ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಡಾ.ಮಾಲತಿ ಶೆಟ್ಟಿ ಮಾಣೂರು ಸಾರಥ್ಯದ ಅಮೃತ ಪ್ರಕಾಶ ಪತ್ರಿಕೆ 11ನೇ ವರ್ಷದ ಸಂಭ್ರಮದ ವಿಶೇಷ ಸಂಚಿಕೆಯನ್ನು ಬಂಟ್ವಾಳ ಎಸ್.ವಿ.ಎಸ್. ದೇವಳ ಕಾಲೇಜು ಪ್ರಾಂಶುಪಾಲ ಕೆ.ಎನ್. ಗಂಗಾಧರ್ ಆಳ್ವ ನಗರದ ಪ್ರೆಸ್ಕ್ಲಬ್ನಲ್ಲಿ ಸೋಮವಾರ ಬಿಡುಗಡೆಗೊಳಿಸಿದರು.ಬಳಿಕ ಮಾತಾಡಿದ ಅವರು, ನಮ್ಮ ಸಂಸ್ಥೆಯ ವಿದ್ಯಾರ್ಥಿ ಆಗಿದ್ದಾಗಲೇ ಸಾಹಿತ್ಯ ಅಭಿರುಚಿ ಬೆಳೆಸಿಕೊಂಡಿದ್ದ ಮಾಲತಿ ಶೆಟ್ಟಿ ಅವರು ಜಾಗತೀಕರಣದ ಈ ವೇಳೆಯಲ್ಲೂ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ. ಶಾಲೆ ಕಾಲೇಜುಗಳಲ್ಲಿ ಕನ್ನಡ ಭಾಷೆ ಉಳಿವಿಗಾಗಿ ಪ್ರಯತ್ನ ಪಟ್ಟಾಗ ಮಾತ್ರ ಕನ್ನಡಕ್ಕೆ ಸ್ಥಾನಮಾನ, ಗೌರವ ಪ್ರಾಪ್ತಿಯಾಗಲಿದೆ. ಕಳೆದ 10 ವರ್ಷಗಳಲ್ಲಿ 40 ಪುಸ್ತಕ ಬಿಡುಗಡೆ, 101 ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಅವರು ಕನ್ನಡ ಭಾಷೆ ಉಳಿವಿಗೆ ಮಹತ್ತರ ಕಾಣಿಕೆ ನೀಡಿದ್ದಾರೆ ಎಂದರು. ಕಿನ್ನಿಗೋಳಿ ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ ಮಾತನಾಡಿ, ಕನ್ನಡ ಭಾಷೆ ಬೆಳವಣಿಗೆಗೆ ವಿವಿಧ ರೀತಿಯ ಸಾಹಿತ್ಯಪರ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿರುವ ಮಾಲತಿ ಶೆಟ್ಟಿ ಮತ್ತವರ ತಂಡಕ್ಕೆ ಅಭಿನಂದನೆಗಳು ಎಂದರು. ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ, ಕನ್ನಡವನ್ನು ನಾವೇ ಉಳಿಸಬೇಕು. ಯಾಕೆಂದರೆ ಎಷ್ಟೋ ಶಾಲೆಗಳು ಮುಚ್ಚುವ ಹಂತದಲ್ಲಿವೆ, ಶಿಕ್ಷಕರಿಗೆ ಸಂಬಳ ಸಿಗುತ್ತಿಲ್ಲ. ನಾವು ಭಾಷೆಯನ್ನು ಉಳಿಸಿ ಬೆಳೆಸಲು ನಿರಂತರ ಪ್ರಯತ್ನಿಸಬೇಕು ಎಂದರು. ಅಮೃತ ಪ್ರಕಾಶನ ಪತ್ರಿಕೆ ಸಂಪಾದಕಿ ಮಾಲತಿ ಶೆಟ್ಟಿ ಮಾಣೂರು, ಸಂಪಾದಕ ಮಂಡಳಿ ಸದಸ್ಯ ಸತ್ಯಪ್ರಕಾಶ್ ಶೆಟ್ಟಿ, ಸಾಹಿತಿಗಳಾದ ಡಾ.ಅರುಣಾ ನಾಗರಾಜ್, ಸುರೇಖಾ ಯಳವಾರ ಇದ್ದರು.