ಸಾರಾಂಶ
ಬೆಂಗಳೂರಿನಲ್ಲಿ ಇದೇ ತಿಂಗಳ 17ರಂದು ಅಮೆರಿಕ ಕಾನ್ಸುಲೇಟ್ (ದೂತಾವಾಸ) ಕಚೇರಿ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ವಿದೇಶಾಂಗ ಸಚಿವ ಎಸ್.ಜೈ ಶಂಕರ್ಗೆ ಮೈಸೂರ್ ಪಾಕ್ ನೀಡಿ ಧನ್ಯವಾದ ಸಲ್ಲಿಸಿದ್ದಾರೆ.
ನವದೆಹಲಿ: ಬೆಂಗಳೂರಿನಲ್ಲಿ ಇದೇ ತಿಂಗಳ 17ರಂದು ಅಮೆರಿಕ ಕಾನ್ಸುಲೇಟ್ (ದೂತಾವಾಸ) ಕಚೇರಿ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ವಿದೇಶಾಂಗ ಸಚಿವ ಎಸ್.ಜೈ ಶಂಕರ್ಗೆ ಮೈಸೂರ್ ಪಾಕ್ ನೀಡಿ ಧನ್ಯವಾದ ಸಲ್ಲಿಸಿದ್ದಾರೆ.
ದೆಹಲಿಯಲ್ಲಿ ಬುಧವಾರ ವಿದೇಶಾಂಗ ಸಚಿವರನ್ನು ಅವರ ಕಚೇರಿಯಲ್ಲೇ ಭೇಟಿ ಮಾಡಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಜೈಶಂಕರ್ ಅವರನ್ನು ರಾಕ್ಸ್ಟಾರ್ ಎಂದು ಹೊಗಳಿದ್ದಾರೆ.ಭೇಟಿ ಕುರಿತು ತೇಜಸ್ವಿ ಸೂರ್ಯ ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ‘ ಬೆಂಗಳೂರಿನ ಲಕ್ಷಾಂತರ ಜನರ ಪರವಾಗಿ ನಿಮಗೆ ಧನ್ಯವಾದಗಳು. ಪ್ರಧಾನಿ ನರೇಂದ್ರ ಮೋದಿ ಮತ್ತು ನಿಮ್ಮ ಪ್ರಯತ್ನ ಇಲ್ಲದಿದ್ದರೆ ಬೆಂಗಳೂರಿನಲ್ಲಿ ಕಾನ್ಸುಲೇಟ್ ಕಚೇರಿ ಸಾಧ್ಯವಾಗುತ್ತಿರಲಿಲ್ಲ’ ಎಂದು ಶ್ಲಾಘಿಸಿದ್ದಾರೆ.ತೇಜಸ್ವಿ ನೀಡಿದ ಮೈಸೂರ್ ಪಾಕ್ನ್ನು ಖುಷಿಖುಷಿಯಿಂದಲೇ ಸ್ವೀಕರಿಸಿದ ಜೈಶಂಕರ್ ಬೆಂಗಳೂರಿನ ಜೊತೆಗೆ ತಮಗೆ ಭಾವನಾತ್ಮಕ ಸಂಬಂಧವಿರುವುದಾಗಿ ಹೇಳಿಕೊಂಡಿದ್ದಾರೆ. ‘ ಬೆಂಗಳೂರು ಮತ್ತು ಬೆಂಗಳೂರಿನ ಜನರೊಂದಿಗೆ ನನಗೆ ಭಾವನಾತ್ಮಕ ಸಂಬಂಧವಿದೆ. ಅಮೆರಿಕ ಕಾನ್ಸುಲೇಟ್ ಕಚೇರಿ ಆರಂಭವಾಗುತ್ತಿರುವುದಕ್ಕೆ ಮತ್ತು ಕಾರ್ಯಕ್ರಮದಲ್ಲಿ ನಾನು ಖುದ್ದು ಭಾಗಿಯಾಗುವುದಕ್ಕೆ ಉತ್ಸುತಕನಾಗಿದ್ದೇನೆ. ನನಗೆ ಇದು ಅತ್ಯಂತ ಮಹತ್ವದ ಹೆಜ್ಜೆ. ಬೆಂಗಳೂರಿನ ಜನ ಈ ಕ್ಷಣಕ್ಕಾಗಿ ಹಲವು ವರ್ಷಗಳಿಂದ ಕಾಯುತ್ತಿದ್ದರು. 2023ರಲ್ಲಿ ಮೋದಿ ಅಮೆರಿಕ ಭೇಟಿ ಸಂದರ್ಭದಲ್ಲಿ ಈ ಮಹತ್ವದ ಯೋಜನೆಯ ಬಗ್ಗೆ ಮಾತುಕತೆ ನಡೆದಿತ್ತು’ ಎಂದಿದ್ದಾರೆ.