತ್ಯ,ನಿಷ್ಠೆ ಮತ್ತು ಪ್ರಾಮಾಣಿಕವಾಗಿ ಇರುವ ಮೂಲಕ ಉತ್ತಮವಾಗಿ ಓದಬೇಕು. ಇಲ್ಲಿನ ಸ್ವಾಮಿ ವಿವೇಕಾನಂದ ಶಾಲೆ ಮಕ್ಕಳಿಗಾಗಿ ಸದಾ ಒಂದಿಲ್ಲೋಂದು ಹೊಸ ಹೊಸ ಚಟುವಟಿಕೆ ಹಮ್ಮಿಕೊಂಡಿರುತ್ತದೆ. ಇದೀಗ ವಿಜ್ಞಾನ ಹಬ್ಬ ಹಾಗೂ ವಿಜ್ಞಾನ ವಸ್ತು ಪ್ರದರ್ಶನ ಎಲ್ಲ ಮಕ್ಕಳಿಗೂ ಉಪಯುಕ್ತವಾಗುವಂತದ್ದು. ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಬಿಇಒ ಎಚ್.ಎಂ. ಪಡ್ನೇಶಿ ಮಾತನಾಡಿ, ವಿಜ್ಞಾನ ಮುಂದುವರೆದಂತೆ ಪರಿಸ್ಕೃತವಾಗಿರುವಂತಹ, ಸೃಜನಶೀಲವಾದಂತಹ ಹೊಸ ಹೊಸ ಸಂಶೋಧನೆಗಳ ಮೂಲಕ ಅನೇಕ ಉಪಕರಣ ಬರುತ್ತಿವೆ. ಈ ಶಾಲೆಯ ಶಿಕ್ಷಕರು ಮತ್ತು ಆಡಳಿತ ಮಂಡಳಿ‌ ಮಕ್ಕಳಿಗೆ ಪಠ್ಯಕ್ಕೆ ಪೂರಕ ವಾಗುವಂತಹ 30ಕ್ಕೂ ಹೆಚ್ಚು ವಿಜ್ಞಾನ ಪ್ರಯೋಗ ಮಾಡಿದ್ದಾರೆ. ವಿದ್ಯಾರ್ಥಿಗಳ ಹಣೆಬರಹ ಬದಲಾಗಬೇಕಾದರೆ ನಿಮ್ಮ ಹವ್ಯಾಸ ಬದಲಾವಣೆ ಮಾಡಿಕೊಳ್ಳಬೇಕು ಎಂದರು.

ಸಮಿತಿಯ ಗೌರವ ಕಾರ್ಯದರ್ಶಿ ವಿ. ಸೀತಾರಾಮರಾಜು ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷ ಮಲ್ಲಣ್ಣ ಹಳೆಮನಿ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷರ ಪರವಾಗಿ ಉಪಾಧ್ಯಕ್ಷ ಎಸ್.ವಿ. ಪಾಟೀಲ ಮಾತನಾಡಿದರು. ಕ್ಷೇತ್ರ ಸಮನ್ವಯಾಧಿಕಾರಿ ಗಂಗಾಧರ ಅಣ್ಣಿಗೇರಿ, ಈಶ್ವರಪ್ಪ ಹಂಚಿನಾಳ, ಶ್ರಿಧರ ಹೊಸಮನಿ, ಸಿದ್ದು ದೇಸಾಯಿ, ಪಿ.ಎಸ್. ನಾಯ್ಕ, ವಿ.ಎಚ್. ಹೊಳೆಮ್ಮನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಶಾಲೆಯ ಆಡಳಿತಾಧಿಕಾರಿ ಸಿ.ಎಸ್. ಅರಸನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿ.ಟಿ. ಇಮ್ರಾಪೂರ ಸ್ವಾಗತಿಸಿ, ಗುಡದಪ್ಪ ಲಿಂಗಶೆಟ್ಟರ ನಿರೂಪಿಸಿ, ಪಿ.ಎಸ್.ಗೌಡರ್ ಗುರುಮಾತೆ ವಂದಿಸಿದರು. ಮಧ್ಯಾಹ್ನ 2 ಗಂಟೆಯ ನಂತರ ಪಟ್ಟಣದ ಎಲ್ಲ ಶಾಲೆಯ ಮಕ್ಕಳು ವಿಜ್ಞಾನ ವಸ್ತು ಪ್ರದರ್ಶನ ವೀಕ್ಷಿಸಿದರು.