ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ನಮ್ಮ ಮೂಡುಬಿದಿರೆ, ನೇತಾಜಿ ಬ್ರಿಗೇಡ್, ಜೆಸಿಐ ಮೂಡುಬಿದಿರೆ ಮತ್ತು ಮೂಡುಬಿದಿರೆ ಬಂಟರ ಮಹಿಳಾ ಸಂಘದ ಸಹಯೋಗದಲ್ಲಿ ಭಾನುವಾರ ವಿದ್ಯಾಗಿರಿ-ಹಂಡೇಲು ಹಾಗೂ ವಿದ್ಯಾಗಿರಿ-ಪುತ್ತಿಗೆ ಪರಿಸರದ ಸುಮಾರು 5.5 ಕಿಲೋಮೀಟರ್ ವ್ಯಾಪ್ತಿಯಲ್ಲಿ ‘ಸ್ವಚ್ಛ ಸಂಕಲ್ಪ’ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಯಿತು.

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ನಮ್ಮ ಮೂಡುಬಿದಿರೆ, ನೇತಾಜಿ ಬ್ರಿಗೇಡ್, ಜೆಸಿಐ ಮೂಡುಬಿದಿರೆ ಮತ್ತು ಮೂಡುಬಿದಿರೆ ಬಂಟರ ಮಹಿಳಾ ಸಂಘದ ಸಹಯೋಗದಲ್ಲಿ ಭಾನುವಾರ ವಿದ್ಯಾಗಿರಿ-ಹಂಡೇಲು ಹಾಗೂ ವಿದ್ಯಾಗಿರಿ-ಪುತ್ತಿಗೆ ಪರಿಸರದ ಸುಮಾರು 5.5 ಕಿಲೋಮೀಟರ್ ವ್ಯಾಪ್ತಿಯಲ್ಲಿ ‘ಸ್ವಚ್ಛ ಸಂಕಲ್ಪ’ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಯಿತು.ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಅಶೋಕ್ ಅಡ್ಯಂತಾಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸ್ವಚ್ಛತೆ ಆರೋಗ್ಯಕರ ಸಮಾಜದ ಅಡಿಪಾಯ. ಪರಿಸರವನ್ನು ಸ್ವಚ್ಛವಾಗಿಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಎಂದರು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಕಳೆದ 12 ವರ್ಷಗಳಿಂದ ಆಳ್ವಾಸ್ ವತಿಯಿಂದ ಈ ಭಾಗದಲ್ಲಿ ನಿರಂತರವಾಗಿ ಸ್ವಚ್ಛತಾ ಅಭಿಯಾನ ನಡೆಸಲಾಗುತ್ತಿದೆ. ನಂದಿನಿ ಮತ್ತು ಫಲ್ಗುಣಿ ನದಿಗಳು ಈ ಪ್ರದೇಶದಲ್ಲಿ ಹರಿಯುತ್ತವೆ. ಚರಂಡಿಗಳ ಮೂಲಕ ತ್ಯಾಜ್ಯ ನದಿಗೆ ಸೇರುವ ಅಪಾಯವಿದೆ. ಮಳೆಗಾಲ ಆರಂಭವಾಗುತ್ತಿರುವುದರಿಂದ ರಸ್ತೆ ಬದಿ ಮತ್ತು ಚರಂಡಿಗಳಲ್ಲಿರುವ ಪ್ಲಾಸ್ಟಿಕ್ ಹಾಗೂ ಇತರ ಕಸ ಸುಲಭವಾಗಿ ಸಮುದ್ರ ಸೇರಬಹುದು. ಪಶ್ಚಿಮ ಘಟ್ಟ ಮತ್ತು ಕರಾವಳಿಯ ನಡುವೆ ಇರುವ ನಮ್ಮ ಈ ಪ್ರದೇಶ ಅತಿ ಸೂಕ್ಷ್ಮ ಪರಿಸರ ವಲಯ. ‘ನಮ್ಮ ಊರು-ನಮ್ಮ ಜವಾಬ್ದಾರಿ’ ಎಂಬ ಮನೋಭಾವದಿಂದ ಎಲ್ಲರೂ ಕೈಜೋಡಿಸಿದರೆ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯ ಎಂದು ಹೇಳಿದರು.ಅಭಿಯಾನದಲ್ಲಿ ಆಳ್ವಾಸ್‌ನ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು, ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಸುಮಾರು 700ಕ್ಕೂ ಅಧಿಕ ಚೀಲಗಳಷ್ಟು ಕಸವನ್ನು ಸಂಗ್ರಹಿಸಿ ವಿಲೇವಾರಿ ಮಾಡಲಾಯಿತು.

ರಾಮಕೃಷ್ಣ ಮಿಷನ್‌ನ ರಂಜನ್ ಬೆಳ್ಳರ್ಪಾಡಿ, ನಮ್ಮ ಮೂಡುಬಿದಿರೆಯ ಅಕ್ಷಯ್ ಜೈನ್, ನೇತಾಜಿ ಬ್ರಿಗೇಡ್‌ನ ರಾಹುಲ್, ಬಂಟರ ಮಹಿಳಾ ಘಟಕದ ಶೋಭಾ ಹೆಗ್ಡೆ, ಪರಿಸರ ಗತಿವಿಧಿಯ ವೆಂಕಟೇಶ್, ಕೇಶವ, ಚಂದ್ರಹಾಸ, ಮಂಜುನಾಥ ಶೆಟ್ಟಿ ಹಾಗೂ ಪ್ರಮುಖರಾದ ಯಾಸಿರ್, ಸಂಪತ್ ಇದ್ದರು.