ಸಾರಾಂಶ
ದಾಬಸ್ಪೇಟೆ : ನಿಂತಿದ್ದ ಮಹಿಳೆಯೊಬ್ಬರ ಮೇಲೆ ವಿದ್ಯುತ್ ತಂತಿ ಬಿದ್ದು ಸ್ಥಳದಲ್ಲೇ ಸಜೀವ ದಹನಗೊಂಡಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಚಿಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಚಿಕ್ಕನಹಳ್ಳಿ ಗ್ರಾಮದ ಮಂಜಮ್ಮ(50) ಮೃತಪಟ್ಟ ಮಹಿಳೆ. ಇವರು ಅ.7ರಂದು ಸೋಮವಾರ ಬೆಳಿಗ್ಗೆ 10 ಗಂಟೆಯಲ್ಲಿ ಚಿಕ್ಕನಹಳ್ಳಿ ಗ್ರಾಮದ ಸೋಮಣ್ಣನವರ ಮನೆಯ ಮುಂದೆ ರಸ್ತೆಯಲ್ಲಿ ನಿಂತು ಮತ್ತೋರ್ವ ಮಹಿಳೆ ಜೊತೆ ಮಾತನಾಡುವ ವೇಳೆ ವಿದ್ಯುತ್ ಕಂಬದಿಂದ 11 ಕೆವಿ ವಿದ್ಯುತ್ ತಂತಿ ತುಂಡಾಗಿ ಮಂಜಮ್ಮನ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಹರಿದು ಬೆಂಕಿ ಹತ್ತಿಕೊಂಡು ಸುಟ್ಟುಗಾಯಗಳಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಿದ್ಯುತ್ ತಂತಿ ಮಂಜಮ್ಮ ಮೇಲೆ ಬೀಳುತ್ತಿದ್ದಂತೆ ಜೊತೆಯಲ್ಲಿದ್ದವರು ಓಡಿ ಹೋಗಿದ್ದು ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಜಮ್ಮನನ್ನು ಉಳಿಸಲು ಹೋದ ಮತ್ತೋರ್ವ ಮಹಿಳೆಗೂ ವಿದ್ಯುತ್ ಶಾಕ್ ಹೊಡೆದಿದ್ದು, ಬೇರೆಯವರು ಬಂದು ಅವರನ್ನು ಎಳೆದುಕೊಂಡು ಹೋಗಿ ಪ್ರಾಣ ಉಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ವಿದ್ಯುತ್ ನಲ್ಲಿನ ಬೆಂಕಿ ಮೃತದೇಹಕ್ಕೆ ಹತ್ತಿಕೊಂಡು ಉರಿಯುತ್ತಿದ್ದಾಗ ಸ್ಥಳೀಯರು ನೀರು ಹಾಕಿ ಬೆಂಕಿ ನಂದಿಸಿದ್ದಾರೆ. ಬೆಂಕಿ ನಂದಿಸುವವಷ್ಟರಲ್ಲಿ ಮಂಜಮ್ಮನ ದೇಹ ಸಂಪೂರ್ಣ ಸುಟ್ಟು ಕರಕಲಾಗಿದೆ. ಈ ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೃತದೇಹವನ್ನು ಆರ್ಆರ್ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಮೃತ ಮಂಜಮ್ಮ ಪತಿ, ಒಂದು ಗಂಡು, ಒಂದು ಹೆಣ್ಣು ಮಗಳನ್ನು ಅಗಲಿದ್ದಾರೆ. ಈ ಸಂಬಂಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.