ಜಿಲ್ಲೆಯ ಘಟ್ಟದ ಕೆಳಗಿನ ತಾಲೂಕಿನ ಜನರ ಅಪಾರ ಬೇಡಿಕೆಯಂತೆ ಕಳೆದ ವರ್ಷವಷ್ಟೇ ಆರಂಭಗೊಂಡಿದ್ದ ಹಳಿಯಾಳ-ಭಟ್ಕಳ-ಹಳಿಯಾಳ ಬಸ್ ಕಳೆದೆರೆಡು ತಿಂಗಳಿಂದ ನಿಯಮಿತವಾಗಿ ಬಿಡದಿರುವುದರಿಂದ ಬಸ್ ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ.
ಕನ್ನಡಪ್ರಭ ವಾರ್ತೆ ಹಳಿಯಾಳ
ಜಿಲ್ಲೆಯ ಘಟ್ಟದ ಕೆಳಗಿನ ತಾಲೂಕಿನ ಜನರ ಅಪಾರ ಬೇಡಿಕೆಯಂತೆ ಕಳೆದ ವರ್ಷವಷ್ಟೇ ಆರಂಭಗೊಂಡಿದ್ದ ಹಳಿಯಾಳ-ಭಟ್ಕಳ-ಹಳಿಯಾಳ ಬಸ್ ಕಳೆದೆರೆಡು ತಿಂಗಳಿಂದ ನಿಯಮಿತವಾಗಿ ಬಿಡದಿರುವುದರಿಂದ ಬಸ್ ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ.ಇತ್ತೀಚಿನ ಕೆಲವು ದಿನಗಳಿಂದ ಈ ಬಸ್ ಭಾನುವಾರ ಸಂಚರಿಸುತ್ತಿಲ್ಲ. ಈ ಕುರಿತು ಸಾರಿಗೆ ಘಟಕದ ನಿರ್ವಾಹಕರಿಗೆ ವಿಚಾರಿಸಿದರೇ ಭಾನುವಾರ ರಜೆ ದಿನವಾಗಿ ಮಾರ್ಪಡಿಸಿದ್ದರಿಂದ ಹಳಿಯಾಳ-ಭಟ್ಕಳ್ಳ-ಹಳಿಯಾಳ ಸಂಚರಿಸುವುದಿಲ್ಲವೆಂದು ಹೇಳುತ್ತಾರೆ. ಒಮ್ಮೊಮ್ಮೆ ಬಸ್ ದುರಸ್ತಿ ಇದೇ, ಸಿಬ್ಬಂದಿ ಕೊರತೆ ಎಂದು ಅಸಂಬದ್ಧ ಸಬೂಬು ಹೇಳಿ ನುಣುಚಿಕೊಳ್ಳುತ್ತಾರೆಂಬುದು ಪ್ರಯಾಣಿಕರು ಆರೋಪವಾಗಿದೆ.
ಬಸ್ ವೇಳಾಪಟ್ಟಿ:ಬೆಳಗ್ಗೆ 8 ಗಂಟೆಗೆ ಹಳಿಯಾಳದಿಂದ ಹೊರಡುವ ಈ ಬಸ್ ಯಲ್ಲಾಪುರ, ಅಂಕೋಲಾ, ಕುಮಟಾ, ಹೊನ್ನಾವರ ಮಾರ್ಗವಾಗಿ ಭಟ್ಕಳಕ್ಕೆ ಮಧ್ಯಾಹ್ನ 1.30ಕ್ಕೆ ತಲುಪುತ್ತದೆ. ಮಧ್ಯಾಹ್ನ 2.30ಕ್ಕೆ ಭಟ್ಕಳದಿಂದ ಹೊರಡುವ ಬಸ್ ರಾತ್ರಿ 8ಗಂಟೆಗೆ ಹಳಿಯಾಳಕ್ಕೆ ತಲಪುತ್ತದೆ.
ವಾರಾಂತ್ಯದ ದಿನ ಘಟ್ಟದ ಕೆಳಗಿನ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಸಿಬ್ಬಂದಿ, ಇಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು ಊರಿಗೆ ಹೋದರೇ ಸೋಮವಾರ ಹಿಂದಿರುಗಿ ಬರಲು ತಡವಾಗುತ್ತದೆ ಎಂಬ ಕಾರಣಕ್ಕೆ ಭಾಬಯವಾರ ಸಂಜೆಯೇ ಈ ಬಸ್ ಮೂಲಕ ಹಳಿಯಾಳಕ್ಕೆ ಬರುತ್ತಿದ್ದರು,ಈ ಬಸ್ ಆರಂಭಗೊಂಡ ನಂತರ ಜಿಲ್ಲಾ ಕೇಂದ್ರ ಕಾರವಾರವಾಗಲಿ ಅಥವಾ ಶಿರಸಿ ಶೈಕ್ಷಣಿಕ ಜಿಲ್ಲೆಗೆ ಭೇಟಿ ನೀಡಿ ಬರುವ ಪ್ರಯಾಣಿಕರಿಗೆ ಹಳಿಯಾಳಕ್ಕೆ ಮರಳಲು ಈ ಬಸ್ ಅನುಕೂಲಕರವಾಗಿತ್ತು. ಅದಲ್ಲದೇ ಯಲ್ಲಾಪುರದಿಂದ ಹಳಿಯಾಳಕ್ಕೆ ಬರಲು ಸಂಜೆ ಸಮಯದಲ್ಲಿ ಕೊನೆಯ ಬಸ್ ಇದಾಗಿರುವುದರಿಂದ ಸರ್ವರಿಗೂ ಈ ಬಸ್ ಬಾರಿ ಅನುಕೂಲಕರವಾಗಿತ್ತು.
ಕೆಲವು ಆಡಳಿತಾತ್ಮಕ ಕಾರಣಗಳಿಂದ ಭಾನುವಾರ ಬಸ್ ಸಂಚಾರ ಬಂದ್ ಮಾಡಲಾಗಿತ್ತು. ಇದರಿಂದಾಗಿ ಈ ರೂಟಿನ ಸಂಚರಿಸುವರಿಗೆ ತೊಂದರೆಯಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ವಾರದಿಂದ ವಾರದ ಏಳು ದಿನವೂ ಬಸ್ ಸಂಚಾರ ಎಂದಿನಂತೆಯೇ ಆರಂಭಿಸಲಿದ್ದೇವೆ ಎಂದು ಹಳಿಯಾಳ ಸಾರಿಗೆ ಘಟಕ ವ್ಯವಸ್ಥಾಪಕರು ತಿಳಿಸಿದ್ದಾರೆ.