ಧಾರವಾಡ:

ಸಮಾನತೆ, ಸ್ವಾತಂತ್ರ್ಯ ಮತ್ತು ಶಿಕ್ಷಣಕ್ಕಾಗಿ ಹೋರಾಡಿದ ಅಪ್ರತಿಮ ನಾಯಕ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ ಎಂದು ಜೆಎಸ್‌ಎಸ್‌ ಕಾರ್ಯದರ್ಶಿ ಡಾ. ಅಜಿತ್‌ ಪ್ರಸಾದ ಹೇಳಿದರು.

ಇಲ್ಲಿನ ಜನತಾ ಶಿಕ್ಷಣ ಸಮಿತಿಯಲ್ಲಿ ಜೆಎಸ್‌ಎಸ್ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ, ಐಟಿಐ ಕಾಲೇಜು ಮತ್ತು ಎಂಸಿಎ ಕಾಲೇಜು ಆಶ್ರಯದಲ್ಲಿ ನಡೆದ ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಅಂಬೇಡ್ಕರ್‌ ಅವರು ಮಹಾಡ್ ಸತ್ಯಾಗ್ರಹ, ಕಲಾರಾಮ್ ದೇವಾಲಯ ಪ್ರವೇಶ ಚಳವಳಿ ಮೂಲಕ ಅಸ್ಪೃಶ್ಯರ ಹಕ್ಕುಗಳಿಗಾಗಿ ಹೋರಾಡಿದ ಅಂಬೇಡ್ಕರ್‌, ಬಹಿಷ್ಕೃತ ಭಾರತ, ಹಿತಕಾರಿಣಿ ಸಭಾ ಸ್ಥಾಪನೆ ಮತ್ತು ಮೂಕನಾಯಕ ಬಹಿಕೃತ ಭಾರತ ಪತ್ರಿಕೆಗಳ ಮೂಲಕ ದಲಿತರ ಧ್ವನಿಯಾದರು. ಕಾರ್ಮಿಕರ ಕೆಲಸದ ಅವಧಿ ಕಡಿತ, ಹೆರಿಗೆ ರಜೆ ಮತ್ತು ಮಹಿಳಾ ಸಮಾನ ಹಕ್ಕುಗಳಿಗಾಗಿ ಶ್ರಮಿಸಿದರು. ಅಂದಿನ ಅವರ ದೂರದೃಷ್ಟಿಯ ಚಿಂತನೆಗಳು ಇಂದಿಗೂ ನಮಗೆ ದಾರಿದೀಪವಾಗಿವೆ ಎಂದರು.

ಅತಿಥಿ ಅಪನ್ಯಾಸಕರಾಗಿ ಆಗಮಿಸಿದ ಡಾ. ಆರ್.ವಿ. ಚಿಟಗುಪ್ಪಿ, ಅಂಬೇಡ್ಕರ್‌ ಜಾತಿ ಪದ್ಧತಿಯ ಶೋಷಣೆ ಅನುಭವಿಸಿ ಅದನ್ನು ದೇಶದಿಂದ ಕಿತ್ತೊಗೆಯಬೇಕೆಂಬ ಪಣತೊಟ್ಟರು. ಶೋಷಿತರು ಇಂದು ಸಮಾಜದಲ್ಲಿ ಉತ್ತಮ ಜೀವನ ನಡೆಸಲು ಅಂಬೇಡ್ಕರ್‌ ಹೋರಾಟವೇ ಕಾರಣವಾಗಿದೆ. ಶಿಕ್ಷಿತ ಸಮಾಜ ದೇಶದ ಅಭಿವೃದ್ಧಿಗೆ ಪೂರಕವಾಗಬಲ್ಲದು ಎಂಬುದನ್ನು ಅರಿತ ಅವರು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ನೀಡಿದರು ಎಂದು ಹೇಳಿದರು.


ಈ ವೇಳೆ ಪ್ರಾಚಾರ್ಯ ಮಹಾವೀರ ಉಪಾದ್ಯೆ, ಜ್ಯೋತಿ ಅಕ್ಕಿ, ಶ್ರುತಿ ಶೆಟ್ಟಿ, ರೋನಿಲ್ ಮನೋಹರ್, ಶಿಲ್ಪಾ ನಾಯಕ, ಮುರಳಿಧರ್ ಹೆಗಡೆ ಉಪಸ್ಥಿತರಿದ್ದರು.