ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಕಾಂಗ್ರೆಸ್ ಪಕ್ಷದ ಹಲವಾರು ನಾಯಕರು ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಉತ್ತಮ ಆಡಳಿತಗಾರರೂ, ದೂರದೃಷ್ಟಿ ಚಿಂತಕರೂ ಆದ ರಾಜೀವ್ ಗಾಂಧಿಯವರು ದೇಶಕ್ಕೆ ತಂತ್ರಜ್ಞಾನ ಬರಲು ಕಾರಣರಾಗಿದ್ದರು. ಸಾಮಾಜಿಕ ಹರಿಕಾರ ದೇವರಾಜ ಅರಸುರವರು ಧ್ವನಿ ಇಲ್ಲದ ಸಮುದಾಯಗಳಿಗೆ ಶಕ್ತಿ ತುಂಬಿ ಅವರು ಸ್ವಾಭಿಮಾನದಿಂದ ಬದುಕಲು ಕಾರಣರಾಗಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ ಹಾಲಪ್ಪ ಹೇಳಿದರು.ನಗರದ ಸದಾಶಿವ ನಗರದ ಮಾರುತಿ ಮಹಾರಾಜ ಕನ್ವೆನ್ಷನ್ನಲ್ಲಿ ಮಂಗಳವಾರ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದಿಂದ ಹಮ್ಮಿಕೊಂಡಿದ್ದ ದೇವರಾಜ ಅರಸು ಅವರ 109ನೇ ಜನ್ಮದಿನ ಹಾಗೂ ರಾಜೀವ್ ಗಾಂಧಿಯವರ 80ನೇ ಜನ್ಮ ದಿನ ಆಚರಣೆಯಲ್ಲಿ ಪಕ್ಷದ ಮುಖಂಡರು ಇಬ್ಬರೂ ಮಹನೀಯರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ಸಮರ್ಪಿಸಿದರು.
ಮಹನೀಯರ ಜಯಂತಿ ಆಚರಿಸಿದರೆ ಸಾಲದು, ಅವರ ತತ್ವ, ಆದರ್ಶಗಳನ್ನು ನಾವು ಬದುಕಿನಲ್ಲಿ ಅಳವಡಿಸಿಕೊಂಡು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು, ಆ ಮೂಲಕ ನಮ್ಮ ನಾಡಿಗೆ, ದೇಶಕ್ಕೆ ಕೊಡುಗೆಯಾಗಬೇಕು ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸುಳ್ಳು ಆಪಾದನೆ ಮಾಡಿ, ಕಾಂಗ್ರೆಸ್ ಸರ್ಕಾರವನ್ನು ಅಸ್ತಿರಗೊಳಿಸುವ ಪಿತೂರಿ ನಡೆದಿದೆ. ಇದಕ್ಕೆ ಕಾಂಗ್ರೆಸ್ನವರು ಅವಕಾಶ ಕೊಡುವುದಿಲ್ಲ, ಯಾವುದೇ ಹೋರಾಟಕ್ಕೆ ಸಿದ್ಧರಾಗಬೇಕು ಎಂದು ಮುರಳೀಧರ ಹಾಲಪ್ಪ ಕರೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಮಾತನಾಡಿ, ದೇವರಾಜ ಅರಸು ಅವರು ಉತ್ತಮ ಆಡಳಿತಗಾರರು, ಮಾದರಿ ರಾಜಕಾರಣಿಯಾಗಿ ಎಲ್ಲರೊಂದಿಗೆ ಸರಳವಾಗಿ ಬೆರೆತು ಬಾಳಿದವರು. ಸಣ್ಣ ಸಣ್ಣ ಸಮಾಜಗಳ ಮುಖಂಡರಿಗೆ ಶಕ್ತಿ ತುಂಬಿ ಅವರಿಗೆ ರಾಜಕೀಯ ಅಧಿಕಾರದ ಅವಕಾಶ ನೀಡಿದವರು. ಅವರು ಮುಖ್ಯಮಂತ್ರಿಯಾಗಿ ಜಾರಿಗೆ ತಂದಿದ್ದ ಉಳುವವನಿಗೇ ಭೂಮಿ ಎನ್ನುವ ಕ್ರಾಂತಿಕಾರಕ ಕಾರ್ಯಕ್ರಮದ ಫಲವಾಗಿ ಭೂಮಿ ರಹಿತರಾಗಿದ್ದ ಅದೆಷ್ಟೋ ಜನ ಇಂದು ಭೂಮಿ ಹೊಂದಿ ಬಾಳುತ್ತಿದ್ದಾರೆ ಎಂದರು.ಸಿ.ಎಚ್.ಅನಿಲ್ಕುಮಾರ್ ಮಾತನಾಡಿ, ಮಾಜಿ ಪ್ರಧಾನಿ ರಾಜೀವ್ ಗಾಂಧಿ, ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಸಮಾಜಕ್ಕೆ ಕೊಟ್ಟ ಕೊಡುಗೆ ಅಪಾರ. ಸಂವಿಧಾನದ ಆಶಯಗಳನ್ನು ಅನುಸರಿಸಿಕೊಂಡು ಎಲ್ಲಾ ವರ್ಗದವರಿಗೂ ಸಮಾನ ಅವಕಾಶ ಕಲ್ಪಿಸುವ ಆಡಳಿತ ನೀಡಿದ್ದರು. ಶೋಷಿತ ಸಮುದಾಯಗಳಿಗೆ ಧ್ವನಿಯಾಗಿ ಅವರಿಗೆ ದೊರೆಯಬಾಕಾದ ಸವಲತ್ತುಗಳನ್ನು ನೀಡಿ ಅವರು ಸಮಾಜದ ಮುಖ್ಯವಾಹಿನಿಗೆ ಬರಲು ಪ್ರಯತ್ನ ಮಾಡಿದ್ದರು ಎಂದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆಂಚಮಾರಯ್ಯ, ಟೂಡಾ ಮಾಜಿ ಅಧ್ಯಕ್ಷ ಸಿದ್ಧಲಿಂಗೇಗೌಡ, ಮುಖಂಡರಾದ ರೇವಣ್ಣಸಿದ್ದಯ್ಯ, ಪಿ.ಶಿವಾಜಿ ಮತ್ತಿತರರು ಮಾತನಾಡಿದರು. ಮುಖಂಡರಾದ ಷಣ್ಮುಖಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆಂಪರಾಜು, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಟಿ.ಆರ್.ಸುರೇಶ್, ಮುಖಂಡರಾದ ಕೆಂಪಣ್ಣ, ನ್ಯಾತೇಗೌಡ, ಜಿಯಾ, ನಾಗಮಣಿ, ಭಾಗ್ಯಮ್ಮ, ವಿಜಯಲಕ್ಷ್ಮೀ ಮೊದಲಾದವರು ಭಾಗವಹಿಸಿದ್ದರು.