-ಸಾರ್ವಜನಿಕ ಸೇವೆ ನಿರ್ವಹಣೆಗೆ ಅಡ್ಡಿ । ಜನಸಾಮಾನ್ಯರ ಪರದಾಟ
-----ಪ್ರಕಾಶ ಆರ್ ಖೊಬ್ರೇ
ಕನ್ನಡಪ್ರಭ ವಾರ್ತೆ ಕಮಲಾಪುರಗ್ರಾಮ ಪಂಚಾಯಿತಿಗಳಲ್ಲಿ ಪಿಡಿಒ ಕೊರತೆಯಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಸಾರ್ವಜನಿಕ ಸೇವೆ ನಿರ್ವಹಣೆಗೆ ಅಡ್ಡಿಯಾಗುತ್ತಿದೆ. ಇದರಿಂದ ಜನಸಾಮಾನ್ಯರು ಪರದಾಡುವಂತಾಗಿದೆ.
ತಾಲೂಕಿನ 18 ಗ್ರಾಪಂ ಪೈಕಿ ಡೊಗರಗಾಂವ್, ವಿಕೆ. ಸಲಗಲ, ಮಹಾಗಾಂವ್, ಮರಗುತ್ತಿ, ಮಡಕಿ, ಅಂಬಲಗಾ, ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಒ ಕೊರತೆಯಿಂದ ಇರುವವರಿಗೆ ಹೆಚ್ಚುವರಿ ಪ್ರಭಾರಿ ಜವಾಬ್ದಾರಿ ನೀಡಲಾಗಿದೆ.
ಒಬ್ಬ ಪಿಡಿಒ ಎರಡು ಅಥವಾ ಮೂರ್ನಾಲ್ಕು ಗ್ರಾಪಂ ಕಾರ್ಯಭಾರ ನಿರ್ವಹಿಸಬೇಕಾದ ಪರಿಸ್ಥಿತಿ ನಿರ್ಮಾಣದಿಂದ ಆಡಳಿತ ವ್ಯವಸ್ಥೆ ವೇಗ ಕುಂಟುತ್ತಿದೆ.
8 ವರ್ಷಗಳಿಂದ ಅಂಬಲಗಾ ಗ್ರಾಪಂ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿರುವವರು ನರೇಗಾ ಯೋಜನೆ ಅಡಿ ಅವ್ಯವಹಾರ ಕಂಡುಬಂದು ಮೂರು ನಾಲ್ಕು ವರ್ಷಗಳ ಹಿಂದೆ ಅಮಾನತ್ತು ಆಗಿರುವ ಪಿಡಿಒ ಅವರನ್ನು ಹಲವು ವರ್ಷಗಳಿಂದ ರಾಜಕೀಯ ಪ್ರಭಾವದಿಂದ ತಾಪಂ ಸಹಾಯಕ ನಿರ್ದೇಶಕರಾಗಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.ಇದರಿಂದ ಅಭಿವೃದ್ಧಿ ಕಾಮಗಾರಿಗಳು. ಸಾರ್ವಜನಿಕರ ಕೆಲಸಗಳು ಸರಿಯಾಗಿ ಆಗುತ್ತಿಲ್ಲ. ಹಾಗಾಗಿ ಖಾಯಂ ಅಧಿಕಾರಿಯನ್ನು ನೇಮಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ತಾಲೂಕು ಕೇಂದ್ರದಿಂದ ಹಲವು ಗ್ರಾ.ಪಂಗಳು 20ರಿಂದ 25ಕಿಮೀ. ಗಿಂತ ಹೆಚ್ಚು ದೂರದಲ್ಲಿವೆ. ಹೆಚ್ಚುವರಿ ಜವಾಬ್ದಾರಿ ಹೊಂದಿರುವ ಅಧಿಕಾರಿಗಳು 2-3 ಕಡೆ ಓಡಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಸಮರ್ಪಕ ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಕೆಲಸದ ಒತ್ತಡದಿಂದ ಮಾನಸಿಕವಾಗಿ ಕುಗ್ಗಿ ಹೋಗುತ್ತಿದ್ದೇವೆ. ಎರಡು ಮೂರು ಕಚೇರಿಗಳ ಜವಾಬ್ದಾರಿ ನಿರ್ವಹಿಸುವುದು ಕಷ್ಟಕರ ಎಂದು ಅಧಿಕಾರಿಯೊಬ್ಬರು ಅಳಲು ತೋಡಿಕೊಂಡಿದ್ದಾರೆ.ಪಿಡಿಒ ಅಧಿಕಾರ ನೀಡಲಾಗಿದ್ದರೂ, ಎರಡು ಮೂರು ಪಂಚಾಯಿತಿ ನಿಭಾಯಿಸುವವರಿಗೆ ಹೆಚ್ಚಿನ ಒತ್ತಡದಿಂದ ಆಡಳಿತಾತ್ಮಕ ಅಧಿಕಾರಿಗಳ ಕೊರತೆಯಿಂದ ಅಭಿವೃದ್ಧಿ ಕಾರ್ಯಗಳು ನೆನಗುದಿಗೆ ಬಿದ್ದಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಗ್ರಾ.ಪಂ ಅಧಿಕಾರ ಅವಧಿ ಮುಗಿದಿರುವುದರಿಂದ ಚುನಾಯಿತ ಪ್ರತಿನಿಧಿಗಳು ಇಲ್ಲದ ಪರಿಸ್ಥಿತಿ ಉಂಟಾಗಿದೆ. ಇದರಿಂದ ಗ್ರಾಮ ಪಂಚಾಯಿತಿಗಳ ಕಾರ್ಯ ಚಟುವಟಿಕೆಗಳ ಮೇಲೆನಿಗಾವಹಿಸುವವರೆ ಇಲ್ಲದಂತಾಗಿದೆ.,,,ಕೋಟ್......
ಪಿಡಿಒ ಕೊರತೆಯಿಂದ ಒಬ್ಬ ಪಿಡಿಒಗೆ ಎರಡು -ಮೂರು ಗ್ರಾಪಂ ನೀಡಲಾಗಿದೆ. ಕೆಲವೊಂದು ಗ್ರಾಮ ಪಂಚಾಯಿತಿಗಳಲ್ಲಿ ಮಾತ್ರ ಸಮಸ್ಯೆ ಇದೆ. ಅಂಬಲಗಾ ಗ್ರಾಪಂ ಪಿಡಿಒ ಅವರನ್ನು ತಾತ್ಕಾಲಿಕ ತಾಪಂ ಸಹಾಯಕ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು.- ರಮೇಶಕುಮಾರ ಪಾಟೀಲ, ತಾಪಂ ಇಒ