ಸಾರಾಂಶ
ಸಿದ್ದಾರೂಡ ಮಠದಿಂದ ಪಾದಯಾತ್ರೆ ಮೂಲಕ ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಕಚೇರಿಗೆ ತೆರಳಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ರೋಣ: ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ರಾಜ್ಯಪಾಲರು ಪ್ರಾಸಿಕ್ಯೋಶನ್ಗೆ ಅನುಮತಿ ನೀಡಿರುವ ನಡೆ ಖಂಡನೀಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಸೋಮವಾರ ಅಹಿಂದ ಒಕ್ಕೂಟ ರೋಣ ತಾಲೂಕು ಘಟಕದಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.
ಸಿದ್ದಾರೂಡ ಮಠದಿಂದ ಪಾದಯಾತ್ರೆ ಮೂಲಕ ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಕಚೇರಿಗೆ ತೆರಳಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.ಸಿದ್ದರಾಮಯ್ಯ ವಿರುದ್ಧ ರಾಜಕೀಯ ಷಡ್ಯಂತ್ರ ನಡೆಸಲಾಗುತ್ತಿದ್ದು, ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೋಶನ್ಗೆ ಅನುಮತಿ ನೀಡುವ ಮೂಲಕ ಅವರನ್ನು ರಾಜಕೀಯವಾಗಿ ಕುಗ್ಗಿಸುವ ಹುನ್ನಾರ ನಡೆಸಲಾಗುತ್ತಿದೆ. ಕೂಡಲೇ ರಾಜ್ಯಪಾಲರು ಪ್ರಾಸಿಕ್ಯೋಶನ್ ಹಿಂಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ತಹಸೀಲ್ದಾರ್ ನಾಗರಾಜ ಕೆ. ಮನವಿ ಸ್ವೀಕರಿಸಿ, ಕೂಡಲೇ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಕಳುಹಿಸಲಾಗುವುದು ಎಂದು ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಪುರಸಭೆ ಉಪಾಧ್ಯಕ್ಷ ಮಿಥುನ ಪಾಟೀಲ, ಅಹಿಂದ ಒಕ್ಕೂಟ ತಾಲೂಕು ಅಧ್ಯಕ್ಷ ಬಸವರಾಜ ಜಗ್ಗಲ, ಎಚ್.ಎಸ್. ಸೊಂಪೂರ, ಅಬ್ದುಲ್ಸಾಬ ಹೊಸಮನಿ, ದುರ್ಗಪ್ಪ ಹಿರೇಮನಿ, ಬಾವಾಸಾಬ ಬೇಟಗೇರಿ, ಹನಮಂತಪ್ಪ ತಳ್ಳಿಕೇರಿ, ಉಣ್ಣೆ ಹಾಗೂ ಕೈಮಗ್ಗ ಮಂಡಳಿ ರಾಜ್ಯ ನಿರ್ದೇಶಕ ಕುಮಾರ ಯಂಡಿಗೇರಿ, ಅಂಹಿಂದ ಜಿಲ್ಲಾ ಉಪಾಧ್ಯಕ್ಷ ತಿಪ್ಪಣ್ಣ ಕುರಿ, ಕುರಬ ಸಂಘ ತಾಲೂಕು ಉಪಾಧ್ಯಕ್ಷ ಷಡಕ್ಷರಿ ಯಲಿಗಾರ, ಶರಣಪ್ಪ ಕುರಿಯವರ, ಭೀಮಪ್ಪ ದುಗಲದ, ಅಶೋಕ ಕೊಪ್ಪದ ಮುಂತಾದವರು ಭಾಗವಹಿಸಿದ್ದರು.