ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಶಿವಶರಣೆ ಅಕ್ಕನಾಗಲಾಂಬಿಕೆ ತನ್ನ ವಚನ ಸಾಹಿತ್ಯದ ಮೂಲಕ ಮಹಿಳಾ ಲೋಕ ಹೆಮ್ಮೆಪಡುವಂತಹ ಮಹತ್ತರ ಕಾಣಿಕೆಯನ್ನು ಈ ಸಮಾಜಕ್ಕೆ ನೀಡಿದ್ದಾರೆ ಎಂದು ನೆಲಮಂಗಲ ತಾಲೂಕು ವನಕಲ್ ಮಠದ ಡಾ.ಬಸವ ರಮಾನಂದ ಸ್ವಾಮೀಜಿ ತಿಳಿಸಿದರು.ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಶ್ರಾವಣ ಮಾಸದ ಪ್ರಯುಕ್ತ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿಗಳ ಲೀಲಾ ವಿಶ್ರಾಂತಿ ಸನ್ನಿಧಾನದಲ್ಲಿ ನಡೆಯುತ್ತಿರುವ ವಚನಾಭಿಷೇಕ, ಮುರುಘಾ ಗುರುಪರಂಪರೆಯ ಸ್ವಾಮೀಜಿಗಳ ಜೀವನದರ್ಶನ ಕಾರ್ಯಕ್ರಮದಲ್ಲಿ ಅಕ್ಕನಾಗಲಾಂಬಿಕೆ ಜಯಂತಿ ಕಾರ್ಯಕ್ರಮದ ಸಮ್ಮುಖ ವಹಿಸಿ ಆಶೀರ್ವಚನ ನೀಡಿದರು.
ಶ್ರೇಣೀಕೃತ ವ್ಯವಸ್ಥೆಯ ಕುತಂತ್ರಕ್ಕೆ ಬಸವಣ್ಣ ಮನೆ ಬಿಡುವ ಪ್ರಸಂಗ ಬಂದಾಗ ಬಸವಣ್ಣ ಒಬ್ಬ ಪರಿಪೂರ್ಣ ಹಾಗೂ ಜಗತ್ತಿಗೆ ಒಂದು ಹೊಸ ತತ್ವ ಸಿದ್ಧಾಂತವನ್ನು ನೀಡುವಷ್ಟರ ಮಟ್ಟಿಗೆ ಬೆಳೆಸಿದವಳು ಅಕ್ಕನಾಗಲಾಂಬಿಕೆ ಎನ್ನುವುದನ್ನು ಯಾರೂ ಮರೆಯುವಂತಿಲ್ಲ ಎಂದರು.ಅಕ್ಕ ನಾಗಲಾಂಬಿಕೆ ಅಸಮಾನತೆ ಹೋಗಲಾಡಿಸಲು ತನ್ನದೇ ಆದ ರೀತಿಯಲ್ಲಿ ಸಮಾಜಕ್ಕೆ ಬೆಳಕಾಗಬಲ್ಲ ವಚನಗಳನ್ನು ರಚಿಸಿದ್ದಾರೆ. ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಧೈರ್ಯವಾಗಿ ಹೋರಾಡುತ್ತ ವಚನ ಸಂರಕ್ಷಣೆಯ ಭಾರವನ್ನು ತೆಗೆದುಕೊಂಡು ಒಂದು ತಂಡದೊಂದಿಗೆ ಉಳವಿಯ ಕಡೆಗೆ ಹೋಗಿದ್ದು, ಚರಿತ್ರಾರ್ಹ ಘಟನೆಯೇ ಸರಿ. ಇಂತಹ ಅನೇಕ ಅನರ್ಘ್ಯ ರತ್ನಗಳು ಕಲ್ಯಾಣದಲ್ಲಿದ್ದು, ವಿಶೇಷವೇ ಸರಿ ಎಂದು ನುಡಿದರು.
ಸಮ್ಮುಖ ವಹಿಸಿದ್ದ ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ ಮಾತನಾಡಿ, ಅಕ್ಕನಾಗಮ್ಮನವರು ತನ್ನ ತಮ್ಮನಾದ ಬಸವಣ್ಣನನ್ನು ಬಾಲ್ಯದಿಂದ ಕಡೆಯ ಕಲ್ಯಾಣ ಕ್ರಾಂತಿಯವರೆಗೂ ಕೈಹಿಡಿದು ಮುನ್ನಡೆಸಿದರು. ಕಲ್ಯಾಣ ಕ್ರಾಂತಿಯಾಗಿದ್ದು, ಅಕ್ಕನಾಗಮ್ಮನವರ ಪ್ರೇರಣೆಯಿಂದ ಇದರಿಂದಾಗಿ ಬಸವಣ್ಣ ಅನುಭವ ಮಂಟಪದಲ್ಲಿ ಮಹಿಳೆಗೆ ಮುಕ್ತ ಅವಕಾಶ ನೀಡಲು ಸಾಧ್ಯವಾಯಿತು. ಅಕ್ಕನಾಗಮ್ಮ ಕಿತ್ತೂರು ಚೆನ್ನಮ್ಮನ ರೀತಿ ಕ್ರಾಂತಿಕಾರಿ ವ್ಯಕ್ತಿತ್ವದ ದಿಟ್ಟ ಮಹಿಳೆ ಎಂದು ಬಣ್ಣಿಸಿದರು.ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಎಸ್ಜೆಎಂ ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ, ಅಕ್ಕನಾಗಮ್ಮ ಮಹಿಳಾ ಕುಲಕ್ಕೆ ಮಾದರಿ, ಬಣ್ಣನೆಗೆ ನಿಲುಕದ ವ್ಯಕ್ತಿತ್ವ ಆದರ್ಶದ ಧೀರಮಹಿಳೆ. ಕೆಲವೇ ವಚನಗಳನ್ನು ರಚಿಸಿದ್ದರೂ ಅವೆಲ್ಲವೂ ನೆನಪಿನಲ್ಲಿ ಉಳಿಯುಂತಹವುಗಳೇ ಆಗಿವೆ ಅಂತಹ ವಚನಗಳನ್ನು ನೀವು ಓದಿ ಅನುಸರಿಸಬೇಕು ಎಂದರು.
ಈ ವೇಳೆ ಅರಳೂರು ವಿರಕ್ತಮಠದ ಚನ್ನಬಸವ ಸ್ವಾಮೀಜಿ, ಶ್ರೀಮಠದ ಬಸವ ಮುರುಘೇಂದ್ರ ಶ್ರೀಗಳು, ಕಲ್ಕೆರೆಯ ಪೂರ್ಣಾನಂದರು, ಬಸವೇಶ್ವರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ರಾಜೇಶ್, ಉಪಾಧೀಕ್ಷಕ ಡಾ.ನಾಗೇಂದ್ರಗೌಡ, ವ್ಯವಸ್ಥಾಪಕ ಸತ್ಯನಾರಾಯಣ ಸೇರಿದಂತೆ ಇತರೆ ಸಿಬ್ಬಂದಿ, ಬಸವರಾಜ ಕಟ್ಟಿ, ಸಿವಿಲ್ ಎಂಜಿನಿಯರ್ ಬಸವಕುಮಾರ್, ಶುಶ್ರೂಷಕರ ಅಧೀಕ್ಷಕ ಕೆ.ಎಂ.ಜಿ. ಹಾಲಸ್ವಾಮಿ, ಲೆಕ್ಕ ವಿಭಾಗದ ಅಧೀಕ್ಷಕ ಆನಂದ ಪಾಟೀಲ್, ಸ್ಟೋರ್ ಇನ್ಚಾರ್ಜ್ ಪ್ರಶಾಂತ್ಸ್ವಾಮಿ, ವಿಜಯಪುರದ ಭಕ್ತರು ಸೇರಿದಂತೆ ಶ್ರೀಮಠದ ಅಭಿಮಾನಿಗಳು, ಭಕ್ತರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.