ಅಂಬೇಡ್ಕರ್‌ ದಲಿತರ ಪಾಲಿಗೆ ಆರಾಧ್ಯ ದೈವ: ಶಾಸಕ

| Published : Dec 21 2024, 01:17 AM IST

ಸಾರಾಂಶ

ಶಾಸಕರಿಗೆ ನೀಡುವ ಅನುದಾನದಲ್ಲಿ ತಮಗೆ 25 ಕೋಟಿ ಅನುದಾನ ನೀಡಿದ್ದು, ಅದನ್ನು ಕ್ಷೇತ್ರದಲ್ಲಿ ಅಭಿವೃದ್ದಿಗೆ ಬಳಕೆ ಮಾಡಿದ್ದೇನೆ. ರಸ್ತೆಗಳ ಅಭಿವೃದ್ದಿಗೆ ಮುಖ್ಯ ಮಂತ್ರಿ ಮತ್ತು ಉಪ ಮುಖ್ಯಮಂತ್ರಿಯವರನ್ನು ಅನುದಾನ ಕೇಳಿದ್ದೇನೆ. ಅದೇ ರೀತಿ ಅಲ್ಪಸಂಖ್ಯಾತರ ನಿಧಿಯಿಂದ ಸಚಿವ ಜಮೀರ್ ಅಹ್ಮದ್ ರವರು ಐದು ಕೋಟಿ ಅನುದಾನ ನೀಡಿದ್ದು,

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕೇಂದ್ರ ಗೃಹ ಸಚಿವ ಅಮಿತ್ ಶಾರವರು ಸಂಸತ್ ನಲ್ಲಿ ಅಂಬೇಡ್ಕರ್ ರವರ ಬಗ್ಗೆ ಬಹಳ ಕೆಟ್ಟದಾಗಿ ಮಾತನಾಡಿದ್ದಾರೆ. ಇದು ನಮಗೆ ಬಹಳ ನೋವಾಗುತ್ತದೆ. ಹೌದು ಭಾರತ ರತ್ನ ಬಾಬಾ ಸಾಹೇಬ್‌ ಡಾ.ಬಿ.ಆರ್.ಅಂಬೇಡ್ಕರ್ ಅವರು ನಮ್ಮ ಪಾಲಿಗೆ ಆರಾಧ್ಯ ದೈವವಾಗಿದ್ದಾರೆ. ಅವರ ಹೆಸರು ಹೇಳುವುದು ನಿಮಗೆ ಫ್ಯಾಷನ್‌ನಂತ ಕಾಣುತ್ತದೆಯೇ. ಈ ಬಿಜೆಪಿಯವರಿಗೆ ಮಾನ ಮರ್ಯಾದೇ ಎನೂ ಇಲ್ಲವೇ ಎಂದು ಶಾಸಕ ಪ್ರದೀಪ್ ಈಶ್ವರ್ ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಗ್ರಾಮ ನಮ್ಮಶಾಸಕ ಕಾರ್ಯಕ್ರಮದದಲ್ಲಿ ಮಂಚೇನಹಳ್ಳಿ ತಾಲೂಕಿನ ಶಾಂಪುರ ಪಂಚಾಯತಿಯ ಮರಿಮಾಕಲಹಳ್ಳಿ,ಬುಡಗ ತಿಮ್ಮನಹಳ್ಳಿ, ಬಿಕ್ಕಲಹಳ್ಳಿ, ಕಾಮರೆಡ್ಡಿಹಳ್ಳಿ ಮತ್ತು ಅಲಾಸ್ತಿತಿಮ್ಮನಹಳ್ಳಿಗಳಲ್ಲಿ ಸಾರ್ವಜನಿಕರ ಅಹವಾಲು ಆಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸ್ಕೃತಿ ಬಗ್ಗೆ, ಭಾರತೀಯತೆಯ ಬಗ್ಗೆ ಏನು ಮಾತನಾಡುತ್ತೀರೋ ಅದನ್ನು ನೀವೇ ಪಾಲಿಸುತ್ತಿಲ್ಲ. ಅದರಲ್ಲೂ ಸಿ.ಟಿ.ರವಿಯವರಿಗಂತೂ ಎನೇನೂ ಇಲ್ಲ ಎಂದರು.

ಕ್ಷೇತ್ರಕ್ಕೆ ₹25 ಕೋಟಿ ಅನುದಾನ

ಮೊದಲ ಬಾರಿಗೆ ಆಯ್ಕೆಯಾದ ಶಾಸಕರಿಗೆ ನೀಡುವ ಅನುದಾನದಲ್ಲಿ ತಮಗೆ 25 ಕೋಟಿ ಅನುದಾನ ನೀಡಿದ್ದು, ಅದನ್ನು ಕ್ಷೇತ್ರದಲ್ಲಿ ಅಭಿವೃದ್ದಿಗೆ ಬಳಕೆ ಮಾಡಿದ್ದೇನೆ. ರಸ್ತೆಗಳ ಅಭಿವೃದ್ದಿಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರನ್ನು ಅನುದಾನ ಕೇಳಿದ್ದೇನೆ. ಅದೇ ರೀತಿ ಅಲ್ಪಸಂಖ್ಯಾತರ ನಿಧಿಯಿಂದ ಸಚಿವ ಜಮೀರ್ ಅಹ್ಮದ್ ರವರು ಐದು ಕೋಟಿ ಅನುದಾನ ನೀಡಿದ್ದು, ಇನ್ನು ಹೆಚ್ಚಿನ ಅನುದಾನ ನೀಡುವ ಭರವಸೆ ನೀಡಿದ್ದಾರೆ. ವಾಲ್ಮಿಕಿ ಭವನ, ಅಂಬೇಡ್ಕರ್ ಭವನಗಳಿಗೆ ಅನುದಾನ ತರುತ್ತಿದ್ದೇನೆ ಎಂದು ಹೇಳಿದರು.

ನಮ್ಮ ಇಚ್ಚಾಶಕ್ತಿ, ಗ್ರಾಮದ ಮುಖಂಡರ, ಜಿಲ್ಲಾಧಿಕಾರಿ ಮತ್ತು ಅಧಿಕಾರಿಗಳ ನೆರವಿನಿಂದ ಗ್ರಾಮದಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ. ಗ್ರಾಮದ ಮುಖಂಡರು, ಜಿಲ್ಲಾಧಿಕಾರಿ ಮತ್ತು ಅಧಿಕಾರಿಗಳ ಮಟ್ಟದಲ್ಲಿ ಮತ್ತು ಸರ್ಕಾರದ ಮಟ್ಟದಲ್ಲಿ ಮಾತನಾಡುತ್ತೇನೆ. ಇದು ಫಲ ನೀಡುತ್ತದೆ ಎಂಬ ನಂಭಿಕೆಯೂ ನನಗೆ ಇದೆ. ಜನತೆಯ ಸಮಸ್ಯೆ ಏನೆಂದು ನಾನು ಬಂದು ಜನತೆಯನ್ನು ಭೇಟಿಯಾಗಿದ್ದರಿಂದ ತಿಳಿಯಿತೇ ಹೋರತು ಬರದೇ ಇದ್ದಿದ್ದರೆ ಹೇಗೆ ತಿಳಿಯುತ್ತಿತ್ತು ಎಂದರು

ಮನೆಗಳಿಗೆ ವಿದ್ಯುತ್‌ ಸಂಪರ್ಕ

ಮಾಕಾಲಹಳ್ಳಿಯ ಆರೇಳು ಮನೆಗಳಿವೆ ವಿದ್ಯುತ್‌ ಸಂಪರ್ಕ ಕಲ್ಪಿಸಿಲ್ಲ. ಅದಕ್ಕೆ ಮೂರು ಲಕ್ಷ ವೆಚ್ಚವಾಗುತ್ತೆ. ಅದನ್ನು ಶಾಸಕರ ಅನುದಾನದಿಂದ ಬಿಡುಗಡೆ ಮಾಡುತ್ತಿದ್ದೇನೆ. ಹದಿನೈದು ದಿನಗಳಲ್ಲಿ ಅಲ್ಲಿ ದೀಪ ಬೆಳಗುತ್ತದೆ. ಅದೇ ರೀತಿ ಹಳ್ಳಿಗಳಲ್ಲಿ ಅಕ್ಕ ಪಕ್ಕದ ಮನೆಗಳ ಮುಂದೆ ರಸ್ತೆ ಕಿರಿದಾಗಿದ್ದರೆ ಪ್ರತಿದಿನ ಗಲಾಟೆಗಳು ಸರ್ವೇಸಾಮಾನ್ಯ ಆಗಿರುತ್ತವೆ. ಶಾಂಪುರ ಗ್ರಾಮ ಪಂಚಾಯತಿಯ ಸಾಕಷ್ಟು ಗ್ರಾಮಗಳಲ್ಲಿ ಇಂತಹ ಸಮಸ್ಯೆ ತಮ್ಮ ಗಮನಕ್ಕೆ ಬಂದಾಗ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿ ಮಾಡಿಸಿವುದಾಗಿ ಭರವಸೆ ನೀಡಿ ಸಮಸ್ಯೆ ಪರಿಹರಿಸಿದ್ದೇನೆ ಎಂದು ಹೇಳಿದರು.

ಈ ವೇಳೆ ಮಂಚೇನಹಳ್ಳಿ ತಹಸೀಲ್ದಾರ್ ದೀಪ್ತಿ, ತಾಪಂ ಇಒ ಹೊನ್ನಯ್ಯ,ಕಂದಾಯ, ಆಹಾರ, ಬೆಸ್ಕಾಂ, ಆರೋಗ್ಯ, ಪೊಲೀಸ್, ತಾಪಂ ಮತ್ತು ಗ್ರಾಪಂ ಅಧಿಕಾರಿಗಳು, ಮುಖಂಡರು ಇದ್ದರು.