ಸಾರಾಂಶ
ಹುಮನಾಬಾದ್ನಲ್ಲಿ ವೀರಭದ್ರೇಶ್ವರ ಜಾತ್ರಾ ನಿಮಿತ್ತ ಶುಕ್ರವಾರ ಬೆಳಗ್ಗೆ 6ಗಂಟೆಗೆ ಅಗ್ನಿ ಕುಂಡ ಪ್ರವೇಶಿಸಿ ಲಕ್ಷಾಂತರ ಭಕ್ತರ ಮಧ್ಯೆ ಅಗ್ನಿ ಪ್ರದಕ್ಷಿಣಿ ನಡೆಯಿತು.
ಕನ್ನಡಪ್ರಭ ವಾರ್ತೆ ಹುಮನಾಬಾದ
ವೀರಭದ್ರೇಶ್ವರ ದೇವಸ್ಥಾನದಿಂದ ಗುರುವಾರ ರಾತ್ರಿ ಆರಂಭಗೊಂಡ ಭವ್ಯ ಮೆರವಣಿಗೆ ಶುಕ್ರವಾರ ಬೆಳಗ್ಗೆ 6 ಗಂಟೆಗೆ ಅಗ್ನಿ ಕುಂಡ ಪ್ರವೇಶಿಸಿ ಲಕ್ಷಾಂತರ ಭಕ್ತರ ಮಧ್ಯೆ ಅಗ್ನಿ ಪ್ರದಕ್ಷಿಣಿ ನಡೆಯಿತು.ವೀರಭದ್ರನ ಪಲ್ಲಕಿ ಮೆರವಣಿಗೆಯಲ್ಲಿ ನೇರೆಯ ರಾಜ್ಯಗಳಾದ ಆಂಧ್ರ, ತೆಲಾಂಗಣ ಹಾಗೂ ಮಹಾರಾಷ್ಟ್ರದ ಜನಸಾಗರ ಹರಿದುಬಂದಿತ್ತು. ವೀರ ರೇಣುಕ ಗಂಗಾಧರ ಶಿವಾಚಾರ್ಯ ಅವರು ಅಗ್ನಿ ಕುಂಡಕ್ಕೆ ನವಧಾನ್ಯಗಳಾದ ನವಣಿ, ಗೋಧಿ, ತೋಗರಿ ಬೆಳೆ ಸೇರಿ ವಿವಿಧ ಧಾನ್ಯ ಹಾಗೂ ಹಾಲು, ತುಪ್ಪ, ಮೊಸರು ಸೇರಿ ವಿಷೇಶ ಪೂಜೆ ಸಲ್ಲಿಸಿದರು. ಬಳಿಕ ಲಕ್ಷಾಂತರ ಭಕ್ತರ ಮಧ್ಯೆ ಅಗ್ನಿ ಕುಂಡಕ್ಕೆ ಪ್ರದಕ್ಷಿಣೆ ಹಾಕಿದರು.
ಪಟ್ಟಣದ ಪಲ್ಲಕಿ ಹೊರಡುವ ರಸ್ತೆಗಳಲ್ಲಿ ಅಂಗಡಿಗಳು ರಾತ್ರಿವಿಡಿ ತೆರೆದಿದ್ದವು. ಬೆಳಗ್ಗೆಯಿಂದ ಸಂಜೆಯವರೆಗೆ ಸಾವಿರಾರೂ ಭಕ್ತರು ತಾಸುಗಟ್ಟಲ್ಲೆ ತಾಳ್ಮೆಯಿಂದ ಸಾಲಾಗಿ ನಿತ್ತು ಅಗ್ನಿ ಕುಂಡಕ್ಕೆ ಪ್ರದಕ್ಷಿಣೆ ಹಾಕುವ ಮೂಲಕ ತಮ್ಮ ಭಕ್ತಿಸೇವೆ ಸಲ್ಲಿಸಿದರು.ಅಗ್ನಿ ಕುಂಡದ ವ್ಯವ್ಯಸ್ಥಾಪಕ ಕಮಿಟಿಯಿಂದ ಅಗ್ನಿ ಕುಂಡಕ್ಕೆ ಬರುವ ಭಕ್ತರಿಗೆ ಯಾವುದೇ ತೊಂದರೆ ಯಾಗದಂತೆ ಸೂಕ್ತ ವ್ಯವಸ್ಥೆ ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬೀಗಿ ಬಂದೊಬಸ್ತ ಮಾಡಲಾಗಿತ್ತು.
ಜಾತ್ರೆಗೆ ಆಗಮಿಸಿದ ಜನಸಮೂಹಕ್ಕೆ ದೇವಸ್ಥಾನದ ಎದುರುಗಡೆ, ಬಸವೇಶ್ವರ ವೃತ್ತದಬಳಿ, ಬಸ್ ನಿಲ್ದಾಣ ಪಕ್ಕದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಪುರಸಭೆಯಿಂದ ಹಾಗೂ ಪಟ್ಟಣದ ನಾಗರಿಕರಿಂದ ಪಲ್ಲಕಿ ಮೆರವಣಿಗೆ ಮಾರ್ಗದ 30ಕ್ಕೂ ಅಧಿಕ ಸ್ಥಳಗಳಲ್ಲಿ ಅನ್ನ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.