ಸುಭದ್ರ ದೇಶ ಕಟ್ಟುವ ವಾತಾವರಣವನ್ನು ಕಟ್ಟಿಕೊಡಬೇಕಿದೆ: ಜಯಕುಮಾರಿ

| Published : Apr 02 2024, 01:01 AM IST

ಸಾರಾಂಶ

ಮಕ್ಕಳಿಗೆ ಮಾನವೀಯ ಸಂಬಂಧಗಳು ಮೌಲ್ಯಗಳನ್ನು ಪ್ರೀತಿಸಿ, ಗೌರವಿಸುವಂತಹ ಗುಣಗಳನ್ನು ಬೆಳೆಸಬೇಕಾಗಿದೆ. ಹಿಂದಿನ ಅವಿಭಾಜ್ಯ ಕುಟುಂಬಗಳಲ್ಲಿ ಎಲ್ಲರು ಒಟ್ಟಾಗಿ ವಾಸಿಸುತ್ತಿದ್ದರು, ಆ ದಿನಗಳಲ್ಲಿ ಧ್ವೇಷ, ಅಸೂಹೆ ಕಡಿಮೆ ಇತ್ತು. ಜನರಲ್ಲಿ ಮಾನವೀಯ ಮೌಲ್ಯಗಳನ್ನು ಕಾಣಬಹುದಾಗಿತ್ತು. ಇದೀಗ ವಿಭಕ್ತ ಕುಟುಂಬಗಳಾಗಿರುವುದರಿಂದ ಜನರಲ್ಲಿ ಮೌಲ್ಯಗಳ ಕೊರತೆ ಹೆಚ್ಚಾಗಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಮಕ್ಕಳಿಗೆ ಮೌಲ್ಯಯುತ, ಗುಣಮಟ್ಟ ಶಿಕ್ಷಣ ನೀಡುವ ಮೂಲಕ ಸುಭದ್ರ ದೇಶ ಕಟ್ಟುವಂತಹ ವಾತಾವರಣವನ್ನು ದೇಶದ ಮುಂದಿನ ಪೀಳಿಗೆಗೆ ಕಟ್ಟಿಕೊಡಬೇಕಿದೆ ಎಂದು ಮಹಾಜನ ಕಾಲೇಜಿನ ಪ್ರಾಂಶುಪಾಲೆ ಡಾ.ಬಿ.ಆರ್.ಜಯಕುಮಾರಿ ಹೇಳಿದರು.

ತಾಲೂಕಿನ ದೊಡ್ಡಬ್ಯಾಡರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಿಂದ ನಡೆದ ಮಾನವ ಹಕ್ಕುಗಳು ಮತ್ತು ದುರ್ಬಲ ಗುಂಪುಗಳ ಹಕ್ಕುಗಳು ಕಾರ್‍ಯಗಾರದಲ್ಲಿ ಮಾತನಾಡಿದರು.

ಮಕ್ಕಳಿಗೆ ಮಾನವೀಯ ಸಂಬಂಧಗಳು ಮೌಲ್ಯಗಳನ್ನು ಪ್ರೀತಿಸಿ, ಗೌರವಿಸುವಂತಹ ಗುಣಗಳನ್ನು ಬೆಳೆಸಬೇಕಾಗಿದೆ. ಹಿಂದಿನ ಅವಿಭಾಜ್ಯ ಕುಟುಂಬಗಳಲ್ಲಿ ಎಲ್ಲರು ಒಟ್ಟಾಗಿ ವಾಸಿಸುತ್ತಿದ್ದರು, ಆ ದಿನಗಳಲ್ಲಿ ಧ್ವೇಷ, ಅಸೂಹೆ ಕಡಿಮೆ ಇತ್ತು. ಜನರಲ್ಲಿ ಮಾನವೀಯ ಮೌಲ್ಯಗಳನ್ನು ಕಾಣಬಹುದಾಗಿತ್ತು. ಇದೀಗ ವಿಭಕ್ತ ಕುಟುಂಬಗಳಾಗಿರುವುದರಿಂದ ಜನರಲ್ಲಿ ಮೌಲ್ಯಗಳ ಕೊರತೆ ಹೆಚ್ಚಾಗಿದೆ ಎಂದು ವಿಷಾದಿಸಿದರು.

ಹಿರಿಯ ವಕೀಲ ಜೆರಾಲ್ಡ್ ಕ್ಯಾಸ್ಟ್ರೋಲಿನೊ ಮಾತನಾಡಿ, ಕಾನೂನು ಎನ್ನುವುದು ಸಾಮಾನ್ಯ ಜ್ಞಾನ. ನಾವುಗಳು ಗೊತ್ತಿಲ್ಲದೆ ಮಾಡಿದ ತಪ್ಪಿಗೆ ಕ್ಷಮೆ ಇರುವುದಿಲ್ಲ. ಕಾನೂನನ್ನು ಮೀರಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮಾನವ ಹಕ್ಕುಗಳು ನೈಸರ್ಗಿಕವಾಗಿ ಬಂದಿದೆ. ಸಕಲ ಜೀವರಾಶಿಗಳಿಗೂ ಸಮಾಜದಲ್ಲಿ ಬದುಕುವ ಹಕ್ಕಿದೆ ಎಂದರು.

ಶಾರದಾ ವಿಲಾಸ ಕಾನೂನು ಕಾಲೇಜಿನ ಪ್ರಾಂಶುಪಾಲೆ ವಾಣಿ ಮಾತನಾಡಿ, ಹೆಣ್ಣು ಭ್ರೂಣ ಹತ್ಯೆ, ವರದಕ್ಷಣೆ, ಬಾಲ್ಯವಿವಾಹ, ಅತ್ಯಾಚಾರ, ಶೋಷಣೆ, ಎನ್ನುವುದು ಇಂದಿಗೂ ನಾಗರೀಕ ಸಮಾಜದಲ್ಲಿ ಜೀವಂತವಾಗಿರುವುದು ನಾವೆಲ್ಲರು ತಲೆತಗ್ಗಿಸುವಂತಹ ವಿಚಾರವಾಗಿದೆ ಬೇಸರ ವ್ಯಕ್ತಪಡಿಸಿದರು.

ವಕೀಲ ಹರೀಶ್‌ಗೌಡ ಮಾತನಾಡಿದರು. ಈ ವೇಳೆ ಶಿಕ್ಷಣ ಚಿಂತಕ ರಾಮನಾಥ್, ಗ್ರಾಪಂ ಅಧ್ಯಕ್ಷ ಶಂಕರ್, ಮಹಾಜನ ಕಾಲೇಜಿನ ಕನ್ನಡ ಮುಖ್ಯಸ್ಥ ಡಾ.ಎಚ್.ಆರ್.ತಿಮ್ಮೇಗೌಡ, ಸಾಹಿತಿ ಚಂದ್ರಶೇಖರಯ್ಯ, ಪ್ರಾಧ್ಯಾಪಕ ದೊಡ್ಡನರಸಯ್ಯ, ಕನಗನಮರಡಿ ರಾಮೇಗೌಡ, ಎಸ್.ಡಿ.ಎಂ.ಸಿ ಅಧ್ಯಕ್ಷೆ ಲಾವಣ್ಯ, ಸದಸ್ಯರಾದ ನರಸಿಂಹೇಗೌಡ, ಗಿರೀಶ್, ಲಿಂಗರಾಜು, ಕೃಷ್ಣ, ರಾಣಿ, ಕಲಾವಿದ ಅಮಿತ್‌ಕೃಷ್ಣ, ಶಿಕ್ಷಕ ಜಯರಾಮು ಮಾಣಿಕ್ಯನಹಳ್ಳಿ, ಉಪನ್ಯಾಸಕರಾದ ಕುಮಾರ್ ಬೀರಶೆಟ್ಟಹಳ್ಳಿ, ವಿವೇಕ್, ಶಾಲೆ ಮುಖ್ಯ ಶಿಕ್ಷಕ ಪ.ಮ.ನಂಜುಂಡಸ್ವಾಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.