ಕನ್ನಡಪ್ರಭ ವಾರ್ತೆ ಮುಧೋಳ ರೋಬೋಟಿಕ್ಸ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್(ಎಐ) ಪ್ರಯೋಗಾಲಯ ಆರಂಭಿಸುವುದರಿಂದ ವಿದ್ಯಾರ್ಥಿಗಳಲ್ಲಿ ತಂತ್ರಜ್ಞಾನ, ಕೋಡಿಂಗ್ ಮತ್ತು ನಾವೀನ್ಯತೆ ಕೌಶಲ್ಯಗಳನ್ನು ಬೆಳೆಸಲು ಹೆಚ್ಚು ಸಹಾಯ ಮಾಡುತ್ತದೆ ಎಂದು ಮುಧೋಳ ಬಿಇಒ ಸಮೀರ ಮುಲ್ಲಾ ಹೇಳಿದರು.
ಕನ್ನಡಪ್ರಭ ವಾರ್ತೆ ಮುಧೋಳ
ರೋಬೋಟಿಕ್ಸ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್(ಎಐ) ಪ್ರಯೋಗಾಲಯ ಆರಂಭಿಸುವುದರಿಂದ ವಿದ್ಯಾರ್ಥಿಗಳಲ್ಲಿ ತಂತ್ರಜ್ಞಾನ, ಕೋಡಿಂಗ್ ಮತ್ತು ನಾವೀನ್ಯತೆ ಕೌಶಲ್ಯಗಳನ್ನು ಬೆಳೆಸಲು ಹೆಚ್ಚು ಸಹಾಯ ಮಾಡುತ್ತದೆ ಎಂದು ಮುಧೋಳ ಬಿಇಒ ಸಮೀರ ಮುಲ್ಲಾ ಹೇಳಿದರು.ನಗರದ ಮುಧೋಳ ರಾಯಲ್ ಸ್ಕೂಲ್ನಲ್ಲಿ ಶನಿವಾರ ವಿದ್ಯಾರ್ಥಿಗಳಿಗಾಗಿ ಆರಂಭಿಸಲಾದ ರೋಬೋಟಿಕ್ಸ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಲ್ಯಾಬ್ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ರೋಬೋಟಿಕ್ಸ್ ಆಂಡ್ ಎಐ ಲ್ಯಾಬ್ ಸ್ಥಾಪಿಸುವುದು ಅತ್ಯಂತ ಅವಶ್ಯಕವಾಗಿದೆ. ಇದು ವಿದ್ಯಾರ್ಥಿಗಳಲ್ಲಿ ಕೃತಕ ಬುದ್ಧಿಮತ್ತೆ, ಕೋಡಿಂಗ್ ಮತ್ತು ಕ್ರಿಯೇಟಿವ್ ಥಿಂಕಿಂಗ್ ಸ್ಕಿಲ್ಸ್, ವಿಜ್ಞಾನ, ತಂತ್ರಜ್ಞಾನ ಮತ್ತು ಗಣಿತ ಕೌಶಲ್ಯಗಳನ್ನು ಪ್ರಾಯೋಗಿಕವಾಗಿ ಬೆಳೆಸಲು ಇದು ಸಹಾಯ ಮಾಡುತ್ತದೆ. ಈ ಪ್ರಯೋಗಾಲಯವು ಪ್ರಸ್ತುತ ಯುಗದಲ್ಲಿ ಪ್ರಚಲಿತದಲ್ಲಿರುವ ಆಧುನಿಕ ತಂತ್ರಜ್ಞಾನಗಳ ಮೂಲ ತತ್ವಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುತ್ತದೆ. ಇದರ ಮೂಲಕ ವಿದ್ಯಾರ್ಥಿಗಳು ತಮ್ಮ ಸೃಜನಶೀಲ ಚಿಂತನೆಯನ್ನು ಬಳಸಿಕೊಂಡು ರೋಬೋಟ್ಗಳು ಮತ್ತು ಡ್ರೋನ್ಗಳನ್ನು ತಯಾರಿಸಬಹುದು. ಮುಧೋಳ ರಾಯಲ್ ಸ್ಕೂಲ್ನಲ್ಲಿ ಡಾ.ಟಿ.ವ್ಹಿ.ಅರಳಿಕಟ್ಟಿ ಅವರು ಜೆಇಇ ಮತ್ತು ನೀಟ್ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಉಚಿತವಾಗಿ ನೀಡುತ್ತಿರುವುದಕ್ಕೆ ಅಭಿನಂದಿಸುವುದಾಗಿ ತಿಳಿಸಿದರು.
ಸಿಪಿಐ ಎಂ.ನಾಗರೆಡ್ಡಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳಿಗೆ ಪಠ್ಯದ ಜೊತೆ ನೈತಿಕ ಪಾಠದ ಬೋಧನೆಯು ಅವಶ್ಯಕವಿದ್ದು, ಪೊಲೀಸ್ ಇಲಾಖೆಯ ಸಹಯೋಗದಲ್ಲಿ ರಾಯಲ್ ಸ್ಕೂಲ್ ಮಕ್ಕಳಿಗೆ ಕಾನೂನು ಮತ್ತು ಕಾಯ್ದೆಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸುವುದಾಗಿ ತಿಳಿಸಿದರು.ಹಿರಿಯ ವಕೀಲ ಎ.ಎಸ್.ಯಾದವಾಡ ಮಾತನಾಡಿ, ಡಾ.ಟಿ.ವಿ.ಅರಳಿಕಟ್ಟಿ ಓರ್ವ ಕನಸುಗಾರ, ಸಾಧಕರ ಸಾಧಕ, ಹೊಸತನ ತರುವಲ್ಲಿ ಇವರು ಮುಂಚೂಣಿಯಲ್ಲಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ನಿವೃತ್ತ ಡಿಡಿಪಿಐ ಎಂ.ಜಿ.ದಾಸರ ಮಾತನಾಡಿ, ಇಂದಿನ ಶಾಲಾ ಮಕ್ಕಳಿಗೆ ಎಐ ಜ್ಞಾನದ ಅವಶ್ಯವಿದೆ. ಇದನ್ನು ಅರಿತುಕೊಂಡಿರುವ ಡಾ.ಟಿ.ವ್ಹಿ.ಅರಳಿಕಟ್ಟಿ ಅವರು ಮುಂದಾಲೋಚನೆಯಿಂದಾಗಿ ಶಿಕ್ಷಕರಿಗೆ ರೋಬೋಟಿಕ್ಸ್ ತರಬೇತಿ ನೀಡಲು ಮುಂದಾಗಿದ್ದಾರೆ. ಅಲ್ಲದೇ, ಎಐ ಲ್ಯಾಬ್ ಆರಂಭಿಸಿದ್ದಾರೆ. ಮಕ್ಕಳು ಇದರ ಸದುಪಯೋಗ ಪಡೆದು ತಂತ್ರಜ್ಞಾನದ ಮಾಹಿತಿ ಪಡೆದುಕೊಳ್ಳುವಂತೆ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮುಧೋಳ ರಾಯಲ್ ಸ್ಕೂಲ್ ಅಧ್ಯಕ್ಷೆ ಸವಿತಾ ಡಾ.ತಿಮ್ಮಣ್ಣ ಅರಳಿಕಟ್ಟಿ ಮಾತನಾಡಿ, ನಮ್ಮ ಸ್ಕೂಲ್ನಲ್ಲಿ ಹೊಸತನ ಇರುತ್ತೆ. ನಾವು ಮಕ್ಕಳು ಉಜ್ವಲ ಭವಿಷ್ಯಕ್ಕಾಗಿ ಸದಾಕಾಲ ಶ್ರಮಿಸುತ್ತಿರುವುದಾಗಿ ಹೇಳಿದರು.ಅರಳಿಕಟ್ಟಿ ಫೌಂಡೇಶನ್ ಸಂಸ್ಥಾಪಕ ಡಾ.ತಿಮ್ಮಣ್ಣ ಅರಳಿಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಪ್ರಪ್ರಥಮ ಭಾರಿಗೆ ಮುಧೋಳ ರಾಯಲ್ ಸ್ಕೂಲ್ನಲ್ಲಿ ರೋಟೋಟಿಕ್ಸ್ ಮತ್ತು ಎಐ ಲ್ಯಾಬ್ ಆರಂಭಿಸಲಾಗಿದೆ. ಕಳೆದ ವರ್ಷ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಯೋರ್ವ ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದಿದ್ದಾನೆ. ಪ್ರಸ್ತುತ 1350 ವಿದ್ಯಾರ್ಥಿಗಳಿದ್ದು, 150 ಜನ ಸಿಬ್ಬಂದಿಗಳಿದ್ದಾರೆ. ವಿದ್ಯಾರ್ಥಿಗಳು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಪಟ್ಟ 12ಕ್ಕೂ ಹೆಚ್ಚು ಪ್ರಾಯೋಗಿಕ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ರಾಯಲ್ ಸ್ಕೂಲ್ ಉಪಾಧ್ಯಕ್ಷೆ ರಾಜೇಶ್ವರಿ ಕೋಮಾರ, ಕಾರ್ಯದರ್ಶಿ ವಿನಾಯಕ ಅರಳಿಕಟ್ಟಿ, ಆಡಳಿತಾಧಿಕಾರಿ ಇಂದಿರಾ ಸಾತನೂರ, ಪ್ರಾಚಾರ್ಯ ಚಂದ್ರಶೇಖರ ನಾಗವಂದ, ಉಪ ಪ್ರಾಚಾರ್ಯ ಮಾರುತಿ ಪವಾರ ಸಿಬ್ಬಂದಿ, ಇತರರು ಇದ್ದರು.------
ಕೋಟ್ಇಂಟರ್ನ್ಯಾಶನಲ್ ಸ್ಕೂಲ್ನಲ್ಲಿರುವ ಸೌಲಭ್ಯಗಳು ನಮ್ಮ ಸ್ಕೂಲ್ ನಲ್ಲಿರುವುದರಿಂದ ಇಲ್ಲಿ ಓದುತ್ತಿರುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಿದೆ. ಈ ಶಾಲೆಯ ಮಕ್ಕಳು ತಾವೇ ಡ್ರೋಣ ಕ್ಯಾಮರಾ ಸಿದ್ದಪಡಿಸಿರುವುದು ನಮಗೆ ಹೆಮ್ಮೆಯ ವಿಷಯ. ಶಿಕ್ಷಕರಿಗೆ ರೋಟೋಟಿಕ್ಸ್ ಮತ್ತು ಎಐ ತರಬೇತಿ ನೀಡಲು ತರಬೇತಿದಾರರು ಬಂದಿದ್ದು, ಶಿಕ್ಷಕರು ತರಬೇತಿ ಪಡೆದ ನಂತರ ಮಕ್ಕಳಿಗೆ ಅದರ ಬಗ್ಗೆ ಸಮಗ್ರ ಜ್ಞಾನ ನೀಡುತ್ತಾರೆ.ಡಾ.ತಿಮ್ಮಣ್ಣ ಅರಳಿಕಟ್ಟಿ, ಅರಳಿಕಟ್ಟಿ ಫೌಂಡೇಶನ್ ಸಂಸ್ಥಾಪಕ