ಸಾರಾಂಶ
ಕವಿತಾಳ : ಸಮೀಪದ ಮಲ್ಲದಗುಡ್ಡ ಕ್ಯಾಂಪ್ ನಲ್ಲಿ ಕಲಬೆರಕೆ ರಸಗೊಬ್ಬರ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸುತ್ತಿರುವ ರೈತರು ನಕಲಿ ಗೊಬ್ಬರ ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ಸಂಶಯ ವ್ಯಕ್ತಪಡಿಸುತ್ತಿದ್ದಾರೆ.ಮಲ್ಲದಗುಡ್ಡ ಕ್ಯಾಂಪ್ ನಲ್ಲಿ ಡಿಎಪಿ ರಸಗೊಬ್ಬರ ನಕಲಿ ಎಂದು ರೈತರು ಆರೋಪಿಸಿದ ಹಿನ್ನೆಲೆಯಲ್ಲಿ ಕೃಷಿ ಸಹಾಯಕ ನಿರ್ದೇಶಕ ಗುರುನಾಥ ನೇತೃತ್ವದಲ್ಲಿ ಅಧಿಕಾರಿಗಳು ಈಚೆಗೆ ದಾಳಿ ನಡೆಸಿದ್ದರು. ಪಟ್ಟಣದ ರೈತ ಸಂಪರ್ಕ ಕೇಂದ್ರಕ್ಕೆ ರಸಗೊಬ್ಬರ ಚೀಲದೊಂದಿಗೆ ಆಗಮಿಸಿದ ರೈತರು ಗುಣಮಟ್ಟ ಪರೀಕ್ಷೆಗೆ ತಾವೇ ಪ್ರಯೋಗಾಯಕ್ಕೆ ತೆಗೆದುಕೊಂಡು ಹೋಗುವುದಾಗಿ ಸ್ಯಾಂಪಲ್ ತೆಗೆದು ಕೊಡುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು.ದಾಳಿ ನಡೆದ ಸಂದರ್ಭದಲ್ಲಿ ಸ್ಯಾಂಪಲ್ ಪಡೆದು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ, ಅದೇ ಅಂಗಡಿಯಲ್ಲಿ ಖರೀದಿಸಿದ ಅದೇ ಬ್ಯಾಚ್ ನ ರಸಗೊಬ್ಬರವನ್ನು ಮತ್ತೊಮ್ಮೆ ಗುಣಮಟ್ಟ ಪರೀಕ್ಷೆಗೆ ಕಳುಹಿಸಲು ಸಾಧ್ಯವಿಲ್ಲ ಹೀಗಾಗಿ ವರದಿ ಬರುವವರೆಗೆ ಕಾಯ್ದು ನೋಡುವಂತೆ ಸಹಾಯಕ ಕೃಷಿ ಅಧಿಕಾರಿ ಮಾರುತಿ ಹೇಳಿದರು.ಮೂರು ಜಿಲ್ಲೆಗಳಿಂದ ವಿವಿಧ ರಸಗೊಬ್ಬರ ಮಾದರಿಗಳನ್ನು ವಡ್ಡರಹಟ್ಟಿ ಪ್ರಯೋಗಾಲಯಕ್ಕೆ ಗುಣಮಟ್ಟ ಪರೀಕ್ಷೆಗಾಗಿ ಕಳುಹಿಸಲಾಗುತ್ತದೆ ಪ್ರಯೋಗಾಲಯದ ವರದಿ ಬರಲು ಒಂದು ತಿಂಗಳು ಸಮಯ ಬೇಕಾಗುತ್ತಿದೆ, ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.ಡಿಎಪಿ ರಸಗೊಬ್ಬರ ಪೂರೈಕೆಯಾಗುತ್ತಿಲ್ಲ ಎಂದು ಕೆಲವು ಅಂಗಡಿ ಮಾಲೀಕರು ಹೇಳುತ್ತಿದ್ದಾರೆ ಆದರೆ ಈ ಅಂಗಡಿಯಲ್ಲಿ ನಕಲಿ ಗೊಬ್ಬರ ಮಾರಾಟ ನಡೆಯುತ್ತಿದೆ ಈ ಗೊಬ್ಬರ ಹಾಕಿದ ಪರಿಣಾಮ ಬೆಳೆ ಒಣಗಿದೆ ಎಂದು ರೈತರಾದ ಬಸವರಾಜ ಮರಕಂದಿನ್ನಿ ಮತ್ತು ಸುರೇಶ ಮಲ್ಲದಗುಡ್ಡ ಕ್ಯಾಂಪ್ ಆರೋಪಿಸಿದರು.---------------17ಕೆಪಿಕೆವಿಟಿ03: ಕವಿತಾಳ ಸಂಪರ್ಕ ಕೇಂದ್ರಕ್ಕೆ ಕಲಬೆರಿಕೆ ರಸಗೊಬ್ಬರದೊಂದಿಗೆ ಬಂದ ರೈತರು