ಸಾರಾಂಶ
ಭೇಟಿಯ ಸಂದರ್ಭ ಸಂಸ್ಥೆಯ ಅಧಿಕಾರಿಗಳು ಮೂಲ ಸೌಕರ್ಯ ಹಾಗೂ ಉತ್ಕೃಷ್ಠತಾ ಕೇಂದ್ರದ ಸ್ಥಾಪನೆಗೆ ಸಂಬಂಧಿಸಿದ ಸಿದ್ಧತೆಗಳ ವರದಿಯನ್ನು ಮಂಡಿಸಿದರು. ಬಳಿಕ ನಿಯೋಗವು ಕ್ಯಾಂಪಸ್ ಭೇಟಿ, ಕಟ್ಟಡ ಮತ್ತು ಸ್ಥಳ ಪರಿಶೀಲನೆ ಹಾಗೂ ಸಹಭಾಗಿತ್ವದ ಅಂಗವಾಗಿ ವಿವಿಧ ವಲಯಗಳ ಉದ್ಯಮಿಗಳು, ಸಂಸ್ಥೆಯ ಹಳೆ ವಿದ್ಯಾರ್ಥಿಗಳು, ಪೋಷಕರು, ಸಮೀಪದ ತಾಂತ್ರಿಕ ಸಂಸ್ಥೆಯ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಹಮ್ಮಿಕೊಂಡಿತ್ತು.
ಕನ್ನಡಪ್ರಭ ವಾರ್ತೆ ಮಂಗಳೂರು
ಕರ್ನಾಟಕ ಸರ್ಕಾರವು ಏಷ್ಯನ್ ಡೆವೆಲಪ್ಮೆಂಟ್ ಬ್ಯಾಂಕ್ (ಎಡಿಬಿ) ಸಹಯೋಗದೊಂದಿಗೆ ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಉನ್ನತೀಕರಿಸುವ ಮೂಲಕ ಶೈಕ್ಷಣಿಕ ಗುಣಮಟ್ಟ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದು, ಅದರ ಅಂಗವಾಗಿ ರಾಜ್ಯದ 9 ಕಡೆಗಳಲ್ಲಿ ಉತ್ಕೃಷ್ಠತಾ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಯೋಜನೆಯ ಭಾಗವಾಗಿ ಎಡಿಬಿ ನಿಯೋಗವು ಮಂಗಳೂರಿನ ಕರ್ನಾಟಕ (ಸರ್ಕಾರಿ) ಪಾಲಿಟೆಕ್ನಿಕ್ ಸಂಸ್ಥೆಗೆ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿತು.ಭೇಟಿಯ ಸಂದರ್ಭ ಸಂಸ್ಥೆಯ ಅಧಿಕಾರಿಗಳು ಮೂಲ ಸೌಕರ್ಯ ಹಾಗೂ ಉತ್ಕೃಷ್ಠತಾ ಕೇಂದ್ರದ ಸ್ಥಾಪನೆಗೆ ಸಂಬಂಧಿಸಿದ ಸಿದ್ಧತೆಗಳ ವರದಿಯನ್ನು ಮಂಡಿಸಿದರು. ಬಳಿಕ ನಿಯೋಗವು ಕ್ಯಾಂಪಸ್ ಭೇಟಿ, ಕಟ್ಟಡ ಮತ್ತು ಸ್ಥಳ ಪರಿಶೀಲನೆ ಹಾಗೂ ಸಹಭಾಗಿತ್ವದ ಅಂಗವಾಗಿ ವಿವಿಧ ವಲಯಗಳ ಉದ್ಯಮಿಗಳು, ಸಂಸ್ಥೆಯ ಹಳೆ ವಿದ್ಯಾರ್ಥಿಗಳು, ಪೋಷಕರು, ಸಮೀಪದ ತಾಂತ್ರಿಕ ಸಂಸ್ಥೆಯ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಹಮ್ಮಿಕೊಂಡಿತ್ತು.
ಪ್ರಸ್ಥಾಪಿತ ಉತ್ಕೃಷ್ಠತಾ ಕೇಂದ್ರವು ಕೌಶಲ್ಯಾಭಿವೃದ್ಧಿ, ಉದ್ಯಮದ ಅವಶ್ಯಕತೆಗಳಿಗೆ ಹೊಂದಿಕೊಳ್ಳುವ ತರಬೇತಿ ಮತ್ತು ಡಿಜಿಟಲ್ ಪರಿವರ್ತನೆಗೆ ಉತ್ತೇಜನ ನೀಡುವುದು, ಸ್ಥಳೀಯ ಕೈಗಾರಿಕೆಗಳೊಂದಿಗೆ ಸಹಭಾಗಿತ್ವ ಸ್ಥಾಪಿಸುವ ಉದ್ದೇಶವನ್ನು ಒಳಗೊಂಡಿದೆ.ಈ ಸಂದರ್ಭ ಸಂಸ್ಥೆಯ ಪ್ರಾಂಶುಪಾಲ ಹರೀಶ ಶೆಟ್ಟಿ, ಕುಲಸಚಿವೆ ವಿನೋದ ಕುಮಾರಿ, ಭೋದಕ ಹಾಗೂ ಭೋದಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು. ಉಪನ್ಯಾಸಕರು ಮತ್ತು ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಹರೀಶ ಸಿ.ಪಿ. ನಿಯೋಗಕ್ಕೆ ವರದಿ ಮಂಡಿಸಿದರು.