ರೈತರಿಗೆ ಸುಲಭ ಸಾಲ ಸೌಲಭ್ಯ ನೀಡುವ ಗುರಿಯನ್ನು ಹೊಂದಿದ್ದು ತಾಲೂಕಿನ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಸಾಲ ಸೌಲಭ್ಯಗಳನ್ನು ಯಾವುದೇ ಅಡೆತಡೆಯಿಲ್ಲದೆ, ಅತ್ಯಂತ ಸುಲಭವಾಗಿ ತಲುಪಿಸುವುದು ನಮ್ಮ ಪ್ರಥಮ ಆದ್ಯತೆ ನೀಡಲಾಗುವುದು ಎಂದು ಪಿಎಲ್ಡಿ ಬ್ಯಾಂಕ್ ನೂತನ ಅಧ್ಯಕ್ಷ ಡಿ. ಮಂಜುನಾಥ್ ಚಿರತಹಳ್ಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ ರೈತರಿಗೆ ಸುಲಭ ಸಾಲ ಸೌಲಭ್ಯ ನೀಡುವ ಗುರಿಯನ್ನು ಹೊಂದಿದ್ದು ತಾಲೂಕಿನ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಸಾಲ ಸೌಲಭ್ಯಗಳನ್ನು ಯಾವುದೇ ಅಡೆತಡೆಯಿಲ್ಲದೆ, ಅತ್ಯಂತ ಸುಲಭವಾಗಿ ತಲುಪಿಸುವುದು ನಮ್ಮ ಪ್ರಥಮ ಆದ್ಯತೆ ನೀಡಲಾಗುವುದು ಎಂದು ಪಿಎಲ್ಡಿ ಬ್ಯಾಂಕ್ ನೂತನ ಅಧ್ಯಕ್ಷ ಡಿ. ಮಂಜುನಾಥ್ ಚಿರತಹಳ್ಳಿ ಹೇಳಿದರು. ಅವರು ಶಿರಾ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ ನೂತನ ಅಧ್ಯಕ್ಷರಾಗಿ ಡಿ.ಮಂಜುನಾಥ ಚಿರತಹಳ್ಳಿ, ಉಪಾಧ್ಯಕ್ಷರಾಗಿ ಅಜ್ಜಣ್ಣ ಅವರು ಅವಿರೋಧವಾಗಿ ಆಯ್ಕೆಯಾಗಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಹೆಚ್ಚಿನ ಅನುದಾನ ಮತ್ತು ಸಾಲದ ಸೌಲಭ್ಯಗಳನ್ನು ತರುವ ಗುರಿ ಹೊಂದಿದ್ದೇವೆ. ರೈತರ ಆರ್ಥಿಕ ಪ್ರಗತಿ ಮತ್ತು ಬ್ಯಾಂಕಿನ ಅಭಿವೃದ್ಧಿಯ ದೂರದೃಷ್ಟಿಯೊಂದಿಗೆ ಅಧಿಕಾರ ವಹಿಸಿಕೊಂಡಿದ್ದೇನೆ ಎಂದರು. ಪಿ. ಎಲ್. ಡಿ ಬ್ಯಾಂಕ್ ಮಾಜಿ ಅಧ್ಯಕ್ಷ, ಕುಂಚಿಟಿಗರ ಸಂಘದ ಅಧ್ಯಕ್ಷ ಕೆ.ಎಲ್. ಮುಕುಂದಪ್ಪ ಮಾತನಾಡಿ, ರೈತರಲ್ಲಿ ಆತ್ಮವಿಶ್ವಾಸ ತುಂಬುವ ಭರವಸೆ ನಮ್ಮೆಲ್ಲರ ಕರ್ತವ್ಯ, ಇತ್ತೀಚಿನ ದಿನಗಳಲ್ಲಿ ಸಾಲದ ಭಾದೆ ಅಥವಾ ಬೆಳೆ ಹಾನಿಯಿಂದ ರೈತರು ಆತ್ಮಹತ್ಯೆಯಂತಹ ತಪ್ಪು ನಿರ್ಧಾರಗಳನ್ನು ಕೈಗೊಳ್ಳುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸಿದರು. ಯಾವುದೇ ಸಮಸ್ಯೆಗೂ ಆತ್ಮಹತ್ಯೆ ಪರಿಹಾರವಲ್ಲ. ರೈತರು ಎದೆಗುಂದಬಾರದು, ಪ್ರತಿ ಸಮಸ್ಯೆಗೂ ಒಂದು ಹಾದಿ ಇದ್ದೇ ಇರುತ್ತದೆ. ರೈತರ ಏಳಿಗೆಗಾಗಿ ನಾವು ಮತ್ತು ಬ್ಯಾಂಕ್ ನ ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರು ಸದಾ ನಿಮ್ಮ ಜೊತೆಗಿರುತ್ತೇವೆ, ಎಂದು ರೈತರಲ್ಲಿ ಭರವಸೆ ಮೂಡಿಸಿದರು.ಪಿ. ಎಲ್. ಡಿ. ಬ್ಯಾಂಕ್ ನೂತನ ಉಪಾಧ್ಯಕ್ಷ ಅಜ್ಜಣ್ಣ ಮಾತನಾಡಿ, ರೈತರ ಆರ್ಥಿಕ ಸಬಲೀಕರಣಕ್ಕೆ ನಾವೆಲ್ಲರೂ ಸಿದ್ದರಿದ್ದೇವೆ, ರೈತರು ಬ್ಯಾಂಕ್ ನೀಡುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಕೃಷಿಯಲ್ಲಿ ಆಧುನಿಕತೆ ಅಳವಡಿಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂಬುದು ಬ್ಯಾಂಕಿನ ಆಶಯವಾಗಿದೆ ಎಂದು ತಿಳಿಸಿದರು. ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಎಚ್.ಎಲ್. ನಾರಾಯಣಪ್ಪ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷರುಗಳಾದ ಜಗದೀಶ್ ಗೌಡ, ಕವಿತಾ, ಈರಣ್ಣ, ದೇವರಾಜು, ಶ್ರೀರಾಮಯ್ಯ, ರಂಗನಾಥ್, ಗೌಡ ,ತಾರಪ್ಪ ತಿಮ್ಮರಾಜು, ಸಹಕಾರಿ ಅಭಿವೃದ್ದಿ ಅಧಿಕಾರಿ ಶ್ರೀನಿವಾಸ್ , ಪಿಎಲ್ಡಿ ಬ್ಯಾಂಕ್ ನ ವ್ಯವಸ್ಥಾಪಕ ರವಿ, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ. ಆರ್. ಮಹೇಂದ್ರ ಗೌಡ, ಹರಿಯಜ್ಜಿ ಹಳ್ಳಿ ಗಿರೀಶ್, ಅನಿಲ್ ಕುಮಾರ್, ಮುಖಂಡರಾದ ಅರುಣ ಗೌಡ, ಪಿ.ಆರ್.ಮಂಜುನಾಥ್, ಸುನಿಲ್ ಗೌಡ, ನರಸಿಂಹಮೂರ್ತಿ ಸೇರಿದಂತೆ ಅನೇಕ ಮುಖಂಡರು ಬ್ಯಾಂಕಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.