ಹದಿಹರೆಯವು ವಿದ್ಯಾರ್ಥಿಗಳ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕವಾಗಿ ಬದಲಾವಣೆಯ ವೇಗದ ಅವಧಿ. ಇದು ವಿದ್ಯಾರ್ಥಿ ಜೀವನದ ರೋಮಾಂಚನಕಾರಿ ಹಾಗೂ ಸವಾಲಿನ ಅವಧಿಯು ಹೌದು.

ಧಾರವಾಡ:

ಹದಿಹರೆಯವು ವಿದ್ಯಾರ್ಥಿ ಜೀವನದ ಮಹತ್ವದ ತಿರುವು. ಈ ಅವಧಿಯಲ್ಲಿ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳುವ ಪರ್ವಕಾಲ ಎಂದು ಪ್ರಾಚಾರ್ಯ ಪ್ರೊ. ಗಂಗಾಧರ ಗುಮ್ಮಗೋಳಮಠ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವು ಕುಂದಗೋಳದ ಸರ್ಕಾರಿ ಕಾಲೇಜಿನಲ್ಲಿ ಆಯೋಜಿಸಿದ್ದ ‘ಹದಿಹರೆಯದ ಸಮಸ್ಯೆಗಳು ಹಾಗೂ ಪರಿಹಾರೊಪಾಯ’ ಉಪನ್ಯಾಸ ಉದ್ಘಾಟಿಸಿದ ಅವರು, ಹದಿಹರೆಯವು ವಿದ್ಯಾರ್ಥಿಗಳ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕವಾಗಿ ಬದಲಾವಣೆಯ ವೇಗದ ಅವಧಿ. ಇದು ವಿದ್ಯಾರ್ಥಿ ಜೀವನದ ರೋಮಾಂಚನಕಾರಿ ಹಾಗೂ ಸವಾಲಿನ ಅವಧಿಯು ಹೌದು. ಅತಿಯಾದ ಆತ್ಮವಿಶ್ವಾಸ, ಶೈಕ್ಷಣಿಕ ಒತ್ತಡಗಳಿಂದ ವಿದ್ಯಾರ್ಥಿಗಳು ದಾರಿತಪ್ಪುವ ಸಂದರ್ಭಗಳೇ ಹೆಚ್ಚು. ಈ ಅವಧಿಯಲ್ಲಿ ವಿದ್ಯಾರ್ಥಿಗಳು ನಕಾರಾತ್ಮಕ ಭಾವನೆಗಳಿಗೆ ಒಳಗಾಗದೇ ಸಕಾರಾತ್ಮಕ ಚಿಂತನೆ, ಉತ್ತ, ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.

ಉಪನ್ಯಾಸ ನೀಡಿದ ಬಿಇಒ ಸಂಜೀವಕುಮಾರ ಬೆಳವಟಗಿ, ಹದಿಹರೆಯವು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಭದ್ರಬುನಾದಿ ಹಾಕುವ ಸಮಯ. ವಿದ್ಯಾರ್ಥಿಗಳು ಖಿನ್ನತೆ, ಆತಂಕ, ಕೀಳರಿಮೆಗೆ ಒಳಗಾಗಬಾರದು. ಈ ವಯಸ್ಸಿನಲ್ಲಿ ವಿದ್ಯಾರ್ಥಿಗಳು ದಾರಿ ತಪ್ಪುವ ಅಪಾಯ ಹೆಚ್ಚಾಗಿದೆ. ಸಹಜವಾಗಿ ಲೈಂಗಿಕ ಆಕರ್ಷಣೆ ಉಂಟಾಗಿ ಅನೈತಿಕ ಮಾರ್ಗ ಹಿಡಿಯುವ ಸಂದರ್ಭಗಳು ಬರಬಹುದು. ಈ ಸಮಯದಲ್ಲಿ ಪಾಲಕರು ಮಕ್ಕಳೊಂದಿಗೆ ಸ್ನೇಹಪರವಾಗಿ ಮಾತನಾಡಿ ಅವರ ಸಮಸ್ಯೆ ಆಲಿಸಬೇಕು. ಶಿಕ್ಷಕರೂ ಸಹ ಸೂಕ್ತ ಮಾರ್ಗದರ್ಶನ ನೀಡಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಬಿ.ಎಸ್. ಶಿರಿಯಪ್ಪಗೌಡರ ಮಾತನಾಡಿದರು. ಕಿರಣ ಕಳಸಣ್ಣವರ ಪ್ರಾರ್ಥಿಸಿದರು. ಡಾ. ಸುರೇಶ ಸಂಕಣ್ಣವರ ಸ್ವಾಗತಿಸಿದರು. ವೀರಣ್ಣ ಒಡ್ಡೀನ ಪ್ರಾಸ್ತಾವಿಕ ಮಾತನಾಡಿದರು. ವಿಜಯಕುಮಾರ ಮಲ್ಲಿಕಾರ್ಜುನಮಠ ನಿರ್ವಹಿಸಿದರು. ಕೃಷ್ಣಪ್ಪ ಲಮಾಣಿ ವಂದಿಸಿದರು.