ಸಾರಾಂಶ
ದೇವಿಯರ ರಥೋತ್ಸವದ ಸಮಯದಲ್ಲಿ 2 ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಇದೆ. ಜಾತ್ರೆಗೆ ಆಗಮಿಸುವ ಭಕ್ತರಿಗೆ ಯಾವುದೇ ರೀತಿಯಿಂದ ಅನಾನುಕೂಲತೆಯಾಗದಂತೆ ಮೂಲಭೂತ ಸೌಕರ್ಯ ಒದಗಿಸಬೇಕು.
ಅಳ್ನಾವರ:
ಪಟ್ಟಣದಲ್ಲಿ ನಡೆಯುವ ಗ್ರಾಮದೇವಿ ಜಾತ್ರೆಯನ್ನು ಸುವ್ಯಸ್ಥಿತವಾಗಿ ನಡೆಯಲು ಇಲಾಖೆಯೊಂದಿಗೆ ಕಾರ್ಯಕರ್ತರ ಅವಶ್ಯಕತೆ ಬಹಳಷ್ಟಿದೆ ಎಂದು ಎಸ್ಪಿ ಡಾ. ಗೋಪಾಲ ಬ್ಯಾಕೋಡ ಹೇಳಿದರು.12 ವರ್ಷಗಳ ನಂತರ ನಡೆಯುತ್ತಿರುವ ಅಳ್ನಾವರ ಗ್ರಾಮದೇವಿಯರ ಜಾತ್ರೆಯು ಸುಗಮವಾಗಿ ನಡೆಯಲು ಕೈಕೊಂಡಿರುವ ಪೂರ್ವ ಸಿದ್ಧತೆಗಳ ಬಗ್ಗೆ ಜಾತ್ರಾ ಸಮಿತಿ ಜತೆಗೆ ಚರ್ಚಿಸಿ ದೇವಿಯರ ರಥೋತ್ಸವದ ಸಮಯದಲ್ಲಿ 2 ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಇದೆ. ಜಾತ್ರೆಗೆ ಆಗಮಿಸುವ ಭಕ್ತರಿಗೆ ಯಾವುದೇ ರೀತಿಯಿಂದ ಅನಾನುಕೂಲತೆಯಾಗದಂತೆ ಮೂಲಭೂತ ಸೌಕರ್ಯ ಒದಗಿಸಬೇಕು. ಬೇಸಿಗೆ ಸಮಯವಾದ್ದರಿಂದ ಕುಡಿಯುವ ನೀರಿನ ವ್ಯವಸ್ಥೆ ಸಾಕಷ್ಟಿರುವಂತೆ ನೋಡಿಕೊಳ್ಳುವುದು ಮತ್ತು ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಬೇಕು ಎಂದು ತಿಳಿಸಿದರು.
ಚುನಾವಣೆ ನೀತಿ ಸಂಹಿತೆ ಇರುವ ಕಾರಣ ಚುಣಾವಣಾ ಆಯೋಗದ ಮಾರ್ಗಸೂಚಿಯನ್ವಯ ಜಾತ್ರೆ ಆಯೋಜಿಸುವುದು ಸೇರಿದಂತೆ ಸಾರಿಗೆ ಸಂಸ್ಥೆಯವರೊಂದಿಗೆ ಸಂಪರ್ಕಿಸಿ ಭಕ್ತರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ವಾಹನಗಳ ನಿಲುಗಡೆಗೆ ಸೂಕ್ತ ಜಾಗೆ ಗೊತ್ತುಪಡಿಸುವಂತೆ ತಿಳಿಸಿದರು.ಜಾತ್ರೆ ಜರುಗುವ ಸ್ಥಳ ಮತ್ತು ಪಟ್ಟಣದೆಲ್ಲೆಡೆ ಸಿಸಿ ಕ್ಯಾಮೆರಾ ಅಳವಡಿಸುವಂತೆ ಸೂಚಿಸಿದ ಬ್ಯಾಕೋಡ, ಭದ್ರತೆಗೆ ಪೊಲೀಸರು, ಹೋಂ ಗಾರ್ಡ್ ಹಾಗೂ ಖಾಸಗಿ ಭದ್ರತಾ ಸಿಬ್ಬಂದಿ ನಿಯೋಜಿಸಲಾಗುವುದು ಎಂದರು.ಜಾತ್ರಾ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತಾ ಕ್ರಮವಾಗಿ ಸ್ವಯಂ ಸೇವಾ ಕಾರ್ಯಕರ್ತರನ್ನು ನೇಮಿಸಿಕೊಳ್ಳಲಾಗುವುದು. ಭಕ್ತರಿಗೆ ಯಾವುದೇ ಕೊರತೆ ಮತ್ತು ಅನಾನುಕೂಲತೆಯಾಗದಂತೆ ವ್ಯವಸ್ಥೆ ಮಾಡಿಕೊಳ್ಳುವ ಭರವಸೆಯನ್ನು ಜಾತ್ರಾ ಸಮಿತಿಯ ರೂಪೇಶ ಗುಂದಕಲ್ ನೀಡಿದರು.
ಸಭೆಯಲ್ಲಿ ಜಾತ್ರಾ ಮಹೋತ್ಸವ ಸಮಿತಿ ಸದಸ್ಯರು, ಸಾರ್ವಜನಿಕರು, ವಿವಿಧ ಸಮಾಜದ ಮುಖಂಡರು ಭಾಗವಹಿಸಿದ್ದರು. ಸಿಪಿಐ ಸಮೀರ್ ಮುಲ್ಲಾ, ಪಿಎಸ್ಐ ಪ್ರಕಾಶ ಡಿ. ಮತ್ತು ಪ್ರವೀಣ ನೇಸರಗಿ ಇದ್ದರು.