ಅಂಬೇಡ್ಕರ್ ಅವರು ಜಗತ್ತಿನ ಮೂಲೆ ಮೂಲೆ ಸಂಚರಿಸಿ ಅಲ್ಲಿಯ ಕಾನೂನನ್ನು ಅಧ್ಯಯನ ಮಾಡಿ ಅಪಾರಜ್ಞಾನ ಸಂಪಾದಿಸಿ ನಮ್ಮ ದೇಶಕ್ಕೆ ಬೇಕಾದ ಮತ್ತು ಜಗತ್ತಿನಲ್ಲಿಯೇ ಅತ್ಯಂತ ವಿಶಾಲವಾದ ಸಂವಿಧಾನ ನೀಡಿದ್ದಾರೆ.

ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿದ ಸಂಸದ

ಕನ್ನಡಪ್ರಭ ವಾರ್ತೆ ಶಿರಸಿ

ಅಂಬೇಡ್ಕರ್ ಜ್ಞಾನ ಇಡೀ ಜಗತ್ತಿಗೆ ಪ್ರೇರಣೆಯಾಗಿದೆ. ಅದಕ್ಕಾಗಿಯೇ ಅಂಬೇಡ್ಕರ್ ಅವರು ಜಗತ್ತಿನ ಮೂಲೆ ಮೂಲೆ ಸಂಚರಿಸಿ ಅಲ್ಲಿಯ ಕಾನೂನನ್ನು ಅಧ್ಯಯನ ಮಾಡಿ ಅಪಾರಜ್ಞಾನ ಸಂಪಾದಿಸಿ ನಮ್ಮ ದೇಶಕ್ಕೆ ಬೇಕಾದ ಮತ್ತು ಜಗತ್ತಿನಲ್ಲಿಯೇ ಅತ್ಯಂತ ವಿಶಾಲವಾದ ಸಂವಿಧಾನ ನೀಡಿದ್ದಾರೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.ಇಲ್ಲಿನ ಬಾಪೂಜಿ ನಗರದಲ್ಲಿರುವ ಅಂಬೇಡ್ಕರ್ ಸಮುದಾಯ ಭವನದಲ್ಲಿ ಮಂಗಳವಾರ ತಾಲೂಕು ಆಡಳಿತ, ತಾಪಂ, ಸಮಾಜ ಕಲ್ಯಾಣ ಇಲಾಖೆ ಶಿರಸಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ 135ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಂಬೇಡ್ಕರ್ ಅಂದರೆ ಒಂದು ಶಕ್ತಿ. ಅದೊಂದು ಪ್ರೇರಣೆ, ಅದೊಂದು ಜ್ಞಾನ, ಅದೊಂದು ದಿವ್ಯ ಜ್ಯೋತಿ. ಅವರೊಬ್ಬ ಸಮಾನತೆ ಹರಿಕಾರ, ಅಲ್ಲದೇ ಅವರು ಈ ಮೊದಲೇ ಮಹಿಳೆಯರಿಗೆ ಶೇ.33 ಮೀಸಲಾತಿ ನೀಡಿದ್ದ ಸಮತಾವಾದಿ ಮತ್ತು ಅವರೊಬ್ಬ ದೂರದೃಷ್ಟಿ ನಾಯಕರಾಗಿದ್ದರು. ರಾಷ್ಟ್ರದ ಉನ್ನತಿಗೆ ಹಗಲಿರುಳು ಶ್ರಮಿಸಿದ ಮಹಾನ್ ನಾಯಕ ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಭೀಮಣ್ಣ ನಾಯ್ಕ್, ಡಾ. ಬಿ.ಆರ್. ಅಂಬೇಡ್ಕರ್ ಉನ್ನತ ಜಾತಿಗಳ ತುಳಿತಕ್ಕೆ ಒಳಗಾಗಿ ಅದರ ವಿರುದ್ಧ ಸಿಡಿದೆದ್ದು ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ನಿಟ್ಟಿನಲ್ಲಿ ಜಗತ್ತಿನಲ್ಲಿ ಅತ್ಯಂತ ವಿಸ್ತಾರವಾದ ಸಂವಿಧಾನವನ್ನು ನಮಗೆ ಅರ್ಪಿಸಿದ ಮಹಾನ್ ಚೇತನ ಎಂದು ಹೇಳಿದರು.

ಶಿಕ್ಷಣ ಯಾರ ಸ್ವತ್ತು ಅಲ್ಲ, ಶಿಕ್ಷಣ ಸರ್ವರ ಸ್ವತ್ತು. ಅದಕ್ಕಾಗಿ ಎಲ್ಲರೂ ಶಿಕ್ಷಣವಂತರಾಗಬೇಕು. ಶಿಕ್ಷಣ ಪ್ರತಿಯೊಬ್ಬರ ಹಕ್ಕು, ಪ್ರತಿಯೊಬ್ಬರು ಶಿಕ್ಷಣ ಕಲಿಯಬೇಕು, ಅಂದಾಗ ಮಾತ್ರ ನಮ್ಮ ದೇಶ ಪ್ರಗತಿಯಾಗಲು ಸಾಧ್ಯ ಎಂದು ಹೇಳಿದ ಮಹಾನ್ ರತ್ನ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಸಿ ಚಂದ್ರಶೇಖರ್ ಆರ್.ಜಿ., ತಹಶೀಲ್ದಾರ್ ಪಟ್ಟ ರಾಜಗೌಡ, ನಗರಸಭೆ ಪೌರಾಯುಕ್ತ ಪ್ರಕಾಶ್ ಚನ್ನಪ್ಪನವರ್, ಡಿಡಿಪಿಐ ಡಿ.ಆರ್. ನಾಯ್ಕ್, ಡಿವೈಎಸ್ಪಿ ಗೀತಾ ಪಾಟೀಲ್, ಶೈಲೇಶ್ ಗಾಂಧಿ, ಬಸವರಾಜ್ ದೊಡ್ಡಮನಿ, ದೀಪಾ ತಳವಾರ್, ವಿನಾಯಕ್ ಸಿ. ನಾಯ್ಕ್, ಸುಭಾಸ್ ಕಾನಡೆ, ಅರ್ಜುನ್ ಮಿಂಟಿ ಸೇರಿದಂತೆ ವಿವಿಧ ಸಂಘಟನೆಯ ಮುಖಂಡರು ಹಾಗೂ ಇಲಾಖೆ ಅಧಿಕಾರಿಗಳು ಇದ್ದರು.