ಕನ್ನಡಪ್ರಭ ವಾರ್ತೆ ಮುಳಬಾಗಿಲುಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನ್ ರಾಮ್ ಭಾರತ ದೇಶಕ್ಕೆ ಎರಡು ಕಣ್ಣುಗಳಿದ್ದಂತೆ ಎಂದು ಶಾಸಕ ಸಮೃದ್ಧಿ ಮಂಜುನಾಥ್ ಅಭಿಪ್ರಾಯಪಟ್ಟರು.ನಗರದ ತಾಪಂ ಸಭಾಂಗಣದಲ್ಲಿ ಡಾ.ಬಾಬು ಜಗಜೀವನ ರಾಮ್‌ರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಇಬ್ಬರು ಮಹನೀಯರು ಕೇವಲ ದಲಿತ ಸಮುದಾಯಕ್ಕೆ ಸೀಮಿತವಲ್ಲ, ಇಡೀ ಭಾರತ ದೇಶದ ಎಲ್ಲಾ ಸಮುದಾಯಗಳಿಗೆ ಸೇರಿದ ಮಹಾನ್ ನಾಯಕರು ಎಂದು ಬಣ್ಣಿಸಿದರು.ಬಾಬು ಜಗಜೀವನ್ ರಾಮ್ ೮ ಬಾರಿ ಸಂಸದರಾಗಿ ಕೇಂದ್ರ ಸಚಿವರಾಗಿ ದೇಶ ಸೇವೆ ಮಾಡಿದ್ದಾರೆ, ಆದರೆ ಕಾಂಗ್ರೆಸ್ ಪಕ್ಷ ಇವರಿಗೆ ಹೆಚ್ಚು ಒತ್ತು ನೀಡುತ್ತಿತ್ತು, ಅಂಬೇಡ್ಕರ್‌ರಿಗೆ ಕಾಂಗ್ರೆಸ್ ಹೆಚ್ಚಿನ ಒತ್ತು ನೀಡುತ್ತಿರಲಿಲ್ಲ ಎಂಬುದನ್ನು ನಾನು ಪುಸ್ತಕಗಳಲ್ಲಿ ಓದಿ ತಿಳಿದುಕೊಂಡಿದ್ದೇನೆ. ಸಂಸದರು ಮತ್ತು ಕೇಂದ್ರ ಸಚಿವರಾಗಿದ್ದರು ಪಾರ್ಲಿಮೆಂಟ್ ನಲ್ಲಿ ಬಾಬು ಜಗಜೀವನ್ ರಾಮ್‌ರಿಗೆ ಕುಡಿಯುವ ನೀರನ್ನು ಪ್ರತ್ಯೇಕ ಮಡಿಕೆಯಲ್ಲಿ ಇಡುವ ಮೂಲಕ ಅಸ್ಪೃಶ್ಯತೆ ಇವರನ್ನು ಬಿಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ದಕ್ಷಿಣ ಭಾರತದ ಪಿ.ವಿ.ನರಸಿಂಹರಾವ್ ೫ ವರ್ಷ ಎಚ್.ಡಿ.ದೇವೇಗೌಡರು ಒಂದು ವರ್ಷ ಸೇರಿ ಒಟ್ಟು ಆರು ವರ್ಷಗಳ ಕಾಲ ಮಾತ್ರ ಈ ದೇಶದ ಪ್ರಧಾನ ಮಂತ್ರಿಗಳಾಗಿ ಸೇವೆ ಸಲ್ಲಿಸಲು ರಾಜಕೀಯ ವ್ಯವಸ್ಥೆ ಅವಕಾಶ ಕೊಟ್ಟಿದೆ, ಆದರೆ ಉತ್ತರ ಭಾರತದವರೇ ಅತಿ ಹೆಚ್ಚು ಅವರಿಗೆ ಪ್ರಧಾನಮಂತ್ರಿಗಳಾಗುತ್ತಿದ್ದಾರೆ ಅದನ್ನೇ ಮುಂದುವರಿಸಲು ಈಗ ದಕ್ಷಿಣ ಭಾರತದ ಲೋಕಸಭಾ ಕ್ಷೇತ್ರಗಳ ವಿಂಗಡನೆ ಕಾರ್ಯದಲ್ಲಿ ಸಂಖೆಯನ್ನು ಕಡಿಮೆ ಮಾಡಿ ಉತ್ತರ ಭಾರತದ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಗೆ ಮಾಡಲು ಮುಂದಾಗಿದ್ದಾರೆಂದು ಕಿಡಿ ಕಾರಿದರಲ್ಲದೆ ದಕ್ಷಿಣ ಭಾರತದ ರಾಜಕಾರಣಿಗಳು ಎಚ್ಚೆತ್ತುಕೊಳ್ಳಬೇಕೆಂದು ಕಿವಿಮಾತು ಹೇಳಿದರು.ರಾಜಕೀಯ ತೆವಳು ಈಡೇರಿಸಿಕೊಳ್ಳಲು ಎಸ್ ಸಿ ಸಮುದಾಯದ ಎಡಗೈ ಬಲಗೈ ಜನಾಂಗದವರನ್ನು ಬೇರೆ ಬೇರೆ ಮಾಡುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಮಾತ್ರ ಎಡಗೈ ಬಲಗೈ ಎರಡು ಸಮುದಾಯದವರನ್ನು ನಾನು ಒಗ್ಗಟ್ಟು ಮಾಡುತ್ತೇನೆ. ಯಾವುದೇ ಕಾರಣಕ್ಕೂ ಬೇರೆ ಬೇರೆ ಆಗಲು ನಾನು ಬಿಡುವುದಿಲ್ಲ. ನನಗೆ ಎಡ ಬಲ ಇಬ್ರು ಒಂದೇ. ಎರಡು ಸಮುದಾಯಗಳು ಒಗ್ಗಟ್ಟಾಗಿರಬೇಕೆಂದು ಕಿವಿಮಾತು ಹೇಳಿದರು.ತಹಸೀಲ್ದಾರ್ ವಿ.ಗೀತಾ ಮಾತನಾಡಿ, ಬಾಬು ಜಗಜೀವನ್ ರಾಮ್ ಕೇಂದ್ರ ಸಚಿವರಾಗಿ ಸಚಿವರಾಗಿ ಹಸಿರು ಕ್ರಾಂತಿಯನ್ನೇ ಮಾಡಿದ್ದಾರೆ. ಜೊತೆಗೆ ಕಾರ್ಮಿಕರ ಪರವಾಗಿ ಕಾನೂನನ್ನು ರಚಿಸಿದ್ದಾರೆ ಇದರಿಂದ ಕಾರ್ಮಿಕರಿಗೆ ಹೆಚ್ಚಿನ ಅನುಕೂಲಗಳು ಸಿಗುತ್ತಿವೆ ಎಂದರು.

ತಾಪಂ ಇಒ ಬಾಬು ವಿಎಂ, ತಾ.ಪಂ ಮಾಜಿ ಅಧ್ಯಕ್ಷ ಎಂ.ವೆಂಕಟರಮಣ, ಸರ್ಕಲ್ ಇನ್ಸ್ಪೆಕ್ಟರ್ ಅಣ್ಣಯ್ಯ, ಪೌರಾಯುಕ್ತ ಆಂಜನೇಯಲು, ಸಮಾಜ ಕಲ್ಯಾಣ ಅಧಿಕಾರಿ ಹರೀಶ್ ಕುಮಾರ್, ಕೋಲಾರ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಬಂಡಹಳ್ಳಿ ಲಕ್ಷ್ಮೀನಾರಾಯಣ್, ಗೊಲ್ಲಹಳ್ಳಿ ಜಗದೀಶ್, ನಗವಾರ ಸತ್ಯಣ್ಣ, ಮುಖಂಡರಾದ ಕಗ್ಗಿನ ಹಳ್ಳಿ ಶ್ರೀನಿವಾಸ್, ಎಲ್.ನಟರಾಜ್, ಎಂ.ಎಸ್.ಕೃಷ್ಣಮೂರ್ತಿ, ಸಿಆರ್‌ಪಿ ವೆಂಕಟೇಶ್, ಮೋತಕಪಲ್ಲಿ ಸತೀಶ್, ಮುನಿ ಗಂಗಯ್ಯ, ಆರ್.ನಾಗರಾಜ್, ವಿ.ಜಯಪ್ಪ, ಸಂಗಸಂದ್ರ ವಿಜಯ್ ಕುಮಾರ್ ಇದ್ದರು.