ಕೃಷಿ ಉತ್ತೇಜನಕ್ಕೆ ಉತ್ಪನ್ನಗಳ ಮೌಲ್ಯವರ್ಧನೆ ಆಗಲಿ: ಕೃಷ್ಣ ಉಕ್ಕುಂದ

| Published : Feb 18 2024, 01:33 AM IST

ಕೃಷಿ ಉತ್ತೇಜನಕ್ಕೆ ಉತ್ಪನ್ನಗಳ ಮೌಲ್ಯವರ್ಧನೆ ಆಗಲಿ: ಕೃಷ್ಣ ಉಕ್ಕುಂದ
Share this Article
  • FB
  • TW
  • Linkdin
  • Email

ಸಾರಾಂಶ

ರೈತರು ತಂತ್ರಜ್ಞಾನ ಬಳಸಿಕೊಂಡು ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದೇ ಆದಲ್ಲಿ ಹೆಚ್ಚು ಲಾಭದಾಯಕವಾಗುತ್ತದೆ.

ಕೊಪ್ಪಳ: ತೋಟಗಾರಿಕಾ ಬೆಳೆಗಳು ಸೇರಿದಂತೆ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯಿಂದ ಕೃಷಿ ಹೆಚ್ಚು ಲಾಭದಾಯಕ ಮತ್ತು ಆರ್ಥಿಕ ಅಭಿವೃದ್ಧಿಗೆ ಸಹಕಾರಿ ಎಂದು ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಕೃಷ್ಣ ಉಕ್ಕುಂದ ಹೇಳಿದರು.ತಾಲೂಕಿನ ಡೊಂಬರಳ್ಳಿ ಗ್ರಾಮದಲ್ಲಿ ಕರಿಯಮ್ಮದೇವಿ ಮೂರ್ತಿ ಪ್ರತಿಷ್ಠಾಪನೆ ಮತ್ತು ಗ್ರಾಮದೇವತೆ ದ್ಯಾಮಮ್ಮ ದೇವಿಯ ಜಾತ್ರೆ ನಿಮಿತ್ತ ಹಮ್ಮಿಕೊಂಡಿದ್ದ ಧಾರ್ಮಿಕ ಚಿಂತನೆ ಹಾಗೂ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ರೈತರು ತಂತ್ರಜ್ಞಾನ ಬಳಸಿಕೊಂಡು ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದೇ ಆದಲ್ಲಿ ಹೆಚ್ಚು ಲಾಭದಾಯಕವಾಗುತ್ತದೆ ಎಂದರು.ತೋಟಗಾರಿಕಾ ಬೆಳೆಯಲ್ಲಿ ಡೊಂಬರಳ್ಳಿ ಗ್ರಾಮದ ರೈತರು ಮಾದರಿಯಾಗಿದ್ದಾರೆ. ಸರ್ಕಾರದ ಯೋಜನೆಗಳನ್ನು ಸದುಪಯೋಗ ಮಾಡಿಕೊಂಡು ಪ್ರಗತಿ ಸಾಧಿಸಿದ್ದಾರೆ‌.ಗ್ರಾಮ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಅತೀ ಹೆಚ್ಚು ಬಾಳೆ ಬೆಳೆಯುತ್ತಾರೆ. ಆದರೆ ಮಧ್ಯವರ್ತಿಗಳ ಮೂಲಕ‌ ಮಾರಾಟ ಮಾಡುವುದರಿಂದ ನಿರೀಕ್ಷಿತ ಲಾಭವಾಗುವುದಿಲ್ಲ. ಕಂಪನಿಗಳ ಜೊತೆ ಒಡಂಬಡಿಕೆ ಮಾಡಿಕೊಂಡು ಗುಣಮಟ್ಟದ ಉತ್ಪಾದನೆ ಮಾಡಿದರೆ ವಿದೇಶಕ್ಕೆ ರಫ್ತು ಮಾಡಿದರೆ ಈಗಿರುವ ಲಾಭಕ್ಕಿಂತ ದುಪ್ಪಟ್ಟು ಲಾಭ ಪಡೆಯಬಹುದಾಗಿದೆ ಎಂದರು.ಬಾಳೆಹಣ್ಣಿನ ಮಾರಾಟದ ಜೊತೆಗೆ ಅದರ ದಿಂಡು, ಹೂ, ಎಲೆ ಬಳಕೆ ಮಾಡಿಕೊಂಡು ಅನೇಕ ಉತ್ಪಾದನೆ ಮಾಡಬಹುದಾಗಿದೆ. ಬಾಳೆಕಾಯಿಯಿಂದ ಮೈದಾ ಮಾದರಿ ಅತ್ಯುಪಯುಕ್ತ ಹಿಟ್ಟುಸಹ ಸಿದ್ಧ ಮಾಡಬಹುದಾಗಿದೆ. ಪೇಪರ್ ಸಹ ಸಿದ್ಧ ಮಾಡಬಹುದಾಗಿದೆ ಎಂದು ಮಾಹಿತಿ ನೀಡಿದರು.ಕೃಷಿ ಇಲಾಖೆ ಉಪಕೃಷಿ ನಿರ್ದೇಶಕ ಸಹದೇವ ಯರಗುಪ್ಪ ಸಿರಿಧಾನ್ಯಗಳ ಕುರಿತು ಮಾತನಾಡಿದರು. ಆಧುನಿಕ ಜೀವನ ಪದ್ಧತಿ ಮತ್ತು ಆಹಾರ ಪದ್ಧತಿಯಿಂದ ಜನರ ಆರೋಗ್ಯ ಹಾಳಾಗುತ್ತಿದೆ. ಇದಕ್ಕೆ ಪರಿಹಾರ ಎಂದರೆ ಸಿರಿಧಾನ್ಯಗಳ ಬಳಕೆ ಎಂದರು.ನಮ್ಮ ಅಹಾರ ಸಂಸ್ಕೃತಿ ಮರೆತಿರುವ ನಾವು ಆಧುನಿಕ ಬದುಕಿನ ಭರಾಟೆಯಲ್ಲಿ ಕರಗಿ ಹೋಗುತ್ತಿದ್ದೇವೆ.‌ ಇದಕ್ಕೆ ಕಡಿವಾಣ ಹಾಕುವ ಮೂಲಕ ಹಳ್ಳಿಯ ಬದುಕು ಸಾಗಿಸಬೇಕು ಎಂದರು.ದದೇಗಲ್ ಸಿದ್ಧಾರೂಢ ಮಠದ ಸದ್ಗುರು ಆತ್ಮಾನಂದ ಶ್ರೀ ಹಾಗೂ ಕೊಂಬಳಿ ಚೌಕಿ‌ಮಠದ ಭಾವೈಕ್ಯತೆಯ ಸದ್ಗುರು ಗಾಡಿತಾತ ಶ್ರೀ ಆಶೀರ್ವಚನ ನೀಡಿದರು.ಮೂರ್ತಿ ಮೆರವಣಿಗೆ:ಗ್ರಾಮದಲ್ಲಿ ಶ್ರದ್ಧಾ, ಭಕ್ತಿಯಿಂದ ಗ್ರಾಮದಲ್ಲಿ ದ್ಯಾಮಮ್ಮದೇವಿಯ ಮೂರ್ತಿ ಮೆರವಣಿಗೆ ಅತ್ಯಂತ ವಿಜೃಂಭಣೆಯಿಂದ ನಡೆಯಿತು.ಪ್ರಕಾಶ ಹೆಮ್ಮಾಡಿ ಹಾಗೂ ನೇತ್ರಾವತಿ ಹೆಮ್ಮಾಡಿ ಜಾದು ಪ್ರದರ್ಶನ, ಮಾರುತಿ ಚಿತ್ರಗಾರ ತಂಡದ ಯೋಗ ಹಾಗೂ ಕೂಗಳಿ ಕೊಟ್ರೇಶ ಅವರ ಹಾಸ್ಯ ಜನಮನಸೂರೆಗೊಂಡವು.ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ತಡರಾತ್ರಿವರೆಗೆ ನಡೆದರೂ ಕಿಕ್ಕಿರಿದ ಜನ ಸೇರಿದ್ದರು‌. ಪ್ರಾರಂಭದಲ್ಲಿ ಗವಿಸಿದ್ದೇಶ್ವರ ಸ್ವರ ಸಂಚಾರ ತಂಡ ಪ್ರಾರ್ಥನೆ ಹಾಗೂ ಸುಗಮ ಸಂಗೀತ ನೀಡಿದರು.ಭೀಮನಗೌಡ ಪೊಲೀಸ್ ಪಾಟೀಲ್ ಸ್ವಾಗತಿಸಿದರು. ಕೃಷ್ಣಾರಡ್ಡಿ ಗಲಬಿ ಕಾರ್ಯಕ್ರಮ ನಿರೂಪಿಸಿದರು. ಚಂದ್ರಶೇಖರ ಕಾವಲಿ ಹಾಗೂ ಪ್ರತಾಪಗೌಡ ಅತಿಥಿಗಳ ಪರಿಚಯ ಮಾಡಿದರು. ಪತ್ರಕರ್ತ ಸೋಮರಡ್ಡಿ ಅಳವಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.