ನರಗುಂದ: ಪ್ರತಿಯೊಬ್ಬರೂ ಜೀವನದಲ್ಲಿ ಶ್ರೀರಾಮನ ಆದರ್ಶ ಅಳವಡಿಸಿಕೊಳ್ಳಬೇಕು. ಅಂದಾಗ ಮಾತ್ರ ಮನುಷ್ಯನ ಜೀವನ ಸುಂದರವಾಗಿ ನಿರ್ಮಾಣಗೊಳ್ಳುತ್ತದೆ ಎಂದು ಶಿಕ್ಷಕ ಎಸ್.ವೈ. ಪಾಟೀಲ ತಿಳಿಸಿದರು.

ತಾಲೂಕಿನೆ ಶಿರೋಳ ಗ್ರಾಮದ ಜಗದ್ಗುರು ಯಚ್ಚರಸ್ವಾಮಿಗಳ ಗವಿಮಠದಲ್ಲಿ ನಡೆದ 30ನೇ ಮಾಸಿಕ ಶಿವಾನುಭವ ಗೋಷ್ಠಿ ಹಾಗೂ ಶ್ರೀರಾಮ ಜಯಂತಿ ಮತ್ತು ಹನಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದಲ್ಲಿ ಹಲವಾರು ಮಹನೀಯರು ಸಮಾಜದ ಒಳಿತಿಗಾಗಿ ಬದಲಾವಣೆ ತರಲು ಪ್ರಯತ್ನ ಮಾಡಿದ್ದಾರೆ. ಅಂಥ ಮಹಾತ್ಮರ ಆದರ್ಶಗಳನ್ನು ಯುವ ಸಮುದಾಯ ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಸಮಾಜ ಪರಿವರ್ತನೆಯಾಗಲು ಸಾಧ್ಯವಾಗುತ್ತದೆ ಎಂದರು. ಕೊಪ್ಪಳದ ವಿಶ್ವಕರ್ಮ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅರ್ಕಸಾಲಿ ಮಾತನಾಡಿ, ರಾಮಾಯಣ, ಮಹಾಭಾರತದ ಗ್ರಂಥಗಳು ಮನುಷ್ಯ ಕಷ್ಟದ ನಡುವೆಯೂ ನೆಮ್ಮದಿಯಿಂದ ಹೇಗೆ ಬದುಕಬೇಕು ಎಂಬುದನ್ನು ಕಲಿಸಿಕೊಡುತ್ತವೆ. ಗವಿಮಠ ಈ ಭಾಗದಲ್ಲಿ ಧಾರ್ಮಿಕ, ಸಾಮಾಜಿಕ ಕಾರ್ಯದಲ್ಲಿ ಸದಾ ಮುಂದಾಗಿದೆ ಎಂದರು.

ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಎಸ್.ಎಸ್. ಪಾಟೀಲ ಮಾತನಾಡಿ, ಮನುಷ್ಯ ಸಂಸ್ಕಾರಯುತವಾಗಿ ಬದುಕುವುದನ್ನು ಮಠ, ಮಂದಿರಗಳು ಕಲಿಸುತ್ತವೆ. ಅದರಿಂದಲೇ ಮನುಷ್ಯ ನೆಮ್ಮದಿಯಿಂದ ಬದುಕುತ್ತಿದ್ದಾರೆ ಎಂದರು.ಉಪನ್ಯಾಸಕ ಪ್ರಭಾಕರ ಉಳ್ಳಾಗಡ್ಡಿ ಮಾತನಾಡಿ, ಹಿಂದು ಧರ್ಮದಲ್ಲಿ ರಾಮಯಾಣ, ಮಹಾಭಾರತ ಇತಿಹಾಸ ನಮ್ಮಗೆ ಸಮಾಜದ ಜೀವನ ತಿಳಿಸಿಕೊಟ್ಟದೆ. ಹಾಗಾಗಿ ನಾವು ರಾಮಯಾಣ ಮತ್ತು ಮಹಾಭಾರತದ ನಡೆದ ಘಟನೆಗಳನ್ನು ಅರಿತುಕೊಂಡು ಜೀವನ ನಡೆಸಬೇಕೆಂದರು.

ದುರ್ಗಾದೇವಿ ಮಹಿಳಾ ಭಜನಾ ಮಂಡಳಿ, ಶ್ರೀಮರಡಿ ಮಾರುತಿ ಸಂತ ಭಜನಾ ಮಂಡಳಿ ವಿಶೇಷ ಸಂಗೀತ ಸೇವೆ ಸಲ್ಲಿಸಿದರು. ಅಭಿನವ ಯಚ್ಚರ ಶ್ರೀಗಳು, ಮಲ್ಲಣ್ಣ ಚಿಕ್ಕನರಗುಂದ, ಬಸವರಾಜ ಕುಪ್ಪಸ್ತ, ಎಸ್.ವೈ. ಮುಲ್ಕಿಪಾಟೀಲ, ಬಾಪುಗೌಡ ತಿಮ್ಮನಗೌಡ್ರ, ವಿಠಲ ಶಾಲದಾರ, ಗುರುದೇವಿ ಶಾನವಾಡಮಠ, ಸುನೀಲ ಹಡಪದ, ವಿವಿಧ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಇದ್ದರು.