ಬಿಡಿಸಿಸಿ ಬ್ಯಾಂಕ್‌ಗೆ ₹12.17 ಕೋಟಿ ನಿವ್ವಳ ಲಾಭ

| Published : Jul 26 2024, 01:38 AM IST

ಬಿಡಿಸಿಸಿ ಬ್ಯಾಂಕ್‌ಗೆ ₹12.17 ಕೋಟಿ ನಿವ್ವಳ ಲಾಭ
Share this Article
  • FB
  • TW
  • Linkdin
  • Email

ಸಾರಾಂಶ

ಬಾಗಲಕೋಟೆ ನಗರದ ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಕಳೆದ ಮಾರ್ಚ್ ಅಂತ್ಯಕ್ಕೆ ₹12.17 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ, ಮಾಜಿ ಸಚಿವ ಅಜಯಕುಮಾರ ಸರನಾಯಕ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಾಗಲಕೋಟೆ ನಗರದ ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಕಳೆದ ಮಾರ್ಚ್‌ ಅಂತ್ಯಕ್ಕೆ ₹12.17 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ, ಮಾಜಿ ಸಚಿವ ಅಜಯಕುಮಾರ ಸರನಾಯಕ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, 2024-25ನೇ ಸಾಲಿಗೆ ₹13.50 ಕೋಟಿ ನಿವ್ಹಳ ಲಾಭದ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಮಾರ್ಚ್ ಅಂತ್ಯಕ್ಕೆ ಬ್ಯಾಂಕ್‌ ₹204.35 ಕೋಟಿ ಶೇರು ಬಂಡವಾಳ, ₹354.18 ಕೋಟಿ ನಿಧಿಗಳು, ₹558.53 ಕೋಟಿ ಸ್ವಂತ ಬಂಡವಾಳ ಹೊಂದಿದ್ದು, ₹5171.43 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ₹3590.06 ಕೋಟಿ ಠೇವಣಿ ಹೊಂದಿದ್ದು, 2024-25 ನೇ ಸಾಲಿಗೆ ₹3950 ಕೋಟಿಗಳ ಠೇವಣಿ ಸಂಗ್ರಹಣೆಯ ಗುರಿ ಹೊಂದಲಾಗಿದೆ ಎಂದರು.

10 ಹೊಸ ಶಾಖೆ ಆರಂಭ:

ಈಚೆಗೆ 10 ಹೊಸ ಶಾಖೆಗಳನ್ನು ಪ್ರಾರಂಭಿಸಲಾಗಿದ್ದು, ಒಟ್ಟು 57 ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಹೊಸದಾಗಿ 6 ಶಾಖೆಗಳನ್ನು ತೆರೆಯಲು ಅನುಮತಿಗಾಗಿ ರಿಜರ್ವ್ ಬ್ಯಾಂಕಿಗೆ ಪ್ರಸ್ತಾವಣೆ ಸಲ್ಲಿಸಲಾಗಿದೆ ಎಂದು ತಿಳಿಸಿದ ಸರನಾಯಕ, 57 ಶಾಖೆಗಳ ಪೈಕಿ 8 ಶಾಖೆಗಳು ಸ್ವಂತ ಕಟ್ಟಡ ಹೊಂದಿವೆ. 5 ಶಾಖೆಗಳಿಗೆ ನಿವೇಶನ ಗುರುತಿಸಲಾಗಿದ್ದು, ಅಲ್ಲಿಯೂ ಸ್ವಂತ ಕಟ್ಟಡ ನಿರ್ಮಿಸಲಾಗುವುದು ಎಂದು ಹೇಳಿದರು.

270860 ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ:

ಬ್ಯಾಂಕ್‌ 2023-24ನೇ ಸಾಲಿನಲ್ಲಿ 270860 ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ₹1351.58 ಕೋಟಿಗಳ ಬೆಳೆಸಾಲ ಮತ್ತು 1121 ಜನ ರೈತರಿಗೆ ಶೇ.3 ರ ಬಡ್ಡಿ ದರದಲ್ಲಿ ₹68.66 ಕೋಟಿಗಳ ಸಾಲ ವಿತರಿಸಲಾಗಿದೆ. ಪೈಪ್‌ಲೈನ್, ಪಂಪ್‌ಸೆಟ್, ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆ, ಭೂ ಅಭಿವೃದ್ಧಿ, ತೋಟಗಾರಿಕೆ ಬೆಳೆ, ರೇಷ್ಮೆ ಮತ್ತು ಟ್ರ್ಯಾಕ್ಟರ್ ಖರೀದಿ ಉದ್ದೇಶಗಳಿಗೆ ಮಾಧ್ಯಮಿಕ ಕೃಷಿ ಸಾಲ ನೀಡಲಾಗಿದೆ ಎಂದು ಅವರು ತಿಳಿಸಿದರು.

ಸಕ್ಕರೆ, ಸಿಮೆಂಟ್, ಪಿವಿಸಿ ಪೈಪ್, ಔಷಧ ಉತ್ಪಾದಿತ ಉದ್ದಿಮೆಗಳು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಸಮೂಹ ಪಾಲುದಾರ ಬ್ಯಾಂಕುಗಳ ಯೋಜನೆಯಡಿ ಯೋಜನಾ ವೆಚ್ಚದ ಅವಧಿ ಸಾಲ ಹಾಗೂ ದುಡಿಯುವ ಬಂಡವಾಳ ಸಾಲವೆಂದು ₹1692.68 ಕೋಟಿಗಳ ಸಾಲ ನೀಡಲಾಗಿದೆ ಎಂದ ಅಧ್ಯಕ್ಷ ಸರನಾಯಕ, ₹270.16 ಕೋಟಿಗಳಷ್ಟು ವ್ಯಕ್ತಿಗತ ಕೃಷಿಯೇತರ ಸಾಲ ಒದಗಿಸಿದೆ. ನೇಕಾರಿಕೆ ಉದ್ಯೋಗಕ್ಕೆ ಮಾಧ್ಯಮಿಕ ಹಾಗೂ ದುಡಿ0ುುವ ಬಂಡವಾಳ ಸಾಲವಾಗಿ ₹4.78 ಕೋಟಿ ರೂ. ನೀಡಲಾಗಿದೆ ಎಂದು ಹೇಳಿದರು.1008 ಅರ್ಹ ಸಾಲಗಾರರಿಗೆ ₹20.89 ಕೋಟಿ ಗಳ ಸಾಲ:

ಬ್ಯಾಂಕಿನ ಸದಸ್ಯತ್ವ ಹೊಂದಿ ವ್ಯವಹಾರ ನಿರ್ವಹಿಸುವ ಸದಸ್ಯ ಸಹಕಾರ ಸಂಘಗಳಿಗೆ ಸ್ವಂತ ಗೋಡಾವನ್ ಹಾಗೂ ಕಚೇರಿ ಕಟ್ಟಡ ನಿರ್ಮಿಸಿಕೊಳ್ಳಲು ₹4 ಲಕ್ಷಗಳ ಸಹಾಯಧನ ನೀಡಲಾಗುತ್ತಿದೆ. ಕಳೆದ ಮಾರ್ಚ್‌ವರೆಗೆ ವಿವಿಧ ಕ್ಷೇತ್ರದ 219 ಸಹಕಾರ ಸಂಘಗಳಿಗೆ ₹4.59 ಕೋಟಿಗಳ ಸಹಾಯಧನ ನೀಡಲಾಗಿದೆ. ವ್ಯಕ್ತಿಗತ ಕೃಷಿಯೇತರ ಸಾಲವನ್ನು ಉತ್ತೇಜಿಸಲು ವಿಶೇಷ ಯೋಜನೆಯಡಿ ನಿರ್ದಿಷ್ಟ ಅವಧಿಗೆ ಸೀಮಿತಗೊಳಿಸಿ ಶೇ.9.25ರ ಬಡ್ಡಿದರದಲ್ಲಿ ವಾಹನ ಸಾಲ ಮೇಳ ಯೋಜನೆಯಡಿ 1008 ಅರ್ಹ ಸಾಲಗಾರರಿಗೆ ₹20.89 ಕೋಟಿ ಗಳ ಸಾಲ ನೀಡಲಾಗಿದ್ದು, ವಸೂಲಾತಿಯೂ ತೃಪ್ತಿದಾಯಕವಾಗಿದೆ ಎಂದು ಹೇಳಿದರು.

ಈ ವೇಳೆ ಉಪಾಧ್ಯಕ್ಷ ಮುರಗೇಶ ಕಡ್ಲಿಮಟ್ಟಿ, ನಿರ್ದೇಶಕ ಪ್ರಕಾಶ ತಪಶೆಟ್ಟಿ, ಅಗಸಿಮುಂದಿನ ಇದ್ದರು.

---

ಸದ್ಯದಲ್ಲೇ ಬ್ಯಾಂಕಿಂಗ್‌ ಸೌಲಭ್ಯ

ಜಿಲ್ಲೆಯ 458 ಸ್ವಸಹಾಯ ಸಂಘಗಳಿಗೆ ಶೂನ್ಯ ಬಡ್ಡಿ ದರದಲ್ಲಿ ₹10.87 ಕೋಟಿಸಾಲ ನೀಡಿದ್ದು, ಮುಂಬರುವ ಆರ್ಥಿಕ ವರ್ಷದಲ್ಲಿ 1327 ಸ್ವಸಹಾಯ ಸಂಘಗಳಿಗೆ ₹15.10 ಕೋಟಿ ಸಾಲ ವಿತರಣೆಯ ಗುರಿ ಹೊಂದಲಾಗಿದೆ. 40 ಎಟಿಎಂ ಅಳವಡಿಸಲಾಗಿದೆ. 150 ಪಿಎಸಿಎಸ್ ಗಳಿಗೆ ಮೈಕ್ರೋ ಎಟಿಎಮ್ ನೀಡಲಾಗಿದೆ. ಮೊಬೈಲ್ ಬ್ಯಾಂಕಿಂಗ್ ವ್ಯವಹಾರ ಪ್ರಾರಂಭಿಸಲು ಅನುಮತಿ ಕೋರಿದ್ದು, ಸದ್ಯದಲ್ಲೇ ಅನುಮತಿ ದೊರೆಯುವ ಸಾಧ್ಯತೆಯಿದೆ ಎಂದು ಬ್ಯಾಂಕಿನ ಅಧ್ಯಕ್ಷ, ಮಾಜಿ ಸಚಿವ ಅಜಯಕುಮಾರ ಸರನಾಯಕ ತಿಳಿಸಿದರು.