ಸಾರಾಂಶ
ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಬೀದಿ ನಾಯಿಗಳಿಗೆ ಚಿಕನ್ ರೈಸ್ ನೀಡುವ ಬಿಬಿಎಂಪಿಯ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದರೂ ಚಿಕನ್ ರೈಸ್ ಪೂರೈಸುವ ಸಂಬಂಧ ಆಹ್ವಾನಿಸಲಾಗಿದ್ದ ಟೆಂಡರ್ ಸಲ್ಲಿಕೆ ಅವಧಿಯನ್ನು ಆ.2ರ ವರೆಗೆ ವಿಸ್ತರಿಸಲಾಗಿದೆ.
ನಗರದಲ್ಲಿರುವ 2.79 ಲಕ್ಷ ಬೀದಿ ನಾಯಿಗಳ ಪೈಕಿ ಸುಮಾರು 5 ಸಾವಿರ ಬೀದಿ ನಾಯಿಗಳಿಗೆ ದಿನಕ್ಕೆ 22.42 ರು. ವೆಚ್ಚದಲ್ಲಿ ಚಿಕನ್ ರೈಸ್ ಹಾಕಲು ಒಂದು ವರ್ಷಕ್ಕೆ 2.88 ಕೋಟಿ ರು. ವೆಚ್ಚದಲ್ಲಿ ಜು.4 ರಂದು ಟೆಂಡರ್ ಆಹ್ವಾನಿಸಿತ್ತು. ಜು.18ರ ವರೆಗೆ ಟೆಂಡರ್ ಬಿಡ್ ಮಾಡಲು ಕಾಲಾವಕಾಶ ನೀಡಲಾಗಿತ್ತು. ಇದೀಗ ಈ ಅವಧಿಯನ್ನು ಆ.2ರ ವರೆಗೆ ವಿಸ್ತರಿಸಿದ್ದು, ಆ.3 ರಂದು ಟೆಂಡರ್ ತೆರೆಯಲು ತೀರ್ಮಾನಿಸಲಾಗಿದೆ.
ಈ ಕುರಿತು ವಿತರಣೆ ನೀಡಿದ ಬಿಬಿಎಂಪಿಯ ಪಶುಪಾಲನೆ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್, ಟೆಂಡರ್ ಕುರಿತು ಗುತ್ತಿಗೆದಾರರೊಂದಿಗೆ ನಡೆಸಲಾದ ಪೂರ್ವಭಾವಿ ಸಭೆಯಲ್ಲಿ ಟೆಂಡರ್ನಲ್ಲಿ ಭಾಗವಹಿಸಲು ಕಾಲಾವಕಾಶ ವಿಸ್ತರಿಸುವಂತೆ ಮಾಡಿದ್ದ ಮನವಿ ಪರಿಗಣಿಸಿ ಅವಧಿ ವಿಸ್ತರಿಸಲಾಗಿದೆ ಎಂದು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
ಭಾರೀ ವಿರೋಧ ನಡುವೆ ಟೆಂಡರ್ ಪ್ರಕ್ರಿಯೆ
ಬಿಬಿಎಂಪಿಯಿಂದ ಬೀದಿ ನಾಯಿಗಳಿಗೆ ಚಿಕನ್ ರೈಸ್ ಹಾಕುವುದಕ್ಕೆ ಸಂಬಂಧಿಸಿದಂತೆ ‘ಕನ್ನಡಪ್ರಭ’ ವಿಶೇಷ ವರದಿ ಪ್ರಕಟಿಸಿದ ಬಳಿಕ ಯೋಜನೆಗೆ ರಾಷ್ಟ್ರಮಟ್ಟದಲ್ಲಿ ವಿರೋಧ ವ್ಯಕ್ತವಾಗಿತ್ತು. ಕೇಂದ್ರದ ಮಾಜಿ ಹಣಕಾಸು ಸಚಿವ ಚಿದಂಬರಂ ಪುತ್ರ ಹಾಗೂ ತಮಿಳುನಾಡಿನ ಸಂಸದ ಕಾರ್ತಿ ಚಿದಂಬರಂ ಸೇರಿದಂತೆ ಅನೇಕ ಗಣ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಸರ್ಕಾರ ಹಾಗೂ ಬಿಬಿಎಂಪಿಯ ವಿರುದ್ಧ ತರಹೇವಾರಿ ಟೀಕೆಗಳು ವ್ಯಕ್ತವಾಗಿದ್ದವು. ಈ ಯಾವುದನ್ನು ಪರಿಗಣಿಸದ ಬಿಬಿಎಂಪಿಯ ಅಧಿಕಾರಿಗಳು ಪ್ರತಿಷ್ಠೆಗೆ ತೆಗೆದುಕೊಂಡು ಬೀದಿ ನಾಯಿಗಳಿಗೆ ಚಿಕನ್ ರೈಸ್ ಹಾಕುವ ಯೋಜನೆ ಮುಂದುವರಿಸಿರುವುದು ಮತ್ತೆ ಭಾರೀ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ.
ಬೆಂಗಳೂರಿನಲ್ಲಿ ಪ್ರತಿ ದಿನ ಬೀದಿ ನಾಯಿಗಳು ಕಚ್ಚಿದ ಪ್ರಕರಣ ದಾಖಲಾಗುತ್ತಿವೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ಗಮನ ಹರಿಸಬೇಕಾದ ಬಿಬಿಎಂಪಿಯ ಅಧಿಕಾರಿಗಳು ಎನ್ಜಿಒಗಳೊಂದಿಗೆ ಸೇರಿಕೊಂಡು ಬೀದಿ ನಾಯಿಗಳಿಗೆ ಚಿಕನ್ ರೈಸ್ ಹಾಕುವುದಕ್ಕೆ ಮುಂದಾಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಇಂತಹ ಯೋಜನೆಗಳಿಗೆ ಸರ್ಕಾರ ಕಡಿವಾಣ ಹಾಕಬೇಕಿದೆ.
- ಮೇಘನಾ, ಗೃಹಿಣಿ, ಶ್ರೀರಾಮಪುರ